ಅಬು ಸಲೇಂ ವಿರುದ್ಧದ ಸುಲಿಗೆ ಪ್ರಕರಣ: ಇಂದು ತೀರ್ಪು ಪ್ರಕಟ ಸಾಧ್ಯತೆ
ನವದೆಹಲಿ, ಏಪ್ರಿಲ್ 09: ದೆಹಲಿಯ ಉದ್ಯಮಿ ಅಶೋಕ್ ಗುಪ್ತಾ ಅವರಿಗೆ 2002ರಲ್ಲಿ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟ ಸುಲಿಗೆ ಆರೋಪದ ಪ್ರಕರಣದಲ್ಲಿ ಅಬು ಸಲೇಂ ವಿರುದ್ಧದ ತೀರ್ಪನ್ನು ಪಾಟಿಯಾಲ ಹೌಸ್ ನ್ಯಾಯಾಲಯ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ.
ಕುಖ್ಯಾತ ಗ್ಯಾಂಗ್ಸ್ಟರ್ ಅಬು ಸಲೇಂ ಈ ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾನೆ. ಆದರೆ, 1993ರ ಮುಂಬೈ ಸರಣಿ ಸ್ಫೋಟ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಡಿ ಆತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಎರಡು ವಾರಗಳ ಹಿಂದೆ ಪ್ರಕರಣದ ಅಂತಿಮ ವಿಚಾರಣೆ ನಡೆದಿತ್ತು.

ಸುಲಿಗೆ ಪ್ರಕರಣದಲ್ಲಿ ತನ್ನ ವಿರುದ್ಧ ಪ್ರಾಸಿಕ್ಯೂಷನ್ ಬಳಿ ಸಾಕಷ್ಟು ಸಾಕ್ಷ್ಯಾಧಾರ ಇಲ್ಲ ಎಂದು ಸಲೇಂ ವಾದಿಸಿದ್ದನು. ಆದರೆ, ಫೆಬ್ರುವರಿಯಲ್ಲಿ ಆತನ ವಿರುದ್ಧ ಹೊಸ ಪ್ರೊಡಕ್ಷನ್ ವಾರಂಟ್ ಹೊರಡಿಸಲಾಗಿತ್ತು.
ದಕ್ಷಿಣ ದೆಹಲಿಯ ಗ್ರೇಟರ್ ಕೈಲಾಶ್ನ ನಿವಾಸಿಯಾಗಿರುವ ಅಶೋಕ್ ಗುಪ್ತಾ ಅವರಿಂದ 5 ಕೋಟಿ ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಅಬು ಸಲೇಂ ಮೇಲಿದೆ. ಅಶೋಕ್ ಗುಪ್ತಾ ಮತ್ತು ಅವರ ಮಗ ಅಭಿಷೇಕ್ ಅವರಿಗೆ 2002ರ ಏಪ್ರಿಲ್ನಲ್ಲಿ ಕರೆ ಮಾಡಿದ್ದ ಅಬು ಸಲೇಂ, ಹಣ ನೀಡದಿದ್ದರೆ ಕುಟುಂಬದ ಸದಸ್ಯರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ ಎಂದು ಆರೋಪಿಸಲಾಗಿದೆ.
ವಿವಿಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಿದ್ದ ಅಬು ಸಲೇಂನನ್ನು 2005ರಲ್ಲಿ ಪೋರ್ಚುಗಲ್ನಿಂದ ಗಡಿಪಾರು ಮಾಡಲಾಗಿತ್ತು.












Click it and Unblock the Notifications