ಗಾಂಧಿ ದೇಶಕ್ಕಾಗಿ ಪ್ರಾಣ ಬಿಟ್ಟರು, ನಿಮ್ಮ ಮನೆಯಿಂದ ನಾಯಿ ಕೂಡ ತ್ಯಾಗ ಮಾಡಿಲ್ಲ
ನೀವು ಸೊಗಸಾದ ಭಾಷಣ ಮಾಡುತ್ತೀರಿ. ಆದರೆ ಅಂಥ ಭಾಷಣಗಳಿಂದ ಜನರ ಹೊಟ್ಟೆ ತುಂಬುವುದಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ
ನವದೆಹಲಿ, ಫೆಬ್ರವರಿ 7: ಸಂಸದ ಇ.ಅಹ್ಮದ್ ಸಾವಿನ ವಿಚಾರದಲ್ಲಿ ಸರ್ಕಾರ ನಡೆದುಕೊಂಡ ರೀತಿಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಕಿಡಿ ಕಾರಿದ್ದಾರೆ. ಅಹ್ಮದ್ ಅವರ ಸಾವಿನ ವಿಚಾರವನ್ನು ಸಂಸದೀಯ ತನಿಖೆ ಮಾಡಿಸಬೇಕು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಸಂಸದರು ಒತ್ತಾಯಿಸಿದ್ದಾರೆ.
ಅಹ್ಮದ್ ಅವರು ನಿಧನರಾದ ನಂತರ ಕೂಡ ಅನಗತ್ಯವಾಗಿ ಜೀವರಕ್ಷಕ ಯಂತ್ರಗಳನ್ನು ಹಾಕಲಾಯಿತು. ಅವರು ಸಾವಿನ ವಿಚಾರವನ್ನು ಮುಚ್ಚಿಡುವುದಕ್ಕೆ ಪ್ರಯತ್ನಿಸಿದರು. ಆದ್ದರಿಂದಲೇ ಸಂಸದೀಯ ಸಮಿತಿ ತನಿಖೆ ಮಾಡಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ ಎಂದು ಖರ್ಗೆ ಹೇಳಿದರು.[ಅಹ್ಮದ್ ಸಾವು ಪ್ರಕಟಣೆ ತಡವಾಗಿದ್ದು ಅಮಾನವೀಯ : ಖರ್ಗೆ]
ಇದೇ ವೇಳೆ ನೋಟು ನಿಷೇಧ ನಿರ್ಧಾರವನ್ನೂ ಖರ್ಗೆ ಕಟುವಾಗಿ ಟೀಕಿಸಿದರು. ಮೋದಿ ಅವರ ನಿರ್ಧಾರದಿಂದ 125 ಮಂದಿ ಮೃತಪಟ್ಟರು. ಪ್ರಧಾನಿಯಾದವರು ಕನಿಷ್ಠ ಕ್ಷಮೆಯಾದರೂ ಕೇಳಬೇಕಿತ್ತು. ಗಾಂಧಿ ಜೀ ಈ ದೇಶಕ್ಕಾಗಿ ಪ್ರಾಣ ಬಿಟ್ಟರು. ಇಂದಿರಾ ಗಾಂಧಿ ಅವರು ತಮ್ಮ ಜೀವ ತ್ಯಾಗ ಮಾಡಿದರು. ಆದರೆ ನಿಮ್ಮ ಕುಟುಂಬದಿಂದ ಒಂದು ನಾಯಿ ಕೂಡ ಇಂಥ ತ್ಯಾಗ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀವು ತುಂಬ ಸೊಗಸಾಗಿ ಮಾತನಾಡ್ತೀರಿ. ಅದ್ಭುತವಾದ ಭಾಷಣ ನೀಡ್ತೀರಿ. ಆದರೆ ಅಂಥ ಭಾಷಣಗಳಿಂದ ಜನರ ಹೊಟ್ಟೆ ತುಂಬಿಸಲು ಸಾಧ್ಯವಿಲ್ಲ. ಸರ್ಜಿಕಲ್ ಸ್ಟ್ರೈಕ್ ನ ಶ್ರೇಯ ನೀವು ತೆಗೆದುಕೊಳ್ಳುವ ಅಗತ್ಯವಿಲ್ಲ. ಅದು ಸೇನೆಗೆ, ಸೇನೆ ಜತೆಗೆ ಇರುವವರಿಗೆ ಸೇರಬೇಕು. ಇಡೀ ದೇಶದ ಜನ ಸೇನೆ ಜತೆಗೆ ಇದ್ದಾರೆ ಎಂದರು.