Breaking;ದೆಹಲಿಯಲ್ಲಿ 36 ಗಂಟೆ ಕಳೆದರೂ ಆರದ ಕಸದ ರಾಶಿ ಬೆಂಕಿ
ನವದೆಹಲಿ, ಏಪ್ರಿಲ್ 28; ದೆಹಲಿಯ ಭಾಲಾಸ್ವಾ ಡೈರಿ ಸಮೀಪ ಕಸದ ರಾಶಿಗೆ ಬಿದ್ದಿರುವ ಬೆಂಕಿ ಇನ್ನೂ ಹತೋಟಿಗೆ ಬಂದಿಲ್ಲ. 36 ಗಂಟೆಗಳಿಂದ ಅಗ್ನಿ ಶಾಮಕ ದಳ ಕಾರ್ಯಾಚರಣೆ ನಡೆಸುತ್ತಿದೆ.
ಗುರುವಾರ ಬೆಳಗ್ಗೆ ಸಹ ಕಸದ ರಾಶಿಯ ಕೆಲವು ಕಡೆ ಬೆಂಕಿ ಹೊತ್ತಿಕೊಂಡಿರುವುದು ಪತ್ತೆಯಾಗಿದೆ. ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆ ಮುಂದುವರೆಸಿವೆ.
ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಮೊದಲು ಬೆಂಕಿ ಕಾಣಿಸಿಕೊಂಡಿತು ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ. ಕಸದ ರಾಶಿಯ ಬೆಂಕಿಯ ದಟ್ಟ ಹೊಗೆಯ ಕಾರಣ ಸಮೀಪದಲ್ಲಿದ್ದ ಖಾಸಗಿ ಎನ್ಜಿಓ ನಡೆಸುತ್ತಿದ್ದ ಶಾಲೆಯನ್ನು ಮುಚ್ಚಲಾಗಿದೆ.

ಬೆಂಕಿಯಿಂದಾಗಿ ಅಕ್ಕಪಕ್ಕದ ಪ್ರದೇಶಗಳ ಜನರಿಗೆ ಉಸಿರಾಟದ ತೊಂದರೆ ಉಂಟಾಗಿತ್ತು. ಈ ಘಟನೆಗೆ ದೆಹಲಿ ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ.
ದೆಹಲಿ ಸರ್ಕಾರ ಘಟನೆ ಬಗ್ಗೆ ವರದಿ ನೀಡುವಂತೆ ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ. ಗುರುವಾರವೂ ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆಯಲಿದೆ.
ಭಾಲಾಸ್ವಾ ಡೈರಿ ಸಮೀಪದ ಪ್ರದೇಶಗಳಲ್ಲಿ ವಾಸಿಸುವ ಜನರು ವಿಷಕಾರಿ ಹೊಗೆ, ಕಸದ ರಾಶಿಯ ಸಣ್ಣ ಬೆಂಕಿ ಸಮಸ್ಯೆಯನ್ನು ಹಿಂದಿನಿಂದಲೂ ಅನುಭವಿಸುತ್ತಿದ್ದಾರೆ. ಆದರೆ ಈ ಕುರಿತು ದೂರು ನೀಡಿದರೂ ಸಹ ಯಾವ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ.
ಉತ್ತರ ದೆಹಲಿ ಪ್ರದೇಶದಲ್ಲಿ ಭಾಲಾಸ್ವಾ ಪ್ರದೇಶವಿದೆ. ಮಹಾನಗರ ಪಾಲಿಕೆ ಇಲ್ಲಿ ಕಸ ಸುರಿಯುತ್ತಿತ್ತು ಬಿಟ್ಟರೆ ಸ್ಥಳೀಯ ನಿವಾಸಿಗಳ ಕಷ್ಟವನ್ನು ಕೇಳಿರಲಿಲ್ಲ.












Click it and Unblock the Notifications