ದೆಹಲಿ ಚುನಾವಣೆ: ಅರವಿಂದ ಕೇಜ್ರಿವಾಲ್, ಬಿಜೆಪಿ ರಾಜಕೀಯದ ಸುತ್ತಾ

ನವದೆಹಲಿ, ಫೆಬ್ರವರಿ 11: ರಾಷ್ಟ್ರ ರಾಜಧಾನಿಯ ಅಧಿಕಾರ ಗದ್ದುಗೆ ಯಾರು ಏರಬೇಕೆಂದು ದೆಹಲಿಯ ಜನ ತೀರ್ಪು ನೀಡಿದ್ದಾರೆ. ಎಪ್ಪತ್ತು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 62 ಕ್ಷೇತ್ರದಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಎಎಪಿ ಜಯಗಳಿಸಿದೆ.

ಎಎಪಿ 62 ಸ್ಥಾನಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದರೆ, ಬಿಜೆಪಿ 8 ಸ್ಥಾನಗಳಲ್ಲಿ ಗೆದ್ದಿದೆ. ಸತತ ಹದಿನೈದು ವರ್ಷ ದೆಹಲಿ ಆಳಿದ್ದ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ. ಎಎಪಿಗೆ 53.60% ಮತ ಪಾಲು ಸಿಕ್ಕಿದ್ದರೆ, ಬಿಜೆಪಿ 38.50% ಮತ ಪಾಲು ದೊರೆತಿದೆ.

ಚುನಾವಣೆ ಘೋಷಣೆಯಾದಂದಿನಿಂದಲೇ ಎಎಪಿ-ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಸಿಎಎ, ಎನ್‌ಆರ್‌ಸಿ, ರಾಮಮಂದಿರ, ಆರ್ಥಿಕ ಹಿಂಜರಿತ, ನಿರುದ್ಯೋಗ, ಪಾಕಿಸ್ತಾನ, ಭಯೋತ್ಪಾದನೆ, ಶಾಹೀನ್ ಬಾಗ್ ಪ್ರತಿಭಟನೆ, ಜೆಎನ್‌ಯು, ಜಾಮಿಯಾ ವಿವಿ ಪ್ರತಿಭಟನೆ ಮುಂತಾದ ವಿಷಯಗಳು ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಚರ್ಚೆಗೆ ಬಂದಿದ್ದವು. ಆದರೆ ಮತದಾರ ಮಾತ್ರ ಸ್ಥಳೀಯ ವಿಷಯಗಳಿಗೆ ಆದ್ಯತೆ ನೀಡಿ ಮತಚಲಾಯಿಸಿ ಎಎಪಿಯನ್ನು ಮತ್ತೊಮ್ಮೆ ಆರಿಸಿದ್ದಾರೆ.

ಸಾಧನೆಗಳ ಪಟ್ಟಿ ಹೊತ್ತು ಬಂದ ಎಎಪಿ

ಸಾಧನೆಗಳ ಪಟ್ಟಿ ಹೊತ್ತು ಬಂದ ಎಎಪಿ

ಎಎಪಿಯು ತನ್ನ ಆಡಳಿತದ ಸಾಧನೆಗಳ ಪಟ್ಟಿ ಹೊತ್ತು ಜನರ ಮುಂದೆ ಬಂದಿತ್ತು. ಶಿಕ್ಷಣ, ಆಸ್ಪತ್ರೆ, ವಿದ್ಯುತ್, ಸಿಸಿಟಿವಿ, ಮಹಿಳೆಯರಿಗೆ ಉಚಿತ ಪ್ರಯಾಣ ಇದೇ ವಿಷಯಗಳೇ ಎಎಪಿಯ ಚುನಾವಣೆ ಪ್ರಚಾರದ ವಿಷಯಗಳಾಗಿದ್ದವು. ಬಿಜೆಪಿಯ ಕೆಲವು ನಾಯಕರು ಎಎಪಿಯನ್ನು ಎಷ್ಟೇ ಪ್ರಚೋದಿಸಲು ಯತ್ನಿಸಿದರೂ, ವಿಷಯದಿಂದ ಪಕ್ಕಕ್ಕೆ ಸರಿಯದೇ 'ಅಭಿವೃದ್ಧಿ ಆಧಾರದಲ್ಲಿ ಮತಯಾಚನೆ' ತಂತ್ರದಿಂದ ಹಿಂದೆ ಸರಿಯಲಿಲ್ಲ. ಎಎಪಿಯ ಈ ಕಾರ್ಯತಂತ್ರದ ಹಿಂದೆ ಚುನಾವಣಾ 'ಚಾಣಾಕ್ಷ' ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ಇರುವುದು ಸುಳ್ಳಲ್ಲ.

ಕೆಲಸ ಮಾಡಿದ ಕೇಜ್ರಿವಾಲರ 'ಮೃದು ಹಿಂದುತ್ವ'

ಕೆಲಸ ಮಾಡಿದ ಕೇಜ್ರಿವಾಲರ 'ಮೃದು ಹಿಂದುತ್ವ'

ಅಭಿವೃದ್ಧಿ ವಿಷಯಗಳು ಮಾತ್ರವಲ್ಲದೆ ಅರವಿಂದ ಕೇಜ್ರಿವಾಲ್ ಅವರು ಪ್ರದರ್ಶಿಸಿದ 'ಮೃದು ಹಿಂದುತ್ವ' ಸಹ ಚುನಾವಣೆಯಲ್ಲಿ ಅವರ ಕೈ ಹಿಡಿಯಿತು. ಹನುಮ ದೇವಾಲಯಕ್ಕೆ ಭೇಟಿ, ವೇದಿಕೆಯಲ್ಲಿ ಹನುಮಾನ್ ಚಾಲೀಸ ಪಠಣ, ರಾಮ ಮಂದಿರ ನಿರ್ಮಾಣಕ್ಕೆ ಪಾರ್ಶ್ವ ಬೆಂಬಲ, ಇವೆಲ್ಲವೂ, ಕೇಜ್ರಿವಾಲ್ ಅವರನ್ನು 'ಹಿಂದು ವಿರೋಧಿ' ಎಂದು ಬಿಂಬಿಸಲು ಯತ್ನಿಸಿದ ಬಿಜೆಪಿ ಯತ್ನಗಳನ್ನು ವಿಫಲಗೊಳಿಸಿತು.

ಸ್ಥಳೀಯ ನಾಯಕರು ಇಲ್ಲದ ಕೊರತೆ ಕಾಡಿತು

ಸ್ಥಳೀಯ ನಾಯಕರು ಇಲ್ಲದ ಕೊರತೆ ಕಾಡಿತು

ಗಟ್ಟಿಯಾದ ಸ್ಥಳೀಯ ನಾಯಕರು ಇಲ್ಲದಿರುವುದೇ ಬಿಜೆಪಿಯ ಮೊದಲ ಹಿನ್ನಡೆಯಾಯಿತು. 'ನಿಮ್ಮ ಸಿಎಂ ಅಭ್ಯರ್ಥಿಯನ್ನು ಘೋಷಿಸಿ' ಎಂದು ಪದೇ-ಪದೇ ಅರವಿಂದ ಕೇಜ್ರಿವಾಲ್ ಬಿಜೆಪಿಯ ಕಾಲೆಳೆದರು. ಆದರೆ ದೆಹಲಿ ಬಿಜೆಪಿ ಮುಖಂಡರು ಇತರ ರಾಜ್ಯಗಳ ಮುಖಂಡರಂತೆ ಮೋದಿ ಮತ್ತು ಅಮಿತ್ ಶಾ ಬೆನ್ನ ಹಿಂದೆ ನಿಂತೇ ಚುನಾವಣೆ ಎದುರಿಸಿದರು.

ಸಿಎಎ-ಎನ್‌ಆರ್‌ಸಿ ವಿಷಯ ಪ್ರಭಾವ ಬೀರಿವೆ

ಸಿಎಎ-ಎನ್‌ಆರ್‌ಸಿ ವಿಷಯ ಪ್ರಭಾವ ಬೀರಿವೆ

ಸಿಎಎ-ಎನ್‌ಆರ್‌ಸಿ ವಿಷಯಗಳು ದೆಹಲಿ ಚುನಾವಣೆ ಮೇಲೆ ಪ್ರಭಾವ ಬೀರಿದ್ದನ್ನು ಸ್ಪಷ್ಟವಾಗಿ ಗುರುತಿಸಬಹುದು. ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ಹೆಚ್ಚಿದ್ದ ಪ್ರದೇಶದಲ್ಲಿ ಬಿಜೆಪಿ ಸೋಲು ಕಂಡಿದೆ. ದೆಹಲಿಯ ಜಾಮಿಯಾ ವಿವಿ ಹಾಗೂ ಜೆಎನ್‌ಯು ವಿದ್ಯಾರ್ಥಿಗಳ ಮೇಲಾದ ಹಿಂಸಾಚಾರದ ಘಟನೆಗಳು, ದೆಹಲಿ ಮತದಾರ, ಬಿಜೆಪಿಗೆ ವ್ಯತಿರಿಕ್ತವಾಗಿ ಮತಚಲಾಯಿಸಲು ಕಾರಣವಾಯಿತು.

ಆಯೋಗದ ಮೇಲೆ ಕೇಜ್ರಿವಾಲ್ ಗರಂ

ಆಯೋಗದ ಮೇಲೆ ಕೇಜ್ರಿವಾಲ್ ಗರಂ

ಫೆಬ್ರವರಿ 8 ರ ಮತದಾನದ ದಿನ ಕಡಿಮೆ ಮತದಾನ ಆಗಿದ್ದು ಎಎಪಿಯನ್ನು ಆತಂಕಕ್ಕೆ ತಳ್ಳಿತ್ತು. 2015 ರ ವಿಧಾನಸಭೆ ಚುನಾವಣೆಯಲ್ಲಿ 67.47% ಮತದಾನವಾಗಿದ್ದರೆ ಈ ಬಾರಿ 62.59% ಮತದಾನ ಆಗಿತ್ತು. ಚುನಾವಣಾ ಆಯೋಗ ಒಟ್ಟು ಮತದಾನ ಪ್ರಮಾಣ ಬಿಡುಗಡೆ ಮಾಡದ ಬಗ್ಗೆ ಕೇಜ್ರಿವಾಲ್ ಆಯೋಗದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆದರೆ ಇಂದು ಫಲಿತಾಂಶ ಎಎಪಿ ಪರವೇ ಆಗಿದೆ.

ಫೆಬ್ರವರಿ 14 ರಂದು ಪ್ರಮಾಣ ವಚನ

ಫೆಬ್ರವರಿ 14 ರಂದು ಪ್ರಮಾಣ ವಚನ

ಗೆದ್ದ ನಂತರ ಭಾಷಣ ಮಾಡಿದ ಅರವಿಂದ ಕೇಜ್ರಿವಾಲ್, ದೆಹಲಿ ಜನತೆ, ಎಎಪಿ ಕಾರ್ಯಕರ್ತರು ಹಾಗೂ ತಮ್ಮ ಕುಟುಂಬಕ್ಕೆ ಧನ್ಯವಾದ ಅರ್ಪಿಸಿದರು. ಹನುಮ ದೇವರಿಗೆ ತಮ್ಮ ಧನ್ಯವಾದಗಳನ್ನು ತಿಳಿಸಲು ಮರೆಯಲಿಲ್ಲ. 'ಐದು ವರ್ಷ ನಾವು ಕೆಲಸ ಮಾಡಿತೋರಿಸಿದ್ದೇವೆ. ಮುಂದಿನ ಐದು ವರ್ಷದಲ್ಲಿ ನಿಮ್ಮ ಸಹಕಾರ ಹೆಚ್ಚಿನ ಅಗತ್ಯ ಇದೆ' ಎಂದು ದೆಹಲಿ ಜನರಲ್ಲಿ ಮನವಿ ಮಾಡಿದರು. ಫೆಬ್ರವರಿ 14 ರಂದು ಅರವಿಂದ ಕೇಜ್ರಿವಾಲ್ ಅವರು 3ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+