ಹೈಕೋರ್ಟ್ನಲ್ಲಿಯೂ ಡಿಕೆ ಶಿವಕುಮಾರ್ಗೆ ನಿರಾಸೆ
Recommended Video
ನವದೆಹಲಿ, ಸೆಪ್ಟೆಂಬರ್ 30: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ದೆಹಲಿ ಹೈಕೋರ್ಟ್ನಿಂದಲೂ ನಿರಾಸೆಯಾಗಿದೆ. ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಗಾಗಿ ಬಂಧನದಲ್ಲಿರುವ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಮುಂದೂಡಿದೆ.
ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ಸೋಮವಾರ ವಿಚಾರಣೆಗೆ ಒಳಪಡಿಸಿದ ನ್ಯಾ. ಸುರೇಶ್ ಕುಮಾರ್ ಅವರ ಏಕಸದಸ್ಯ ಪೀಠವು ಜಾಮೀನು ಅರ್ಜಿಯನ್ನು ಅ.14ಕ್ಕೆ ಮುಂದೂಡಿದೆ. ಈ ದಿನದ ಒಳಗೆ ಜಾರಿ ನಿರ್ದೇಶನಾಲಯವು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಹಾಗಾಗಿ ಡಿಕೆ ಶಿವಕುಮಾರ್ ಅವರು ಜೈಲಿನಲ್ಲಿಯೇ ಇರುವುದು ಅನಿವಾರ್ಯವಾಗಲಿದೆ.
ಡಿಕೆ ಶಿವಕುಮಾರ್ ಜಾಮೀನು ಅರ್ಜಿ ತಿರಸ್ಕೃತವಾಗಲು ಕಾರಣಗಳೇನು?
ಅತ್ತ ಜಾರಿ ನಿರ್ದೇಶನಾಲಯವು ಡಿಕೆ ಶಿವಕುಮಾರ್ ಅವರ ಸಹೋದರ, ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಇದರಿಂದ ಒಂದೇ ದಿನ ಡಿಕೆ ಶಿವಕುಮಾರ್ ಅವರ ಕುಟುಂಬಕ್ಕೆ ಎರಡು ಸಂಕಷ್ಟ ಎದುರಾಗಿದೆ.
ಡಿಕೆ ಶಿವಕುಮಾರ್ಗೆ ಮತ್ತೆ ಆಘಾತ
ಸೆ. 25ರಂದು ಡಿಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ತಿರಸ್ಕರಿಸಿದ್ದರು. ಹೀಗಾಗಿ ಅವರ ಪರ ವಕೀಲರು ಗುರುವಾರ ಹೈಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ಸೋಮವಾರಕ್ಕೆ ನಿಗದಿಪಡಿಸಲಾಗಿತ್ತು. ಸೋಮವಾರವೇ ತೀರ್ಪು ದೊರೆತು ತಮ್ಮ ಪರವಾಗಿ ತೀರ್ಪು ಬರಲಿದೆ ಎಂದು ಡಿಕೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ನಿರೀಕ್ಷಿಸಿದ್ದರು. ಆದರೆ ಅಲ್ಲಿ ಕೂಡ ಅವರಿಗೆ ಆಘಾತ ಎದುರಾಗಿದೆ.
ಡಿ.ಕೆ.ಶಿವಕುಮಾರ್ ಜೈಲು ವಾಸಕ್ಕೆ ಕಾರಣ ಬಿಚ್ಚಿಟ್ಟ ತಮ್ಮ ಡಿ.ಕೆ.ಸುರೇಶ್
14 ದಿನಗಳ ಕಾಲಾವಕಾಶ
ಜಾಮೀನು ಅರ್ಜಿ ವಿಚಾರಣೆ ಮಾಡಲು ಆಕ್ಷೇಪ ವ್ಯಕ್ತಪಡಿಸಲು ಪ್ರತಿವಾದಿಗಳ ಗಮನಕ್ಕೆ ತರಬೇಕಿತ್ತು. ಹೀಗಾಗಿ ನ್ಯಾ. ಸುರೇಶ್ ಕುಮಾರ್ ಅವರು ಜಾರಿ ನಿರ್ದೇಶನಾಲಯಕ್ಕೆ ಆಕ್ಷೇಪ ವ್ಯಕ್ತಪಡಿಸಲು 14 ದಿನಗಳ ಕಾಲಾವಕಾಶ ನೀಡಿ ಸೂಚನೆ ನೀಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆ. 3ರಂದು ಇ.ಡಿ. ಡಿಕೆ ಶಿವಕುಮಾರ್ ಅವರನ್ನು ಬಂಧಿಸಿತ್ತು. ಇದಕ್ಕೂ ಮೊದಲು ಆಗಸ್ಟ್ 30ರಿಂದ ಸತತ ನಾಲ್ಕು ದಿನ ವಿಚಾರಣೆಗೆ ಒಳಪಡಿಸಿತ್ತು. ಬಳಿಕ ಅವರನ್ನು ವಿಶೇಷ ನ್ಯಾಯಾಲಯವು ಇ.ಡಿ ವಶಕ್ಕೆ ಒಪ್ಪಿಸಿತ್ತು. 14 ದಿನಗಳ ವಿಚಾರಣೆಯ ನಂತರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅ. 1ರಂದು ಅಂದರೆ, ನಾಳೆ ಅವರ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿದೆ.
ನಾಳೆ ನ್ಯಾಯಾಲಯದ ತೀರ್ಪು ಏನಾಗಲಿದೆ?
ಡಿಕೆ ಶಿವಕುಮಾರ್ ಅವರು ಇನ್ನೂ ಒಂದು ದಿನ ಜೈಲಿನಲ್ಲಿಯೇ ಇರಬೇಕಾಗಿದ್ದು, ಮಂಗಳವಾರ ಇಡಿ ನ್ಯಾಯಾಲಯದ ಮುಂದೆ ಪುನಃ ಹಾಜರಾಗಬೇಕಿದೆ. ತನಿಖೆ ಸಂದರ್ಭದಲ್ಲಿ ಅವರಿಂದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅವರ ಆಸ್ತಿ ಸಂಪಾದನೆ, ಅಕ್ರಮ ವ್ಯವಹಾರಗಳ ಬಗ್ಗೆ ಇನ್ನಷ್ಟು ಮಾಹಿತಿ ದೊರಕಿದೆ. ಅವರನ್ನು ಮತ್ತಷ್ಟು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ. ಅವರನ್ನು ಬಿಡುಗಡೆ ಮಾಡಿದರೆ ತಮ್ಮ ಪ್ರಭಾವ ಬೀರಿ ಸಾಕ್ಷ್ಯ ನಾಶಮಾಡುವ ಅಪಾಯ ಇದೆ ಎಂಬ ವಾದ ಮುಂದಿಟ್ಟು ಇ.ಡಿ. ಅವರ ಬಂಧನದ ಅವಧಿಯನ್ನು ವಿಸ್ತರಿಸುವಂತೆ ಕೋರುವ ಸಾಧ್ಯತೆ ಇದೆ.
ಡಿಕೆಶಿಗೆ ಇ.ಡಿಯಿಂದ ಮಾನಸಿಕ ಕಿರುಕುಳ: ಮಾನವ ಹಕ್ಕು ಆಯೋಗಕ್ಕೆ ದೂರು
ಡಿಕೆಶಿ ಮತ್ತು ಮಗಳ ವಿಚಾರಣೆ
ಡಿಕೆ ಶಿವಕುಮಾರ್ ಮತ್ತು ಅವರ ಮಗಳು ಐಶ್ವರ್ಯಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಐಶ್ವರ್ಯಾ ಅವರ ಬ್ಯಾಂಕ್ ಖಾತೆಯಿಂದ ಕೋಟ್ಯಂತರ ರೂ. ಹಣ ವರ್ಗಾವಣೆ ಆಗಿರುವುದರ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿಗಳನ್ನು ಕಲೆಹಾಕಿದ್ದಾರೆ.
2017ರ ಆಗಸ್ಟ್ 2ರಂದು ಡಿ. ಕೆ. ಶಿವಕುಮಾರ್ ದೆಹಲಿ ನಿವಾಸ ಮತ್ತು ಆಪ್ತರ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. ಆಗ 8.59 ಕೋಟಿ ರೂ. ಹಣ ಸಿಕ್ಕಿತ್ತು. ಈ ಹಣಕ್ಕೆ ಯಾವುದೇ ದಾಖಲೆ ಇಲ್ಲ. ಅಕ್ರಮ ಹಣ ವರ್ಗಾವಣೆ ಮೂಲಕ ದೆಹಲಿಗೆ ಹಣ ಸಾಗಿಸಲಾಗಿತ್ತು ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.