ಈ ಬಾರಿಯ ಜನರ ದೀಪಾವಳಿ ಆಚರಣೆ ಸರ್ಕಾರ ಕೈಯಲ್ಲಿದೆ: ಸುಪ್ರೀಂಕೋರ್ಟ್
ನವದೆಹಲಿ, ಅಕ್ಟೋಬರ್ 14: ಎರಡು ಕೋಟಿ ರೂವರೆಗಿನ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ. ಈ ವಿಚಾರವಾಗಿ ನಿರ್ಧಾರ ತೆಗೆದುಕೊಳ್ಳಲಾಗಿದೆ, ಆದರೆ ಜಾರಿಗೆ ತರಲು ಸಮಯ ಬೇಕು ಎಂದು ಸರ್ಕಾರ ನೀಡಿದ ಪ್ರತಿಕ್ರಿಯೆಗೆ ಸುಪ್ರೀಂಕೋರ್ಟ್ ಈ ತೀರ್ಮಾನ ತೆಗೆದುಕೊಂಡಿದೆ.
ನವೆಂಬರ್ 2ರ ವೇಳೆಗೆ ಸಾಲಗಳ ಮೇಲಿನ ಬಡ್ಡಿಯ ಮನ್ನಾ ಮಾಡಲು ಸುತ್ತೋಲೆಗಳನ್ನು ಹೊರಡಿಸುವಂತೆ ನಿರ್ದೇಶನ ನೀಡಬೇಕೆಂಬ ಸರ್ಕಾರದ ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ. 'ಜನಸಾಮಾನ್ಯರು ಚಿಂತೆಗೀಡಾಗಿದ್ದಾರೆ. ನೀವು ಈಗಾಗಲೇ ನಿರ್ಧಾರ ತೆಗೆದುಕೊಂಡಿರುವಾಗ ತಡ ಮಾಡುವುದೇಕೆ?' ಎಂದು ಸುಪ್ರೀಂಕೋರ್ಟ್ ಹೇಳಿದೆ.
'ಈ ವರ್ಷದ ಜನಸಾಮಾನ್ಯರ ದೀಪಾವಳಿಯು ಸರ್ಕಾರದ ಕೈಯಲ್ಲಿದೆ' ಎಂದು ಸುಪ್ರೀಂಕೋರ್ಟ್ ತಮಾಷೆಯಾಗಿ ಹೇಳಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸಾಲದ ಮೇಲಿನ ಬಡ್ಡಿಯನ್ನು ಮತ್ತು 2 ಕೋಟಿ ರೂವರೆಗಿನ ವೈಯಕ್ತಿಕ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲು ಸರ್ಕಾರ ಒಪ್ಪಿಕೊಂಡಿತ್ತು.
ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡಿದ ಕಾರಣದಿಂದ ದೇಶದಾದ್ಯಂತ ಲಾಕ್ಡೌನ್ ಘೋಷಿಸಲಾಗಿತ್ತು. ಇದರಿಂದ ಅನೇಕರು ದುಡಿಮೆ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಮ್ಮ ಸಾಲ ಅಥವಾ ಕಂತುಗಳನ್ನು ಮರುಪಾವತಿ ಮಾಡಲು ಸಾಧ್ಯವಾಗದ ಜನರಿಗೆ ಸ್ವಲ್ಪ ನೆಮ್ಮದಿ ನೀಡಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.












Click it and Unblock the Notifications