ರೈಲ್ವೆ ಉದ್ಯೋಗಿಗಳಿಂದ ಸಾಮೂಹಿಕ ಅತ್ಯಾಚಾರ, ನಾಲ್ವರ ಬಂಧನ
ನವದೆಹಲಿ,ಜುಲೈ.23: ಹೊಸದಿಲ್ಲಿ ರೈಲು ನಿಲ್ದಾಣದ ಆವರಣದಲ್ಲಿರುವ ರೈಲ್ವೆ ವಿದ್ಯುತ್ ನಿರ್ವಹಣಾ ಸಿಬ್ಬಂದಿಗೆ ಮೀಸಲಾದ ಶೆಡ್ನಲ್ಲಿ 30 ವರ್ಷದ ಮಹಿಳೆಯೊಬ್ಬರ ಮೇಲೆ ಇಬ್ಬರು ರೈಲ್ವೆ ಉದ್ಯೋಗಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಈ ಸಂಬಂಧ ನಾಲ್ವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ.
ಶುಕ್ರವಾರ ಬೆಳಗಿನ ಜಾವ 2.30ರ ಸುಮಾರಿಗೆ ಮಹಿಳೆ ಪೊಲೀಸರಿಗೆ ಕರೆ ಮಾಡಿ ಅತ್ಯಾಚಾರವೆಸಗಿರುವ ಬಗ್ಗೆ ಮಾಹಿತಿ ತಿಳಿಸಿದ ನಂತರ ಎಲ್ಲಾ ನಾಲ್ವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಲ್ಲಿ ಒಬ್ಬನನ್ನು 35 ವರ್ಷದ ಸತೀಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನಿಗೆ ಕಳೆದ ಎರಡು ವರ್ಷಗಳಿಂದ ಮಹಿಳೆಗೆ ಪರಿಚಿತನಾಗಿದ್ದನು ಎನ್ನಲಾಗಿದೆ.
ಸತೀಶ್ ತಾನು ರೈಲ್ವೆ ಉದ್ಯೋಗಿ ಎಂದು ಮಹಿಳೆಗೆ ಪರಿಚಯಿಸಿಕೊಂಡು ಆಕೆಗೆ ಭಾರತೀಯ ರೈಲ್ವೇಯಲ್ಲಿ ಉದ್ಯೋಗವನ್ನು ಕೊಡಿಸುತ್ತೇನೆ ಎಂದು ಹೇಳಿದ್ದನು. ಬಂಧಿತ ಇತರ ಮೂವರು ವ್ಯಕ್ತಿಗಳನ್ನು ವಿನೋದ್ ಕುಮಾರ್, (38) ಮಂಗಲ್ ಚಂದ್ ಮೀನಾ (33) ಮತ್ತು ಜಗದೀಶ್ ಚಂದ್ (37) ಎಂದು ಗುರುತಿಸಲಾಗಿದ್ದು, ಅವರೆಲ್ಲರು ಸತೀಶ್ ಕುಮಾರ್ ಅವನ ಸ್ನೇಹಿತರಾಗಿದ್ದಾರೆ.
ಪೊಲೀಸ್ ಉಪ ಆಯುಕ್ತ (ರೈಲ್ವೆ) ಹರೇಂದ್ರ ಕುಮಾರ್ ಸಿಂಗ್ ಮಾಹಿತಿ ನೀಡಿ, ನಾಲ್ವರೂ ಭಾರತೀಯ ರೈಲ್ವೆಯಲ್ಲಿ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳು. ಮಧ್ಯರಾತ್ರಿ 2.27ಕ್ಕೆ ಮಹಿಳೆ ಮೊದಲು ಪೊಲೀಸರಿಗೆ ಕರೆ ಮಾಡಿದ್ದು, ರೈಲ್ವೇ ನಿಲ್ದಾಣದ ಕೊಠಡಿಯಲ್ಲಿ ಇಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದಾರೆ.
ಪ್ಲಾಟ್ಫಾರ್ಮ್ ಸಂಖ್ಯೆ 9ರಲ್ಲಿಪತ್ತೆ
ಹಳೆ ದೆಹಲಿಯ ರೈಲ್ವೆ ನಿಲ್ದಾಣದ ಪೊಲೀಸ್ ಠಾಣೆಗೆ ಮೊದಲು ಕರೆ ಹೋಯಿತು. ಆದರೆ ಪೊಲೀಸ್ ಸಿಬ್ಬಂದಿ ಕರೆ ಮಾಡಿದವರಿಗಾಗಿ ಹುಡುಕಾಡಿದಾಗ ರೈಲು ನಿಲ್ದಾಣದಲ್ಲಿ ಎಲ್ಲಿಯೂ ಮಹಿಳೆ ಪತ್ತೆಯಾಗಲಿಲ್ಲ. ಬಳಿಕ ಪೊಲೀಸರು ತಮಗೆ ಕರೆ ಮಾಡಿದ ಮೊಬೈಲ್ ಸಂಖ್ಯೆಗೆ ಪೋನ್ ಮಾಡಿದರು. ಆಗ ಮಹಿಳೆ ಹೊಸದಿಲ್ಲಿ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 9ರಲ್ಲಿ ತಾನು ನಿಂತಿರುವುದಾಗಿ ಅವರಿಗೆ ತಿಳಿಸಿದಳು. ಅದರಂತೆ ಹೊಸದಿಲ್ಲಿ ರೈಲು ನಿಲ್ದಾಣದ ಪೊಲೀಸ್ ಸಿಬ್ಬಂದಿಗೆ ಮಾಹಿತಿ ನೀಡಿ ಮಹಿಳೆ ಪತ್ತೆ ಮಾಡಲು ತಿಳಿಸಲಾಯಿತು ಎಂದು ಡಿಸಿಪಿ ತಿಳಿಸಿದರು. ಬಳಿಕ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ಮಹಿಳಾ ಕಾನ್ಸ್ಟೆಬಲ್ ಮತ್ತು ಇತರ ಸಿಬ್ಬಂದಿಯೊಂದಿಗೆ ಫರಿದಾಬಾದ್ನ ಮಹಿಳೆಯನ್ನು ಅವರ ಸ್ಥಳದಲ್ಲಿ ಪತ್ತೆ ಮಾಡಿದರು.
ಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ
ಸಂತ್ರಸ್ತ ಮಹಿಳೆ ತನ್ನ ಪತಿಯಿಂದ ಬೇರ್ಪಟ್ಟಿರುವುದಾಗಿ ಮತ್ತು ಆತನಿಂದ ವಿಚ್ಛೇದನಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿರುವುದಾಗಿ ಸತೀಶ್ ಕುಮಾರ್ಗೆ ತಿಳಿಸಿದ್ದಳು. ಎರಡು ವರ್ಷಗಳ ಹಿಂದೆ ಸಾಮಾನ್ಯ ಸ್ನೇಹಿತನ ಮೂಲಕ ಸತೀಶ್ ಕುಮಾರ್ ಸಂಪರ್ಕಕ್ಕೆ ಬಂದಿದ್ದಳು. ತಾನು ರೈಲ್ವೇ ಉದ್ಯೋಗಿಯಾಗಿದ್ದು ಅವಳಿಗೂ ಕೆಲಸ ಕೊಡಿಸುತ್ತೇನೆಂದು ಆತ ಹೇಳಿದ್ದನು. ಬಳಿಕ ಇಬ್ಬರೂ ಫೋನ್ನಲ್ಲಿ ಮಾತನಾಡುವುದನ್ನು ಮುಂದುವರೆಸಿದ್ದರು. ಎಂದು ಡಿಸಿಪಿ ಹೇಳಿದರು.
ರೈಲು ನಿಲ್ದಾಣ ಕರೆತಂದಿದ್ದ ಸತೀಶ್
ಜುಲೈ 21, ಗುರುವಾರದಂದು ಸತೀಶ್ ಕುಮಾರ್ ಅವರು ತಮ್ಮ ಮಗನ ಹುಟ್ಟುಹಬ್ಬ ಮತ್ತು ಹೊಸ ಮನೆ ಖರೀದಿಯ ನಿಮಿತ್ತ ಮನೆಯಲ್ಲಿ ಸಣ್ಣ ಪಾರ್ಟಿ ಇರುವುದರಿಂದ ತಮ್ಮ ಬಳಿಗೆ ಬರುವಂತೆ ಫೋನ್ನಲ್ಲಿ ಕೇಳಿಕೊಂಡಿದ್ದನು. ಆಕೆ ರಾತ್ರಿ 10.30ರ ಸುಮಾರಿಗೆ ಕೀರ್ತಿ ನಗರಕ್ಕೆ ಮೆಟ್ರೋ ಮೂಲಕ ಬಂದಳು. ಅಲ್ಲಿಂದ ಕುಮಾರ್ ಅವಳನ್ನು ಕರೆದುಕೊಂಡು ಹೊಸ ದೆಹಲಿಯ ರೈಲು ನಿಲ್ದಾಣದ ಪ್ಲಾಟ್ಫಾರ್ಮ್ ಸಂಖ್ಯೆ 8-9 ಗೆ ಕರೆತಂದಿದ್ದನು. ಬಳಿಕ ಅವಳನ್ನು ವಿದ್ಯುತ್ ನಿರ್ವಹಣಾ ಸಿಬ್ಬಂದಿಗಾಗಿ ಸೀಮೀತವಾಗಿದ್ದ ಶೆಡ್ನಲ್ಲಿ ಕುಳಿತುಕೊಳ್ಳಲು ಹೇಳಿದ್ದನು.
ಸಾಮೂಹಿಕ ಅತ್ಯಾಚಾರ, ಅಕ್ರಮ ಬಂಧನದ ಪ್ರಕರಣ
ಬಳಿಕ ಸತೀಶ್ ಕುಮಾರ್ ಮತ್ತು ಅವನ ಸ್ನೇಹಿತ ಕೋಣೆಗೆ ಬಂದು ಒಳಗಿನಿಂದ ಬಾಗಿಲು ಹಾಕಿ ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಅವರ ಇಬ್ಬರು ಸಹಚರರು ಕೊಠಡಿಯನ್ನು ಹೊರಗಿನಿಂದ ಕಾವಲು ಕಾಯುವ ಮೂಲಕ ಅತ್ಯಾಚಾರ ನಡೆಯುವ ವೇಳೆ ಇದ್ದರು. ಮಹಿಳೆಯ ದೂರಿನ ಆಧಾರದ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಅಕ್ರಮ ಬಂಧನದ ಪ್ರಕರಣವನ್ನು ನಾಲ್ವರ ಮೇಲೆ ದಾಖಲಿಸಲಾಯಿತು. ಅಪರಾಧ ವರದಿಯಾದ ಎರಡು ಗಂಟೆಗಳಲ್ಲಿ ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಲಾಯಿತು. ಅವರನ್ನು ದೆಹಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.