ನಿರ್ಭಯಾ ಅತ್ಯಾಚಾರಿಗಳಿಗೆ ಕೊನೆಯ ಆಸೆಯೇ ಇಲ್ಲ?
ನವದೆಹಲಿ, ಜನವರಿ 23: ನಾಲ್ವರು ನಿರ್ಭಯಾ ಅತ್ಯಾಚಾರಿಗಳನ್ನು ಫೆಬ್ರವರಿ 1 ರಂದು ಗಲ್ಲಿಗೇರಿಸಲಾಗುತ್ತಿದೆ.
ನಿಮಗೆ ಅಂತಿಮ ಆಸೆಗಳೇನಾದರೂ ಇದ್ದರೆ ತಿಳಿಸಿ ಎಂದು ಕೇಳಿದರೂ ಅಪರಾಧಿಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಪೋಷಕರನ್ನು ಭೇಟಿ ಮಾಡುವ ಕುರಿತಾಗಲಿ, ಆಸ್ತಿ ವಿಚಾರದ ಕುರಿತಾಗಲಿ ಯಾರೂ ಸ್ಪಂದಿಸುತ್ತಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿಯನ್ನು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ತಿರಸ್ಕರಿಸಿದ್ದರು. ಹೀಗಾಗಿ ನಾಲ್ವರು ಆರೋಪಿಗಳ ಪೈಕಿ ಮುಕೇಶ್ ಸಿಂಗ್ ಗಲ್ಲುಶಿಕ್ಷೆ ಖಚಿತವಾಗಿದೆ. ಕ್ಷಮಾದಾನದ ಅರ್ಜಿ ಅಪರಾಧಿಗಳಿಗೆ ಇರುವ ಕೊನೆಯ ಆಯ್ಕೆಯಾಗಿದೆ.
ಆದರೆ ಈ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಇತರೆ ಮೂವರು ಅಪರಾಧಿಗಳು ಇದುವರೆಗೂ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ. ಒಂದು ವೇಳೆ ಅವರಲ್ಲಿ ಒಬ್ಬರು ಅರ್ಜಿ ಸಲ್ಲಿಸಿದ್ದರೂ ಮರಣದಂಡನೆ ಜಾರಿ ವಿಳಂಬವಾಗುವ ಸಾಧ್ಯತೆ ಇದೆ.
ಕೇಂದ್ರ ಗೃಹ ಸಚಿವಾಲಯವು ಮುಕೇಶ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿಗಳಿಗೆ ರವಾನಿಸಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಕೇಶ್ ಸಿಂಗ್ನ ಕ್ಷಮಾದಾನದ ಅರ್ಜಿಯನ್ನು ದೆಹಲಿ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದ್ದರು. ಕೇಂದ್ರ ಗೃಹ ಸಚಿವಾಲಯ ಕೂಡ ಕ್ಷಮಾದಾನಕ್ಕೆ ನಿರಾಕರಿಸಿ, ರಾಷ್ಟ್ರಪತಿಗಳಿಗೂ ಶಿಫಾರಸು ಮಾಡಿತ್ತು.

ಕುಟುಂಬದ ಯಾವುದೇ ಸದ್ಯರನ್ನು ಭೇಟಿಯಾಗಬಹುದು
ಕುಟುಂಬದ ಯಾವುದೇ ಸದಸ್ಯರನ್ನು ಯಾವಾಗ ಬೇಕಾದರೂ ಭೇಟಿ ಮಾಡಬಹುದಾಗಿದೆ. ಹಾಗೆಯೇ ಅವರ ಆಸ್ತಿಯನ್ನು ಬೇರೆಯವರ ಹೆಸರಿಗೆ ಬರೆದುಕೊಡಬಹುದಾಗಿದೆ. ಆದರೆ ಇದುವರೆಗೂ ತಾವು ಕುಟುಂಬದ ಸದಸ್ಯರನ್ನು ಭೇಟಿಯಾಗಬೇಕು ಎಂದು ಯಾರೂ ಹೇಳಿಲ್ಲ.

ನಾಲ್ವರು ಅತ್ಯಾಚಾರಿಗಳು ಮೌನ
ಮುಖೇಶ್ ಸಿಂಗ್, ವಿನಯ್ ಶರ್ಮಾ, ಅಕ್ಷಯ್ ಸಿಂಗ್ ಹಾಗೂ ಪವನ್ ಗುಪ್ತಾ ಈ ನಾಲ್ವರು ಅತ್ಯಾಚಾರಿಗಳು ಮೌನವಾಗಿದ್ದಾರೆ. ಮೊದಲು ಮರಣದಂಡನೆ ಜನವರಿ 22ರಂದು ನಿಗದಿಯಾಗಿತ್ತು. ಬಳಿಕ ಫೆಬ್ರವರಿ 1ಕ್ಕೆ ಮುಂದೂಡಲಾಗಿತ್ತು. ನಾಲ್ವರೂ ಮೌನವಾಗಿದ್ದಾರೆ. ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ನಾನು ಅಪ್ರಾಪ್ತ ಎಂದು ಪವನ್ ಗುಪ್ತಾ ಕೋರ್ಟ್ಗೆ ಅರ್ಜಿ
ಕಳೆದ ವಾರ, ಮತ್ತೊಬ್ಬ ಅಪರಾಧಿ, ಪವನ್ ಗುಪ್ತಾ, ತಾನು 18 ಕ್ಕಿಂತ ಕಡಿಮೆ ವಯಸ್ಸಿನವನು ಅಪ್ರಾಪ್ತ ಎಂದು ಹೇಳಿಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಸುಪ್ರೀಂಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ರಾಷ್ಟ್ರಪತಿ ಕೂಡ ಅರ್ಜಿಯನ್ನು ತಿರಸ್ಕರಿಸಿದ್ದರು.

ಚಲಿಸುತ್ತಿದ್ದ ಬಸ್ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು
ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಕೇವಲ ಅತ್ಯಾಚಾರ ಮಾತ್ರವಲ್ಲದೆ ಆಕೆಗೆ ಹಲ್ಲೆ ಮಾಡಿ, ಕಬ್ಬಿಣದ ರಾಡಿನಿಂದ ಹೊಡೆದು ಚಿತ್ರಹಿಂಸೆ ನೀಡಿ ಕೊನೆಗೆ ವಾಹನದಿಂದ ಕೆಳಗೆ ಎಸೆದಿದ್ದರು. ಈ ಪ್ರಕರಣದಲ್ಲಿ ಒಟ್ಟು ಆರು ಮಂದಿಯನ್ನು ಮೊದಲು ಬಂಧಿಸಲಾಗಿತ್ತು.












Click it and Unblock the Notifications