ಸೇವಾ ನಿಯಮ ಉಲ್ಲಂಘಿಸಿಲ್ಲ, ರಾಜೀನಾಮೆ ನೀಡಲ್ಲ : ದೇವಯಾನಿ
ನವದೆಹಲಿ, ಡಿ. 20: ನಾನು ಯಾವುದೇ ಸೇವಾ ನಿಯಮವನ್ನು ಉಲ್ಲಂಘಿಸಿಲ್ಲ. ಆದ್ದರಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವೇ ಇಲ್ಲ ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ರಾಜತಂತ್ರಜ್ಞೆ ದೇವಯಾನಿ ಕೋಬ್ರಗಡೆ ಸ್ಪಷ್ಟಪಡಿಸಿದ್ದಾರೆ.
ಭಾರತ ಸರ್ಕಾರವು ತಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಿ, ಕಡ್ಡಾಯ ನಿರೀಕ್ಷೆಯಲ್ಲಿಟ್ಟ ಕ್ರಮದ ಕುರಿತು ದೇವಯಾನಿ ಪ್ರತಿಕ್ರಿಯಿಸಿದ್ದಾರೆ.
ಸಂದರ್ಶನಕ್ಕೆ ಅನುಮತಿ ಪಡೆಯದ ದೇವಯಾನಿ ಕರ್ತವ್ಯ ಮುಕ್ತ
ಅಮೆರಿಕದಲ್ಲಾದ ತಮ್ಮ ಬಂಧನ ಹಾಗೂ ಭದ್ರತಾ ತಪಾಸಣೆ ಕುರಿತು ತನ್ನ ಅನುಮತಿ ಪಡೆಯದೆ ಸುದ್ದಿ ವಾಹನಿಯೊಂದಕ್ಕೆ ಸಂದರ್ಶನ ನೀಡಿದ ಭಾರತದ ರಾಜತಂತ್ರಜ್ಞೆ ದೇವಯಾನಿ ಕೋಬ್ರಗಡೆ ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸಿ ವಿದೇಶಾಂಗ ಸಚಿವಾಲಯ ಆದೇಶ ಹೊರಡಿಸಿದೆ.
ಅಮೆರಿಕದಿಂದ ಭಾರತಕ್ಕೆ ಬಂದ ನಂತರ ಪಾಲುದಾರಿಕೆ ಅಭಿವೃದ್ಧಿ ವಿಭಾಗದ ನಿರ್ದೇಶಕಿಯಾಗಿ ದೇವಯಾನಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ದೇವಯಾನಿ ಈ ಹುದ್ದೆಯನ್ನೂ ಕಳೆದುಕೊಂಡಿದ್ದಾರೆ. [ವೀಸಾ ವಂಚನೆ : ದೇವಯಾನಿಗೆ ಸಿಕ್ತು ರಿಲೀಫ್]
ಅಮೆರಿಕ ಪಾಸ್ಪೋರ್ಟ್ ಮುಚ್ಚಿಟ್ಟಿದ್ದ ದೇವಯಾನಿ
ಈ ಮೊದಲು ತಮ್ಮ ಮಕ್ಕಳು ಅಮೆರಿಕ ಪಾಸ್ಪೋರ್ಟ್ ಹೊಂದಿರುವುದನ್ನು ದೇವಯಾನಿ ಮುಚ್ಚಿಟ್ಟಿದ್ದರು. ಇದರಿಂದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ದೇವಯಾನಿ ಕುರಿತು ಅಸಮಾಧಾನ ವ್ಯಕ್ತಪಡಿಸಿತ್ತು. ಈ ಕುರಿತು ಸಚಿವಾಲಯ ಅವರ ವಿರುದ್ಧ ವಿಜಿಲೆನ್ಸ್ ತನಿಖೆಯನ್ನೂ ನಡೆಸಿತ್ತು. ಆದರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. [ದೇವಯಾನಿ ವಿವಸ್ತ್ರಗೊಳಿಸಿ ತಪಾಸಣೆ, ಭಾರತ ಗರಂ]
ಆದರೆ, ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪಾಸ್ಪೋರ್ಟ್ ವಿಷಯವನ್ನು ಮುಚ್ಚಿಟ್ಟಿರಲಿಲ್ಲ ಎಂದು ದೇವಯಾನಿ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ನನ್ನ ಮಕ್ಕಳು ಅಮೆರಿಕದಲ್ಲಿಯೇ ಜನಿಸಿರುವ ಕಾರಣ ಅವರಿಗೆ ಸಹಜವಾಗಿಯೇ ಅಮೆರಿಕದ ಪಾಸ್ಪೋರ್ಟ್ ದೊರೆಯುತ್ತದೆ. ಅಲ್ಲದೆ, ಈ ಕುರಿತು ಸರ್ಕಾರಕ್ಕೆ ಈ ಮೊದಲೇ ವಿಷಯ ತಿಳಿಸಿದ್ದೆ ಎಂದು ಸಂದರ್ಶನದಲ್ಲಿ ಸಮರ್ಥಿಸಿಕೊಂಡಿದ್ದರು. [ದೇವಯಾನಿ ಪ್ರಕರಣ, ಕ್ಷಮೆಯಾಚಿಸಲ್ಲ ಎಂದ ಅಮೆರಿಕ]
ಈಗ ಸುದ್ದಿ ವಾಹಿನಿಗೆ ಸಂದರ್ಶನ ನೀಡುವ ಮುನ್ನ ಪೂರ್ವಾನುಮತಿ ಪಡೆದಿರಲಿಲ್ಲ ಎಂದು ಕಾರಣ ನೀಡಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೇವಯಾನಿ ಮೇಲೆ ಶಿಸ್ತು ಕ್ರಮ ಕೈಗೊಂಡಿದೆ. ಅಲ್ಲದೆ, ಅವರನ್ನು 'ಕಡ್ಡಾಯ ನಿರೀಕ್ಷೆ'ಯಲ್ಲಿಡಲಾಗಿದೆ.