ಭಾರತಕ್ಕೆ ಬಂದ ಭೂಗತ ಪಾತಕಿ ಛೋಟಾ ರಾಜನ್
ನವದೆಹಲಿ, ನವೆಂಬರ್ 06 : ಇಂಡೋನೇಷಿಯಾದ ಬಾಲಿ ದ್ವೀಪದಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ಛೋಟಾ ರಾಜನ್ನನ್ನು ಬಿಗಿಭದ್ರತೆಯ ನಡುವೆ ನವದೆಹಲಿಗೆ ಕರೆತರಲಾಗಿದೆ. ಸದ್ಯ, ಸಿಬಿಐ ಕೇಂದ್ರ ಕಚೇರಿಯಲ್ಲಿ ಛೋಟಾ ರಾಜನ್ ಇದ್ದು, ಮಧ್ಯಾಹ್ನದ ವೇಳೆಗೆ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ.
ಮುಂಬೈ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ತಂಡ ಛೋಟಾ ರಾಜನ್ನನ್ನು ವಿಶೇಷ ವಿಮಾನದಲ್ಲಿ ಬಾಲಿ ದ್ವೀಪದಿಂದ ನವದೆಹಲಿಗೆ ಕರೆದುಕೊಂಡು ಬಂದರು. ಶುಕ್ರವಾರ ಮುಂಜಾನೆ ವಿಮಾನ ದೆಹಲಿಯ ಪಾಲಂ ಏರ್ಪೋರ್ಟ್ಗೆ ಬಂದಿಳಿಯಿತು. ನಂತರ ಬಿಗಿ ಭದ್ರತೆಯ ನಡುವೆ ಆತನನ್ನು ಸಿಬಿಐ ಕೇಂದ್ರ ಕಚೇರಿಗೆ ಕರೆದುಕೊಂಡು ಹೋಗಲಾಯಿತು. [ಬಾಲಿ ದ್ವೀಪದಲ್ಲಿ ಛೋಟಾ ರಾಜನ್ ಬಂಧನ]

ಬಾಲಿ ದ್ವೀಪದಲ್ಲಿ ಅಕ್ಟೋಬರ್ 26ರಂದು ರಾಜೇಂದ್ರ ಸದಾಶಿವ್ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್ನನ್ನು ಇಂಡೋನೇಷಿಯಾದ ಪೊಲೀಸರು ಬಂಧಿಸಿದ್ದರು. ಮಂಗಳವಾರವೇ ಆತನನ್ನು ಭಾರತಕ್ಕೆ ಕರೆತರಲು ಸಿದ್ಧತೆ ನಡೆದಿತ್ತು. ಆದರೆ, ಜ್ವಾಲಾಮುಖಿಯ ಕಾರಣ ವಿಮಾನಗಳ ಸಂಚಾರ ರದ್ದುಗೊಂಡಿದ್ದರಿಂದ ಶುಕ್ರವಾರ ಕರೆತರಲಾಗಿದೆ. [ಛೋಟಾ ರಾಜನ್ : ಡಾನ್ ಆಗಿದ್ದು ಹೇಗೆ?]
ಮುಂಬೈಗೆ ಸ್ಥಳಾಂತರವಿಲ್ಲ : ಇಂದು ಮಧ್ಯಾಹ್ನದ ವೇಳೆಗೆ ರಾಜನ್ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಸಿಬಿಐ ಅಧಿಕಾರಗಳು, ಬಳಿಕ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ. ದೆಹಲಿಯಲ್ಲಿಯೇ ಸಿಬಿಐ ಮತ್ತು ಎನ್ಐಎ ಅಧಿಕಾರಿಗಳು ಆತನ ವಿಚಾರಣೆ ನಡೆಸಲಿದ್ದಾರೆ. [ಭಾರತಕ್ಕೆ ಹೋದ್ರೆ ನಾನು ಫಿನಿಷ್: ರಾಜನ್]
ಭದ್ರತಾ ದೃಷ್ಟಿಯಿಂದ ಛೋಟಾ ರಾಜನ್ನನ್ನು ಮುಂಬೈಗೆ ಕರೆದುಕೊಂಡು ಹೋಗುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಮುಂಬೈನಲ್ಲಿ ರಾಜನ್ ವಿರುದ್ಧ 65ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಸಿಬಿಐಗೆ ಹಸ್ತಾಂತರ ಮಾಡುವ ಕುರಿತು ಮಹಾರಾಷ್ಟ್ರ ಸರ್ಕಾರ ಮಾತುಕತೆ ನಡೆಸುತ್ತಿದೆ.
ವಿಶೇಷ ವಿಮಾನ, ಬಿಗಿ ಭದ್ರತೆ : ಛೋಟಾ ರಾಜನ್ ಕರೆತರಲು ಭಾರತದಿಂದ ವಿಶೇಷ ವಿಮಾನ ಕಳುಹಿಸಲಾಗಿತ್ತು. ಬಾಲಿಯಲ್ಲಿನ ಏರ್ಪೋರ್ಟ್ಗೆ ಆತನನ್ನು ಬಿಗಿ ಭದ್ರತೆಯಲ್ಲಿ ಕರೆತರಲಾಯಿತು. ಮುಂಬೈ ಪೊಲೀಸರು ಮತ್ತು ಸಿಬಿಐ ಅಧಿಕಾರಿಗಳ ತಂಡ ಛೋಟಾ ರಾಜನ್ ಕರೆತರಲು ಬಾಲಿಗೆ ತೆರಳಿತ್ತು.












Click it and Unblock the Notifications