'ಗುರು' ಅರವಿಂದ್ ವಿರುದ್ಧವೇ 'ಶಿಷ್ಯೆ' ಶಾಜಿಯಾ ಸ್ಪರ್ಧೆ?
ನವದೆಹಲಿ, ಜ.14: ಆಮ್ ಆದ್ಮಿ ಪಕ್ಷದ ಫೈರ್ ಬ್ರ್ಯಾಂಡ್ ನಾಯಕಿ ಶಾಜಿಯಾ ಇಲ್ಮಿ ಅವರು ಮುಂಬರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಿಳಿಯಲಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಎದುರು ಶಾಜಿಯಾ ಅವರನ್ನು ನಿಲ್ಲಿಸಲು ಬಿಜೆಪಿ ಚಿಂತನೆ ನಡೆಸಿದೆ.
ಅಣ್ಣಾ ಹಜಾರೆ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಜನಪರ ಹೋರಾಟಗಳನ್ನು ಮೆಚ್ಚಿ ಆಮ್ ಆದ್ಮಿ ಪಕ್ಷ ಸೇರಿದ್ದ ಶಾಜಿಯಾ ಇಲ್ಮಿ ಅವರು ಕಳೆದ ವರ್ಷ ಮೇ 24ರಂದು ಪಕ್ಷ ತೊರೆದಿದ್ದರು. ಪಕ್ಷದಲ್ಲಿ ಯಾವುದೇ ರೀತಿ ಪ್ರಜಾಪ್ರಭುತ್ವ ತತ್ವಗಳನ್ನು ಪಾಲಿಸುತ್ತಿಲ್ಲ ಎಂದಿದ್ದರು. [ಆಪ್ ನಾಯಕಿ ಶಾಜಿಯಾ ಇಲ್ಮಿ ರಾಜೀನಾಮೆ]

ಶಾಜಿಯಾ ಇಲ್ಮಿ ಅವರು ದೆಹಲಿಯ ಆರ್ ಕೆ ಪುರಂ ಕ್ಷೇತ್ರದಿಂದ ಸ್ಪರ್ಧೆಗಿಳಿಯುವ ಸಾಧ್ಯತೆಯಿದೆ. 2013ರ ದೆಹಲಿ ವಿಧಾನಸಭೆಯಲ್ಲಿ ಸ್ಟಾರ್ ಪ್ರಚಾರಕಿಯಾಗಿದ್ದ ಇಲ್ಮಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಗಾಜಿಯಾಬಾದಿನಲ್ಲಿ ವಿಕೆ ಸಿಂಗ್ ವಿರುದ್ಧ ಸೋಲು ಕಂಡಿದ್ದರು. [ಚುನಾವಣೆ : ಹೊರಬಿತ್ತು ಮತ್ತೊಂದು ಸಮೀಕ್ಷೆ]
ಶಾಜಿಯಾ ಇಲ್ಮಿ ಸೇರಿದಂತೆ 9 ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ರಸೀದಿ ನೀಡದೆ ದೇಣಿಗೆ ಸಂಗ್ರಹಿಸುತ್ತಿದ್ದದನ್ನು ಮಾಧ್ಯಮವೊಂದು ಕುಟುಕು ಕಾರ್ಯಾಚರಣೆ ಮೂಲಕ ಬಹಿರಂಗಗೊಳಿಸಿತ್ತು. ಇದಾದ ಬಳಿಕ ಎಎಪಿಯಿಂದ ದೂರ ಸರಿದಿದ್ದರು. [ಅಸೆಂಬ್ಲಿ ಚುನಾವಣಾ ವೇಳಾಪಟ್ಟಿ ಘೋಷಣೆ]
ನಾನು ಇನ್ಮುಂದೆ ಅಸೆಂಬ್ಲಿ ಚುನಾವಣೆ ಎದುರಿಸುವುದಿಲ್ಲ ಯಾವ ಪಕ್ಷವನ್ನು ಸೇರುವುದಿಲ್ಲ ಎಂದಿದ್ದ ಇಲ್ಮಿ ಅವರು ಈಗ ಬಿಜೆಪಿ ಪರ ವಾಲುತ್ತಿರುವ ಸೂಚನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನವನ್ನು ಶಾಜಿಯಾ ಬಹುವಾಗಿ ಮೆಚ್ಚಿಕೊಂಡಿದ್ದರು.
ಟಿವಿ ಮಾಧ್ಯಮದಲ್ಲಿ ಸುಮಾರು 15 ವರ್ಷಗಳ ಅನುಭವವುಳ್ಳ ಶಾಜಿಯಾ ಅವರು ಎಎಪಿ ಸೇರಿ ರಾಜಕೀಯ ರಂಗಕ್ಕೆ ಅಧಿಕೃತವಾಗಿ ಕಾಲಿಟ್ಟರೂ ಸಾಮಾಜಿಕ ಕಾರ್ಯಕರ್ತೆಯಾಗಿ ಕೂಡಾ ಜನಪ್ರಿಯತೆ ಗಳಿಸಿದ್ದಾರೆ.












Click it and Unblock the Notifications