ಶ್ರೀಮಂತರ ಜೇಬಿಗೆ ಬೆಂಕಿ ಹಚ್ಚಲಿದೆ ಅಡುಗೆ ಅನಿಲ!
ನವ ದೆಹಲಿ, ನ. 22: ಶ್ರೀಮಂತರು ಇನ್ನು ಮುಂದೆ ಅಡುಗೆ ಅನಿಲಕ್ಕೆ ಸಬ್ಸಿಡಿ ಕಳೆದುಕೊಳ್ಳಲಿದ್ದಾರೆಯೇ? ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ ಮಾತು ಈ ಅನುಮಾನ ಹುಟ್ಟಿಸಿದೆ.
ನವದೆಹಲಿಯಲ್ಲಿ ಹಿಂದುಸ್ತಾನ ಟೈಮ್ಸ್ ಪತ್ರಿಕೆ ಹಮ್ಮಿಕೊಂಡಿದ್ದ ನಾಯಕತ್ವ ಸಮಾವೇಷದಲ್ಲಿ ಮಾತನಾಡಿದ ಅರುಣ್ ಜೇಟ್ಲಿ, ದೇಶದಲ್ಲಿ ಮುಂದಿನ ಮಹತ್ವದ ನಿರ್ಧಾರವನ್ನು ಅಡುಗೆ ಅನಿಲ ಕುರಿತು ತೆಗೆದುಕೊಳ್ಳುವ ಯೋಚನೆ ಇದೆ. ನನ್ನಂತಹ ಶ್ರೀಮಂತರಿಗೆ ಅಡುಗೆ ಅನಿಲ ಸಬ್ಸಿಡಿ ನೀಡಬೇಕೆ ಬೇಡವೇ ಎಂಬುದನ್ನು ಶೀಘ್ರ ನಿರ್ಣಯಿಸಲಾಗುವುದು ಎಂದು ತಿಳಿಸಿದ್ದರು. ಅವರ ಹೇಳಿಕೆ ಈಗ ದೇಶದಲ್ಲಿ ಚರ್ಚೆಗೆ ಕಾರಣವಾಗಿದೆ. [ಅಡುಗೆ ಅನಿಲ ದರ ಏರಿಕೆ]
ಸಚಿವರು ಈ ಆದೇಶ ಕುರಿತು ಯಾವ ಮಾನದಂಡ ಅನುಸರಿಸಲಿದ್ದಾರೆ ಎಂಬುದನ್ನು ಇನ್ನೂ ತಿಳಿಸದ ಕಾರಣ ದೇಶದ ನಾಗರಿಕರಲ್ಲಿ ಆತಂಕ ಶುರುವಾಗಿದೆ. ಆದೇಶ ಜಾರಿಯಾದಲ್ಲಿ ಪ್ರಸ್ತುತ 422 ರೂ.ಗಳಿಗೆ ಸಿಗುತ್ತಿರುವ 14.2 ಕೆಜಿ ಗ್ಯಾಸ್ ಸಿಲಿಂಡರ್ 800 ರೂ.ಗಿಂತ ಹೆಚ್ಚಾಗಲಿದೆ.
ಹಿಂದಿನ ಸರ್ಕಾರದಲ್ಲೇ ಯೋಚನೆ: ಕೇಂದ್ರ ಸರ್ಕಾರ ಪ್ರತಿ ವರ್ಷ ನೀಡುತ್ತಿರುವ ಸಬ್ಸಿಡಿ ಮೊತ್ತ ನೋಡಿ ನನಗೆ ದಿಗಿಲಾಗಿದೆ ಎಂದು ಪ್ರಣಬ್ ಮುಖರ್ಜಿ ಅವರು ಕೇಂದ್ರ ಅರ್ಥ ಸಚಿವರಾಗಿದ್ದಾಗ ಹೇಳಿದ್ದರು. ನನ್ನಂತಹ ಪ್ಯಾನ್ ಕಾರ್ಡ್ ಹೊಂದಿರುವ ಶ್ರೀಮಂತನಿಗೆ ಅಡುಗೆ ಅನಿಲಕ್ಕೆ ಸಬ್ಸಿಡಿ ಏಕೆ ಬೇಕೆಂದು ಪಿ. ಚಿದಂಬರಂ ತಾವು ಅರ್ಥ ಸಚಿವರಾಗಿದ್ದಾಗ ಕೇಳಿದ್ದರು. ಆದರೆ, ವಿವಿಧ ಹಗರಣಗಳಿಂದ ಕಂಗೆಟ್ಟಿದ್ದ ಯುಪಿಎ ಸರ್ಕಾರ, ಅಡುಗೆ ಅನಿಲ ಸಬ್ಸಿಡಿ ಕಡಿತಗೊಳಿಸಿದರೆ ಮತ್ತಷ್ಟು ಜನವಿರೋಧ ವ್ಯಕ್ತವಾಗುವ ಭಯದಿಂದ ಧೈರ್ಯ ತೋರಿರಲಿಲ್ಲ. [ಸಬ್ಸಿಡಿ ರಹಿತ ಎಲ್ ಪಿಜಿ ದರ ಏರಿಕೆ]
ಈ ನಿಟ್ಟಿನಲ್ಲಿ ಧೈರ್ಯವಾಗಿ ಹೆಜ್ಜೆ ಮುಂದಿಟ್ಟಿದ್ದ ಎನ್ಡಿಎ ಸರ್ಕಾರ, ಸ್ವ ಇಚ್ಛೆಯಿಂದ ಸಬ್ಸಿಡಿ ರಹಿತ ಸಿಲಿಂಡರ್ ಪಡೆಯಲು ನಾಗರಿಕರಲ್ಲಿ ಕೋರಿತ್ತು. ಆದರೆ, ಇದಕ್ಕೆ ನಿರೀಕ್ಷಿತ ಬೆಂಬಲ ಸಿಕ್ಕಿರಲಿಲ್ಲ. ದೇಶದಲ್ಲಿ 15 ಕೋಟಿ ಗ್ರಾಹಕರು ಎಲ್ಪಿಜಿ ಸಂಪರ್ಕ ಪಡೆದಿದ್ದು, ಕೇವಲ ಶೇ. 0.006 ರಷ್ಟು (8,868 ಜನ) ಮಾತ್ರ ಸ್ವ ಇಚ್ಛೆಯಿಂದ ಸಬ್ಸಿಡಿ ಬೇಡ ಎಂದು ಹೇಳಿದ್ದರು. [ಹೊಸ ಎಲ್ ಪಿಜಿ ಸಂಪರ್ಕ ಪಡೆಯುವುದು ಹೇಗೆ?]
ಭಾರತದಲ್ಲಿ ಅಧಿಕೃತ ಅಂಕಿ ಅಂಶಗಳ ಪ್ರಕಾರವೇ 42,800ರಷ್ಟು ಕೋಟ್ಯಧಿಪತಿಗಳಿದ್ದಾರೆ. ದೇಶದಲ್ಲಿರುವ ಕೋಟ್ಯಧೀಶರ ಸಂಖ್ಯೆಯನ್ನು ಪರಿಗಣಿಸಿದಾಗ ಸಬ್ಸಿಡಿ ಬೇಡವೆಂದವರ ಸಂಖ್ಯೆ ಶೇ. 25ಕ್ಕಿಂತ ಕಡಿಮೆ. ಈ ಹಿನ್ನೆಲೆಯಲ್ಲಿ ಸರ್ಕಾರ ಶ್ರೀಮಂತರಿಗೆ ಸಬ್ಸಿಡಿ ಕಡಿತಗೊಳಿಸಲು ಯೋಚಿಸುತ್ತಿದೆ.