ಎಚ್ಚರಿಕೆ ಸಂದೇಶ ಇಲ್ಲದೇ ಭ್ರೂಣ ಲಿಂಗಪತ್ತೆಯ ದೃಶ್ಯ ಪ್ರಸಾರ ಬೇಡ: ದೆಹಲಿ ಹೈಕೋರ್ಟ್
ನವದೆಹಲಿ, ಮೇ 9: ರಣವೀರ್ ಸಿಂಗ್ ನಟನೆಯ "ಜಯೇಶ್ ಭಾಯ್ ಜೋರ್ದಾರ್" (Jayeshbhai Jordar) ಸಿನಿಮಾ ಈಗ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆಯ ವಸ್ತವಾಗಿದೆ. ಈ ಬಾಲಿವುಡ್ ಸಿನಿಮಾದ ಟ್ರೇಲರ್ನಲ್ಲಿ ಪ್ರಸವಪೂರ್ವದಲ್ಲಿ ಮಗುವಿನ ಲಿಂಗ ಪತ್ತೆ ಮಾಡುವ ದಶ್ಯಗಳಿವೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯೊಂದರ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಕೈಗೆತ್ತಿಕೊಂಡಿದೆ. ಇಂದಿನ ವಿಚಾರಣೆಯಲ್ಲಿ, ನ್ಯಾಯಪೀಠವು ಯಾವುದೇ ಎಚ್ಚರಿಕೆ ಸಂದೇಶ ಅಥವಾ ಹಕ್ಕುನಿರಾಕರಣೆ ಸಂದೇಶ ಇಲ್ಲದೇ ಭ್ರೂಣ ಲಿಂಗಪತ್ತೆಯ ದೃಶ್ಯವನ್ನ ಸಿನಿಮಾದಲ್ಲಿ ತೋರಿಸುವಂತಿಲ್ಲ ಎಂದು ಹೇಳಿದೆ.
ನ್ಯಾ| ವಿಪಿನ್ ಸಂಘಿ ಮತ್ತು ನ್ಯಾ| ನವೀನ್ ಚಾವ್ಲಾ ಅವರಿದ್ದ ನ್ಯಾಯಪೀಠ, ಆರೋಪಿತ ಸಿನಿಮಾ ತಂಡದ ಪರ ವಕೀಲರಿಗೆ ಸಿನಿಮಾದಲ್ಲಿರುವ ಈ ವಿವಾದಿತ ದೃಶ್ಯವನ್ನು ತೋರಿಸಬೇಕೆಂದು ಸೂಚನೆ ನೀಡಿತು. ಇದಕ್ಕೆ ಸ್ಪಂದಿಸಿದ ವಕೀಲರು, ಅಧಿಕತ ವ್ಯಕ್ತಿಯೊಬ್ಬರ ಮೂಲಕ ಇಡೀ ಸಿನಿಮಾದ ಪ್ರತಿಯನ್ನು ನಾಳೆಯೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.
"ಈ ಸಿನಿಮಾ ಒಳ್ಳೆಯ ಸಂದೇಶ ನೀಡಬಹುದು. ಆದರೆ ಈ ದೃಶ್ಯದಲ್ಲಿ ಅಂಥ ಯಾವ ಸಂದೇಶವೂ ಇಲ್ಲ. ಯಾವ ಎಚ್ಚರಿಕೆ ಸಂದೇಶವೂ ಇಲ್ಲ" ಎಂದು ಟ್ರೇಲರ್ ದೃಶ್ಯಗಳನ್ನು ಉಲ್ಲೇಖಿಸುತ್ತಾ ದೆಹಲಿ ಉಚ್ಚ ನ್ಯಾಯಪೀಠ ಅಭಿಪ್ರಾಯಪಟ್ಟಿತು.

'ಜಯೇಶ್ಭಾಯ್ ಜೋರ್ದಾರ್' ಸಿನಿಮಾದ ಟ್ರೇಲರ್ನಲ್ಲಿ ಹೆಣ್ಣು ಭ್ರೂಣದ ಹತ್ಯೆಯ ದೃಶ್ಯ ಹಾಗು ಭ್ರೂಣಲಿಂಗ ಪತ್ತೆಯ ವಿಧಾನ ವಿವರಿಸುವ ದೃಶ್ಯಗಳನ್ನು ಯಾವುದೇ ಡಿಸ್ಕ್ಲೇಮರ್ ಇಲ್ಲದೇ ಪ್ರಸಾರ ಮಾಡಲಾಗಿದೆ. ಈ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಮನೀಶ್ ಜೈನ್ ಎಂಬುವವರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ಮಗುವಿನ ಪೋಷಕರು ಅಲ್ಟ್ರಾಸೌಂಡ್ ಕ್ಲಿನಿಕ್ವೊಂದರಲ್ಲಿ ಭ್ರೂಣದ ಲಿಂಗ ಪತ್ತೆಗೆ ಹೋಗುತ್ತಾರೆ. ಅಲ್ಲಿ ವೈದ್ಯರೊಬ್ಬರು ಒಂದು ಮೆಷೀನ್ನಲ್ಲಿ ತಾಯಿಯ ಗರ್ಭದಲ್ಲಿರುವ ಭ್ರೂಣದ ರೇಡಿಯಾಲಜಿ ಚಿತ್ರಗಳನ್ನ ತೋರಿಸುತ್ತಾರೆ. ಬಳಿಕ ಹೆಣ್ಣು ಭ್ರೂಣದ ಅಬಾರ್ಷನ್ ಮಾಡಲಾಗುತ್ತದೆ. ಇದು ಜಯೇಶ್ ಭಾಯ್ ಜೋರ್ದಾರ್ ಸಿನಿಮಾದ ಟ್ರೇಲರ್ನಲ್ಲಿರುವ ದೃಶ್ಯವಾಗಿದೆ. ಈ ದೃಶ್ಯದಲ್ಲಿ ಯಾವುದೇ ಡಿಸ್ಕ್ಲೇಮರ್ ಹಾಕಲಾಗಿಲ್ಲ ಎಂಬುದು ಅರ್ಜಿದಾರರು ಎತ್ತಿರುವ ಪ್ರಮುಖ ಆಕ್ಷೇಪ. ನ್ಯಾಯಾಲಯ ಕೂಡ ಇದೇ ವಿಚಾರವನ್ನು ಎತ್ತಿಹಿಡಿದು ಸಿನಿಮಾ ತಯಾರಿಕರ ಕಿವಿಹಿಂಡಿದೆ.

ಭಾರತದಲ್ಲಿ ಪ್ರಸವಪೂರ್ವದಲ್ಲಿ ಮಗುವಿನ ಲಿಂಗ ಪತ್ತೆ ಮಾಡುವುದು ಕಾನೂನು ಪ್ರಕಾರ ನಿಷಿದ್ಧ. ಯಾವುದೇ ವೈದ್ಯರೂ ಈ ಕೆಲಸ ಮಾಡಿದರೆ ಜೈಲು ಶಿಕ್ಷೆಗೆ ಒಳಪಡುವಷ್ಟು ಕಠಿಣ ಕಾನೂನು ಇದೆ. ಹಾಗೆಯೆ, ಲಿಂಗ ಕಾರಣಕ್ಕೆ ಭ್ರೂಣ ಹತ್ಯೆ (ಅಬಾರ್ಷನ್) ಮಾಡುವುದೂ ನಿಷಿದ್ಧವಿದೆ. ಗರ್ಭಾವಸ್ಥೆಯಲ್ಲಿ ವೈದ್ಯಕೀಯವಾಗಿ ಅಪಾಯ ಇದ್ದಂತಹ ಕೆಲ ಸಂದರ್ಭದಲ್ಲಿ ಮಾತ್ರ ಭ್ರೂಣ ಹತ್ಯೆ ಮಾಡಬಹುದು. ಇಲ್ಲದಿದ್ದರೆ ಅದು ಅಕ್ರಮವಾಗುತ್ತದೆ.
ನಾಳೆ ಮಂಗಳವಾರದಂದು ದೆಹಲಿ ಹೈಕೋರ್ಟ್ ನ್ಯಾಯಪೀಠದಲ್ಲಿ ಮತ್ತೆ ವಿಚಾರಣೆ ಇದೆ. ಸಿನಿಮಾ ತಯಾರಕರು ಇಡೀ ಸಿನಿಮಾದ ಪ್ರತಿಯನ್ನು ಕೋರ್ಟ್ಗೆ ಸಲ್ಲಿಸುವುದಾಗಿ ಹೇಳಿದ್ದಾರೆ.
ಇನ್ನು, ಯಶ್ ರಾಜ್ ಫಿಲಂಸ್ ಬ್ಯಾನರ್ ಅಡಿ ತಯಾರಾಗಿರುವ ಈ ಚಿತ್ರದಲ್ಲಿ ರಣವೀರ್ ಸಿಂಗ್ ಪ್ರಗತಿಪರ ವ್ಯಕ್ತಿಯ ಪಾತ್ರ ನಿರ್ವಹಿಸಿದ್ದಾರೆ. ಇದು ಮೇ 13ರಂದು ಥಿಯೇಟರ್ನಲ್ಲಿ ಬಿಡುಗಡೆಗೆ ಸಿದ್ಧವಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications