ರಾಷ್ಟ್ರದ ಘನತೆಗೆ ಕುಂದು ತರುವ ಯಾವುದೇ ಕೆಲಸ ಮಾಡಿಲ್ಲ; ರೈತ ಸಂಘಟನೆ
ನವದೆಹಲಿ, ಜನವರಿ 26: ದೆಹಲಿಯಲ್ಲಿ ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿರುವ ರೈತ ಸಂಘಟನೆಗಳು, ನಮ್ಮ ಶಾಂತಿಯುತ ಪ್ರತಿಭಟನೆಯಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಒಳನುಸುಳಿವೆ ಎಂದು ಆರೋಪಿಸಿವೆ.
ರೈತರ ಈ ಹೋರಾಟಕ್ಕೆ ಸಿಕ್ಕ ಬೆಂಬಲ ಅಭೂತಪೂರ್ವವಾದದ್ದು. ಆದರೆ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆ ಕ್ಷಮಿಸಲು ಅನರ್ಹವಾದದ್ದು. ನಾವು ಇಂಥ ಹಿಂಸಾಚಾರದಲ್ಲಿ ಭಾಗಿಯಾದವರಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆ ಹೇಳಿಕೆ ನೀಡಿದೆ.
ಕೆಂಪುಕೋಟೆಯಲ್ಲಿ ರೈತರು ಧ್ವಜ ಹಾರಿಸಿದ್ದು ಖಂಡನೀಯ: ಸಚಿವ ಪ್ರಹ್ಲಾದ್
ಪ್ರತಿಭಟನೆ ವೇಳೆ ಶಾಂತಿ ಕಾಪಾಡುವ ನಮ್ಮೆಲ್ಲಾ ಪ್ರಯತ್ನದ ಹೊರತಾಗಿಯೂ ಕೆಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ಟ್ರ್ಯಾಕ್ಟರ್ ಮಾರ್ಗವನ್ನು ಉಲ್ಲಂಘಿಸಿದರು. ಹಿಂಸಾಚಾರ ಪ್ರೇರೇಪಿಸಿದರು. ಸಮಾಜವಿರೋಧಿ ವ್ಯಕ್ತಿ ಅಥವಾ ಸಂಘಟನೆ ನಮ್ಮ ಶಾಂತಿಯುತ ಪ್ರತಿಭಟನೆ ಒಳಗೆ ನುಸುಳಿವೆ. ಶಾಂತಿಯೇ ನಮ್ಮ ಅತಿ ದೊಡ್ಡ ಶಕ್ತಿ ಎಂದು ಹೇಳಿಕೊಂಡಿದ್ದೆವು. ಆದರೆ ಹಿಂಸಾಚಾರವನ್ನು ಪ್ರತಿಭಟನೆ ವೇಳೆ ಪ್ರೇರೇಪಿಸಲಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಪ್ರತಿಭಟನೆ ವೇಳೆ ನಾವು ಶಿಸ್ತು ಪಾಲಿಸಿದ್ದೇವೆ. ಪೊಲೀಸರು ಹೇಳಿದ ಮಾರ್ಗದಲ್ಲಿಯೇ ಟ್ರ್ಯಾಕ್ಟರ್ ಜಾಥಾ ನಡೆಸಬೇಕೆಂದು ಎಲ್ಲರೊಂದಿಗೂ ಮನವಿ ಮಾಡಿಕೊಂಡಿದ್ದೆವು. ರಾಷ್ಟ್ರದ ಘನತೆ ಕುಂದಿಸುವ ಯಾವುದೇ ಕೆಲಸ ಮಾಡದಂತೆ ಕೇಳಿಕೊಂಡಿದ್ದೆವು. ಈಗ ನಡೆದಿರುವ ಘಟನೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಪರೇಡ್ ಆರಂಭಿಸಿದಾಗಿನಿಂದ ಈಗಿನವರೆಗೂ ಏನೆಲ್ಲಾ ಬೆಳವಣಿಗೆಗಳು ನಡೆದಿವೆ ಎಂಬ ಕುರಿತು ಮಾಹಿತಿ ಪಡೆಯುತ್ತಿದ್ದೇವೆ. ಒಂದು ಚಿತ್ರಣ ದೊರೆಯುತ್ತಿದ್ದಂತೆ ಹೇಳಿಕೆ ನೀಡುತ್ತೇವೆ ಎಂದು ಸಂಘಟನೆ ತಿಳಿಸಿದೆ.