ದೆಹಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರಾ ಜಮ್ಮು-ಕಾಶ್ಮೀರದ ದಂಪತಿ?
ನವದೆಹಲಿ, ಮಾರ್ಚ್.08: ರಾಷ್ಟ್ರ ರಾಜಧಾನಿ ಹೊತ್ತಿ ಉರಿಯಲು ಪ್ರಚೋದನೆ ನೀಡಿದ್ದರು ಎನ್ನಲಾದ ದಂಪತಿಯನ್ನು ದೆಹಲಿಯ ವಿಶೇಷ ತನಿಖಾಧಿಕಾರಿಗಳ ತಂಡವು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ಸ್ಫೋಟ ವಿಚಾರಗಳು ಹೊರ ಬಿದ್ದಿವೆ.
ಜಮ್ಮು-ಕಾಶ್ಮೀರ ರಾಜಧಾನಿ ಶ್ರೀನಗರ್ ಮೂಲದ ಜಹಾನ್ ಜೈಬ್ ಸಮಿ ಮತ್ತು ಪತ್ನಿ ಹೀನಾ ಬಶೀರ್ ಬೇಗ್ ಇಸ್ಲಾಮಿಕ್ ಸ್ಟೇಟ್ಸ್ ಖೋರಸಾನ್ ಪ್ರೊವಿಯನ್ಸ್ ಎಂಬ ಉಗ್ರ ಸಂಘಟನೆಯ ಕಾರ್ಯಕರ್ತರು ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ದೆಹಲಿ ಗಲಭೆಗೂ ಮುನ್ನ ವಾಟ್ಸಾಪ್ ಗ್ರೂಪ್ಗಳಲ್ಲಿ ನಡೆದಿತ್ತು ಸಂಚು!
ಜಿಹಾದ್ ಚಿಂತನೆಗಳನ್ನು ಪ್ರಚುರಪಡಿಸುವಂತಾ ಸಂದೇಶಗಳನ್ನು ಹರಡಲು ಈ ದಂಪತಿ ಬಳಸುತ್ತಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ದೆಹಲಿ ವಿಶೇಷ ತನಿಖಾ ತಂಡದ ಡೆಪ್ಯುಟಿ ಕಮಿಷನರ್ ಪ್ರಮೋದ್ ಸಿಂಗ್ ಕುಶ್ವಹಾ ತಿಳಿಸಿದ್ದಾರೆ.

ಸಿಎಎ ವಿರೋಧಿ ಹೋರಾಟದ ಲಾಭ ಪಡೆಯುವ ತಂತ್ರ
ರಾಷ್ಟ್ರ ರಾಜಧಾನಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯನ್ನೇ ದಂಪತಿಯು ತಮ್ಮ ಕಾರ್ಯಸಾಧನೆಗೆ ಬಳಸಿಕೊಂಡಿದ್ದಾರೆ. ಐಸಿಸ್ ಮಾದರಿಯ ಖೋರಸಾನ್ ಸಂಘಟನೆಗೆ ಸೇರಿದವರು ಎನ್ನಲಾದ ಈ ದಂಪತಿ ಸಿಎಎ ವಿರೋಧಿ ಹೋರಾಟಕ್ಕೆ ಪ್ರಚೋದನೆ ನೀಡಿದ್ದರು ಎಂದು ಶಂಕಿಸಲಾಗಿದೆ.

ಭಾರತದಲ್ಲಿ ಆತ್ಮಾಹುತಿ ಬಾಂಬ್ ದಾಳಿಗೆ ಸಂಚು
ಭಾರತದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಸಂಚು ಹಾಕಿಕೊಂಡು ಉಗ್ರ ಸಮಿ ಆಗಮಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಯ ಜೊತೆಗೆ ನಿರಂತರ ಸಂಪರ್ಕವನ್ನು ಹೊಂದಿದ್ದನು ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.

ಮುಸ್ಲಿಮರನ್ನು ಒಗ್ಗೂಡಿಸಲು ಆನ್ ಲೈನ್ ವೇದಿಕೆ
ಭಾರತದಲ್ಲಿ ನಡೆಯುತ್ತಿದ್ದ ಸಿಎಎ ವಿರೋಧಿ ಹೋರಾಟವನ್ನು ಬಲಪಡಿಸಲು ಸಮಿ ಸಾಮಾಜಿಕ ಜಾಲತಾಣಗಳನ್ನೇ ವೇದಿಕೆಯಾಗಿ ಮಾಡಿಕೊಂಡಿದ್ದನು. ಆನ್ ಲೈನ್ ನಲ್ಲಿ ಸಿಎಎ ವಿರುದ್ಧ ಮುಸ್ಲೀಮರನ್ನೆಲ್ಲ ಒಗ್ಗೂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರಚೋದಿಸುವ ಕೆಲಸ ಮಾಡುತ್ತಿರುವುದಾಗಿ ವಿಚಾರಣೆ ವೇಳೆ ಸಮಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಪತಿಗೆ ತಕ್ಕ ಪತ್ನಿಯಾಗಿದ್ದ ಹೀನಾ ಬಶೀರ್ ಬೇಗ್
ದೆಹಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಸಮಿಗೆ ಹೀನಾ ಬಶೀರ್ ಬೇಗ್ ಪತಿಗೆ ತಕ್ಕ ಪತ್ನಿ. ಹೀನಾ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುವಂತಾ ಸಿಎಎ ವಿರೋಧಿ ಹೋರಾಟದ ಹಾದಿ ತಪ್ಪಿಸುವಂತಾ ಕೆಲಸವನ್ನು ಮಾಡಿರುವುದಾಗಿ ಸ್ವತಃ ಸಮಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.












Click it and Unblock the Notifications