ದೆಹಲಿ ಪೊಲೀಸರಿಂದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಬಂಧನ
ನವದೆಹಲಿ, ಮೇ 18: ವಲಸೆ ಕಾರ್ಮಿಕರು ಮನೆಗಳನ್ನು ತಲುಪಲು ಕೇಂದ್ರ ಸರ್ಕಾರ ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕೆಂದು ಧರಣಿ ಕುಳಿತಿದ್ದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ರಾಜ್ಘಾಟ್ ಬಳಿ ಧರಣಿ ಕುಳಿತುಕೊಂಡಿದ್ದಾಗ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ. ಸಿನ್ಹಾ ಅವರ ಜೊತೆ ಎಎಪಿ ಮುಖಂಡರಾದ ಸಂಜಯ್ ಸಿಂಗ್ ಮತ್ತು ದಿಲೀಪ್ ಪಾಂಡೆ ಅವರನ್ನೂ ಬಂಧಿಸಲಾಗಿದೆ.
ಲಾಕ್ಡೌನ್ನಲ್ಲಿ ಸಿಕ್ಕಿಬಿದ್ದರುವ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಹಿಂದಿರುಗಿಸಲು ಸರಿಯಾದ ವ್ಯವಸ್ಥೆ ಮಾಡಬೇಕೆಂದು ಸಿನ್ಹಾ ಧರಣಿ ನಡೆಸುತ್ತಿದ್ದರು. "ನಮ್ಮನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ" ಎಂದು ಸಿನ್ಹಾ ಸೋಮವಾರ ಸಂಜೆ ಟ್ವೀಟ್ ಮಾಡಿದ್ದಾರೆ.

"ಸಶಸ್ತ್ರ ಪಡೆಗಳು ಮತ್ತು ಅರೆಸೈನಿಕ ಪಡೆಗಳಿಗೆ, ಅವರ ಆಜ್ಞೆಯ ಮೇರೆಗೆ ಎಲ್ಲಾ ಸಂಪನ್ಮೂಲಗಳೊಂದಿಗೆ ವಲಸೆ ಕಾರ್ಮಿಕರನ್ನು ಗೌರವಯುತವಾಗಿ ಅವರವ ಮನೆಗಳಿಗೆ ಕಳುಹಿಸಬೇಕು" ಎಂಬುದು ಸಿನ್ಹಾ ಅವರ ಬೇಡಿಕೆಯಾಗಿದೆ. ಬಿಜೆಪಿಯವರು ಕೇವಲ ಶ್ರೀಮಂತರ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಬಿಜೆಪಿ ಮುಖಂಡ ಸಿನ್ಹಾ ಮೋದಿ ಸರ್ಕಾರವನ್ನು ಇತ್ತೀಚೆಗೆ ಹೆಚ್ಚು ಟೀಕಿಸುತ್ತಿದ್ದಾರೆ.












Click it and Unblock the Notifications