ನಿವೃತ್ತಿಯ ದಿನವೇ ಕೆಲಸಕ್ಕೆ ಸೇರಿಕೊಳ್ಳುವಂತೆ ವರ್ಮಾಗೆ ಸೂಚನೆ!
ನವದೆಹಲಿ, ಜನವರಿ 31: ಸಿಬಿಐ ನಿರ್ದೇಶಕರ ಹುದ್ದೆಯಿಂದ ತಮ್ಮನ್ನು ಎತ್ತಂಗಡಿ ಮಾಡಿದ ಬಳಿಕ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದ ಅಲೋಕ್ ವರ್ಮಾ ಅವರಿಗೆ ತಮ್ಮನ್ನು ವರ್ಗಾಯಿಸಲಾಗಿದ್ದ ಹುದ್ದೆಯಲ್ಲಿ ಒಂದು ದಿನದ ಮಟ್ಟಿಗೆ ಕೆಲಸ ಮಾಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ವಿವಿಧ ವಿವಾದಗಳಲ್ಲಿ ಸಿಲುಕಿದ್ದ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ಅಗ್ನಿಶಾಮಕ, ನಾಗರಿಕ ರಕ್ಷಣೆ ಮತ್ತು ಗೃಹರಕ್ಷಕ ದಳದ ಮಹಾ ನಿರ್ದೇಶಕರನ್ನಾಗಿ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರತಿಭಟಿಸಿದ್ದ ಅಲೋಕ್ ವರ್ಮಾ ತಮ್ಮ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಅವರ ರಾಜೀನಾಮೆಯನ್ನು ತಿರಸ್ಕರಿಸಿರುವ ಗೃಹ ಸಚಿವಾಲಯ, ಕೆಲಸಕ್ಕೆ ಸೇರಿಕೊಳ್ಳುವಂತೆ ಸೂಚಿಸಿದೆ. ಆದರೆ, ಅದು ಕೇವಲ ಒಂದು ದಿನದ ಅವಧಿಗೆ. ಏಕೆಂದರೆ ಅಲೋಕ್ ವರ್ಮಾ ಅವರು ಜನವರಿ 31ರಂದು ನಿವೃತ್ತರಾಗಲಿದ್ದು, ಈ ದಿನವೇ ಕೆಲಸಕ್ಕೆ ಸೇರಿಕೊಳ್ಳುವಂತೆ ಸೂಚಿಸಲಾಗಿದೆ.

ಕೇಂದ್ರ ತನಿಖಾ ದಳದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಲೋಕ್ ವರ್ಮಾ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳಿಸಿತ್ತು.
ಕೇಂದ್ರ ಸರ್ಕಾರದ ಈ ನಿರ್ಣಯವನ್ನು ಪ್ರಶ್ನಿಸಿ ಅಲೋಕ್ ವರ್ಮಾ ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಇದರಲ್ಲಿ ಸುಪ್ರೀಂಕೋರ್ಟ್ ಅಲೋಕ್ ವರ್ಮಾ ಪರ ತೀರ್ಪು ನೀಡಿತ್ತು. ಷರತ್ತುಗಳೊಂದಿಗೆ ಸಿಬಿಐ ನಿರ್ದೇಶಕರಾಗಿ ಮರಳಿದ್ದ ಅಲೋಕ್ ವರ್ಮಾ ಅವರನ್ನು ಕೆಲವೇ ದಿನಗಳಲ್ಲಿ ಸಿಬಿಐ ಮುಖ್ಯಸ್ಥರ ಆಯ್ಕೆ ಸಮಿತಿ ವಜಾಗೊಳಿಸಿತ್ತು. ಅವರನ್ನು ಅಗ್ನಿಶಾಮಕ ದಳದ ವಿಭಾಗಕ್ಕೆ ವರ್ಗಾವಣೆ ಮಾಡಿತ್ತು. ಕೇಂದ್ರ ಸರ್ಕಾರಕ್ಕೆ ಮತ್ತೆ ಸೆಡ್ಡು ಹೊಡೆದಿದ್ದ ವರ್ಮಾ, ರಾಜೀನಾಮೆ ನೀಡಿದ್ದರು.












Click it and Unblock the Notifications