ಚುನಾವಣಾ ಸಮಾವೇಶದಲ್ಲಿ ಮಾರ್ಗಸೂಚಿ ಉಲ್ಲಂಘನೆ; ದೆಹಲಿ ಹೈಕೋರ್ಟ್ಗೆ ಅರ್ಜಿ
ನವದೆಹಲಿ, ಮಾರ್ಚ್ 22: ಚುನಾವಣಾ ಸಮಾವೇಶ ನಡೆಸುವಾಗ ರಾಜಕೀಯ ನಾಯಕರು ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿದ್ದಾರೆ. ಮಾರ್ಗಸೂಚಿ ಉಲ್ಲಂಘಿಸುವ ಅಭ್ಯರ್ಥಿಗಳಿಗೆ ಪ್ರಚಾರದಲ್ಲಿ ಭಾಗಿಯಾಗದಂತೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಸೋಮವಾರ ಈ ಅರ್ಜಿ ಕೈಗೆತ್ತಿಕೊಂಡ ದೆಹಲಿ ಹೈಕೋರ್ಟ್, ಈ ಅರ್ಜಿಗೆ ಉತ್ತರ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಹಾಗೂ ಜಸ್ಮೀತ್ ಸಿಂಗ್ ಅವರನ್ನೊಳಗೊಂಡ ನ್ಯಾಯ ಪೀಠ ಈ ಅರ್ಜಿ ವಿಚಾರಣೆಯನ್ನು ಏಪ್ರಿಲ್ 30ಕ್ಕೆ ಮುಂದೂಡಿದೆ.
ಕೋವಿಡ್ ಸಂಖ್ಯೆ ಹೆಚ್ಚಳ; ಬಿಬಿಎಂಪಿ ಮಾರ್ಷಲ್ಗಳಿಗೆ ಹೆಚ್ಚಿನ ಅಧಿಕಾರ
ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಯಲ್ಲಿ ಮಾರ್ಚ್ 27ರಿಂದ ಏಪ್ರಿಲ್ 29ರವರೆಗೂ ವಿವಿಧ ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂದು ಪ್ರಸ್ತಾಪಿಸಿರುವ ಚುನಾವಣಾ ಆಯೋಗ ಪರ ವಕೀಲ ಸಿದ್ದಾಂತ್ ಕುಮಾರ್, "ದೆಹಲಿಯಲ್ಲಿ ಯಾವುದೇ ಚುನಾವಣೆ ನಡೆಯುತ್ತಿಲ್ಲ. ಹೀಗಿದ್ದಾಗ ನಿಯಮಗಳ ಉಲ್ಲಂಘನೆ ಎಲ್ಲಿ ಆಗಿದೆ? ನಿಯಮ ಉಲ್ಲಂಘನೆಯಾದ ಸ್ಥಳಗಳ ಬಗ್ಗೆ ಸೂಕ್ತ ಮಾಹಿತಿ ನೀಡಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಚುನಾವಣಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು ಎಂದು ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಆದರೆ ಚುನಾವಣಾ ಪ್ರಚಾರಗಳಲ್ಲಿ ಅಭ್ಯರ್ಥಿಗಳು ಈ ನಿಯಮ ಪಾಲನೆ ಮಾಡದೇ ಮಾರ್ಗಸೂಚಿ ಉಲ್ಲಂಘಿಸುತ್ತಿದ್ದಾರೆ. ಕೆಲವು ಫೋಟೊ ಮತ್ತು ವಿಡಿಯೋಗಳಲ್ಲಿ ಇದು ಗೋಚರಿಸುತ್ತಿದೆ ಎಂದು ಅರ್ಜಿದಾರರ ಪರ ವಕೀಲ ಗೌರವ್ ಪಾಠಕ್ ವಾದಿಸಿದ್ದಾರೆ.
ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆದರೆ ರಾಜಕೀಯ ನಾಯಕರು ಚುನಾವಣಾ ಪ್ರಚಾರದಲ್ಲಿ ಮಾಸ್ಕ್ ಧರಿಸದೇ ಇನ್ನೊಬ್ಬರ ಹಕ್ಕಿಗೆ ಕುಂದು ತರುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.