ದೆಹಲಿ ಫಲಿತಾಂಶ : ನಾಯಕರ ಸೋಲು ಗೆಲುವಿನ ವಿಶ್ಲೇಷಣೆ
ನವದೆಹಲಿ, ಏಪ್ರಿಲ್ 26 : ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಭಾರೀ ಮುಖಭಂಗ ಅನುಭವಿಸಿ, ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳ ಡ್ರಾಮಾ ಶುರುವಾಗಿದೆ.
ಸೋಲನ್ನು ಸ್ವೀಕರಿಸಲು ತಯಾರಿಲ್ಲದ ಆಮ್ ಆದ್ಮಿ ಪಕ್ಷ ತನ್ನ ಹೀನಾಯ ಸೋಲಿನ ಹೊಣೆಯನ್ನು ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಮೇಲೆ ಹೇರುವ ಬದಲು ಆತ್ಮವಿಮರ್ಶೆಯಲ್ಲಿ ತೊಡಗಬೇಕು ಎಂಬ ಮಾತುಗಳು ಟ್ವಿಟ್ಟರಲ್ಲಿ ಹರಿದಾಡುತ್ತಿವೆ.[ವಿದ್ಯುತ್ ದರ ಇಳಿಸಿ, ಉಚಿತ ನೀರು ಕೊಟ್ಟರೂ ಜನ ವೋಟು ಹಾಕ್ಲಿಲ್ಲ]
ದೆಹಲಿಯ ಮತದಾರರು ಅರವಿಂದ್ ಕೇಜ್ರಿವಾಲ್ ಅವರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರಿಂದ ಅವರು ಕೂಡಲೆ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕು, ದೆಹಲಿ ಸರಕಾರವನ್ನು ವಿಸರ್ಜಿಸಿ ವಿಧಾನಸಭೆಗೆ ಚುನಾವಣೆ ಘೋಷಿಸಬೇಕು ಎಂದು ಬಿಜೆಪಿ ನಾಯಕರು ದುಂಬಾಲು ಬಿದ್ದಿದ್ದಾರೆ.
ಇದಕ್ಕೆ ಪ್ರತಿಯಾಗಿ, ಅರವಿಂದ್ ಕೇಜ್ರಿವಾಲ್ ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಆದರೆ, 200 ಸ್ಥಾನಗಳನ್ನು ಗೆಲ್ಲಲು ಸೋತ ನರೇಂದ್ರ ಮೋದಿ ಅವರೇ ಪ್ರದಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂಬ ತಮಾಷೆಯ ಟ್ವೀಟುಗಳು ಕೂಡ ಹರಿದಾಡುತ್ತಿವೆ.[ಬಿಜೆಪಿಯ ದೆಹಲಿ ವಿಜಯ ಹುತಾತ್ಮ ಸಿಆರ್ಪಿಎಫ್ ಜವಾನರಿಗೆ ಅರ್ಪಣೆ]
ಮತ್ತೊಂದೆಡೆ, ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷ ಆತ್ಮವಿಮರ್ಶೆಯಲ್ಲಿ ತೊಡಗಿದೆ. ಕೆಲವು ನಾಯಕರು ಮುಕ್ತವಾಗಿ ಭಾರತೀಯ ಜನತಾ ಪಕ್ಷವನ್ನು ಅಭಿನಂದಿಸುತ್ತಿದ್ದರೆ, ಕೆಲವರು ಈ ಸೋಲಿಗೆ ಸಂಘಟಿತ ಹೋರಾಟದ ವೈಫಲ್ಯವೇ ಕಾರಣ ಎನ್ನುತ್ತಿದ್ದಾರೆ. ಸೋಲು ಗೆಲುವಿನ ಬಗ್ಗೆ ಯಾರು ಏನು ಹೇಳುತ್ತಿದ್ದಾರೆ...

ಬಿಜೆಪಿಯ ವಿಜಯರಥ ಮತ್ತಷ್ಟು ಮುಂದೆ ಸಾಗಿದೆ
ದೆಹಲಿಯ ಗೆಲುವು ಬಿಜೆಪಿಯ ವಿಜಯರಥವನ್ನು ಮತ್ತಷ್ಟು ಮುಂದೆ ತೆಗೆದುಕೊಂಡು ಹೋಗಿದೆ. ಈ ವಿಜಯಕ್ಕೆ ನರೇಂದ್ರ ಮೋದಿ ಅವರ ಅಲೆಯೇ ಕಾರಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗೆ ಶಶಿ ತರೂರ್ ಅಭಿನಂದನೆ
ಮುನ್ಸಿಪಲ್ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಅಭಿನಂದನೆ ಸಲ್ಲಿಸಿದ್ದಾರೆ. ತನ್ನ ಮತಬಲವನ್ನು ಹೆಚ್ಚಿಸಿಕೊಂಡಿರುವ ಕಾಂಗ್ರೆಸ್ಸಿಗೂ ಅವರು ಅಭಿನಂದನೆ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಅಮೂಲಾಗ್ರ ಬದಲಾವಣೆಗಳಾಗಬೇಕಿದೆ ಎಂದು ವಿಮರ್ಶೆ ಮಾಡಿದ್ದಾರೆ.

ಸೋಲಿನ ಹೊಣೆ ಹೊತ್ತು ಅಜಯ್ ರಾಜೀನಾಮೆ
ದೆಹಲಿಯಲ್ಲಿ ಆದ ಸೋಲಿಗೆ ನೈತಿಕ ಹೊಣೆ ಹೊತ್ತು ನಾನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡುತ್ತಿದ್ದೇನೆ. ಇನ್ನು ಒಂದು ವರ್ಷ ಯಾವುದೇ ಜವಾಬ್ದಾರಿಯನ್ನು ಸ್ವೀಕರಿಸುವುದಿಲ್ಲ. ಕೇವಲ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದಿದ್ದಾರೆ ಅಜಯ್ ಮಾಕೇನ್.

ಬಿಜೆಪಿ ಹಾಸ್ಯಾಸ್ಪದ ಹೇಳಿಕೆ
ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ಟ್ಯಾಂಪರಿಂಗ್ ಬಗ್ಗೆ ಬಿಜೆಪಿ ನಾಯಕರೇ ಪುಸ್ತಕಗಳನ್ನು ಬರೆದಿದ್ದಾರೆ. ಆದರೆ, ಈಗ ಇವಿಎಂಗಳಲ್ಲಿ ತಪ್ಪೇನೂ ಇಲ್ಲ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆರೋಪಿಸಿದ್ದಾರೆ.

ಶೀಲಾ ದೀಕ್ಷಿತ್ ವಾಗ್ದಾಳಿ
ದೆಹಲಿಯಲ್ಲಿ ನಾವು ಇನ್ನಷ್ಟು ಹುಮ್ಮಸ್ಸಿನಿಂದ ಪ್ರಚಾರ ಮಾಡಬೇಕಿತ್ತು. ನಾನು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿಲ್ಲ. ಏಕೆಂದರೆ, ನನಗೆ ಪ್ರಚಾರಕಾರ್ಯದಲ್ಲಿ ಭಾಗವಹಿಸಬೇಕೆಂದು ಯಾರೂ ಹೇಳಿರಲಿಲ್ಲ ಎಂದು ಹೇಳಿದ್ದಾರೆ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್.

ಆಪ್ ಅನ್ನು ಪರೋಕ್ಷವಾಗಿ ತಿವಿದ ಗಡ್ಕರಿ
ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಚುನಾವಣೆಯ ಅವಿಭಾಜ್ಯ ಅಂಗ. ಮತದಾರರ ಅಣತಿಯನ್ನು ಪ್ರಬುದ್ಧತೆಯಿಂದ ಒಪ್ಪಿಕೊಳ್ಳಲೇಬೇಕು ಎಂದು ನಿತಿನ್ ಗಡ್ಕರಿ ಅವರು ಆಮ್ ಆದ್ಮಿ ಪಕ್ಷಕ್ಕೆ ಪರೋಕ್ಷವಾಗಿ ತಿವಿದಿದ್ದಾರೆ.












Click it and Unblock the Notifications