ನಿರ್ಭಯಾ ಹಂತಕರ ಪರ ವಕೀಲರಿಂದ ಹತ್ರಾಸ್ ಆರೋಪಿಗಳ ಪರ ವಕಾಲತ್ತು
ನವದೆಹಲಿ, ಅಕ್ಟೋಬರ್ 05: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಹಂತಕರ ಪರ ವಾದಿಸಿದ್ದ ವಕೀಲರೀಗ ಹತ್ರಾಸ್ ಆರೋಪಿಗಳ ಪರ ವಕಾಲತ್ತು ವಹಿಸಲಿದ್ದಾರೆ.
ನಿರ್ಭಯಾ ಹಂತಕರ ಪರ ವಾದಿಸಿ ಸೋತಿದ್ದ, ವಕೀಲ ಎಪಿ ಸಿಂಗ್ ಇದೀಗ ಹತ್ರಾಸ್ ಸಾಮೂಹಿಕ ಅತ್ಯಾಚಾರದ ನಾಲ್ವರು ಆರೋಪಿಗಳ ಪರ ವಾದ ಮಂಡಿಸಲಿದ್ದಾರೆ.
ಹತ್ರಾಸ್ ಆರೋಪಿಗಳ ಪರವಾಗಿ ವಕಾಲತ್ತು ವಹಿಸಲು ಎಪಿ ಸಿಂಗ್ ಅವರನ್ನು ಮೇಲ್ಜಾತಿಯ ಗುಂಪು ಅಖಿಲ್ ಭಾರತೀಯ ಕ್ಷತ್ರಿಯ ಮಹಾಸಭಾ ನೇಮಕ ಮಾಡಿದೆ. ವಿಚಾರಣೆ ಸ್ಥಳವನ್ನು ಉತ್ತರ ಪ್ರದೇಶದಿಂದ ದೆಹಲಿಗೆ ಬದಲಾಯಿಸುವಂತೆಯೂ ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಾಧೀಶ ಎಸ್. ಬೊಬ್ಡೆ ನೇತೃತ್ವದ ನ್ಯಾಯಪೀಠ ನಾಳೆ ಕೈಗೆ ತೆಗೆದುಕೊಳ್ಳಲಿದೆ.
ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹತ್ರಾಸ್ ಎನ್ನುವ ಪ್ರದೇಶದಲ್ಲಿ 20 ವರ್ಷದ ದಲಿತ ಹೆಣ್ಣುಮಗಳ ಮೇಲೆ ಅತ್ಯಾಚಾರ ನಡೆದಿತ್ತು. ಬಳಿಕ ಆಸ್ಪತ್ರೆಗೆ ಸೇರಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಆದರೆ ಆಕೆಯ ಅಂತ್ಯಕ್ರಿಯೆಯನ್ನೂ ಮನೆಯವರಿಗೆ ಮಾಡಲು ಬಿಡದೆ ಅವರನ್ನು ದೂರವೇ ಇಟ್ಟು ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿ ಇದೀಗ ದೇಶದೆಲ್ಲೆಡೆ ಪ್ರತಿಭಟನೆ ಆರಂಭವಾಗಿದೆ.












Click it and Unblock the Notifications