ಕೃಷಿ ಮಸೂದೆ ವಿರುದ್ಧ ಹೋರಾಟ: ನವದೆಹಲಿಯಲ್ಲಿ ಕ್ರೀಡಾಂಗಣಗಳೇ ಸೆರೆಮನೆ!
ನವದೆಹಲಿ, ನವೆಂಬರ್.27: ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ದೇಶಾದ್ಯಂತ ರೈತರ ಹೋರಾಟವು ತೀವ್ರ ಸ್ವರೂಪಕ್ಕೆ ತಿರುಗುತ್ತಿದೆ. ರೈತರು "ದೆಹಲಿ ಚಲೋ" ಪ್ರತಿಭಟನೆ ಶುರು ಮಾಡುತ್ತಿರುವ ಹೊಸ್ತಿಲಿನಲ್ಲೇ ತಾತ್ಕಾಲಿಕ ಕಾರಾಗೃಹ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.
ಕೃಷಿ ಸಂಬಂಧಿತ ಕಾಯ್ದೆ ವಿರೋಧಿಸಿ ದೆಹಲಿ ಚಲೋ ಪ್ರತಿಭಟನೆ ಸಂದರ್ಭದಲ್ಲಿ ಅಗತ್ಯಬಿದ್ದಲ್ಲಿ ಬಂಧಿಸಲ್ಪಟ್ಟ ಮತ್ತು ವಶಕ್ಕೆ ಪಡೆದವರನ್ನು ಇರಿಸುವುದಕ್ಕಾಗಿ ಸ್ಟೇಡಿಯಂಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ಹಿನ್ನೆಲೆ ನಗರದ ಒಂಭತ್ತು ಕ್ರೀಡಾಂಗಣಗಳನ್ನು ತಾತ್ಕಾಲಿಕ ಸೆರೆಮನೆಗಳಾಗಿ ಪರಿವರ್ತಿಸುವುದಕ್ಕೆ ಅನುಮತಿ ನೀಡುವಂತೆ ದೆಹಲಿ ಪೊಲೀಸರು ಕೋರಿದ್ದಾರೆ ಎಂದು ತಿಳಿದು ಬಂದಿದೆ.
ದಿಲ್ಲಿ ಚಲೋ ಎಂದು ಹೊರಟ ರೈತ ಅಪಘಾತದಲ್ಲಿ ಮೃತ
ಕೇಂದ್ರ ಸರ್ಕಾರದ ಕೃಷಿ ಸಂಬಂಧಿತ ಕಾಯ್ದೆ ವಿರುದ್ಧ ಶುಕ್ರವಾರ ಬೆಳಗ್ಗೆ ನವದೆಹಲಿ ಮತ್ತು ಹರಿಯಾಣ ಗಡಿಯ ಸಿಂಘು ಗಡಿ ಪ್ರದೇಶದಲ್ಲಿ ಪ್ರತಿಭಟನೆಗೆ ಮುಂದಾದ ರೈತರನ್ನು ನಿಯಂತ್ರಿಸಲು ಮತ್ತು ಚದುರಿಸಲು ಪೊಲೀಸರು ಅಶ್ವವಾಯು ಪ್ರಯೋಗಿಸಿದರು.
Haryana: Police use tear gas to try to disperse farmers as they take part in protests against Centre's Farm laws, at the Singhu border (Delhi-Haryana border) pic.twitter.com/gVxsvulHhx
— ANI (@ANI) November 27, 2020
ನವದೆಹಲಿಯ ಸಿಂಘು ಗಡಿಯಲ್ಲಿ ಭದ್ರತೆ:
ದೆಹಲಿ ಚಲೋ ಪ್ರತಿಭಟನೆಗೆ ಮುಂದಾಗಿರುವ ರೈತರನ್ನು ತಡೆಯುವ ನಿಟ್ಟಿನಲ್ಲಿ ಬಿಗಿ ಭದ್ರತೆಯನ್ನು ಮಾಡಿಕೊಳ್ಳಲಾಗಿದೆ. ಸಿಂಘು ಗಡಿಯಲ್ಲಿ ಮರಳು ತುಂಬಿದ ಲಾರಿ, ಮುಳ್ಳಿನ ತಂತಿಯಿಂದ ಹಾಕಿರುವ ಬೇಲಿ ಜೊತೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಪ್ರತಿಭಟನಾನಿರತ ರೈತರು ದೆಹಲಿ ಪ್ರವೇಶಿಸುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನವದೆಹಲಿಗೆ ಪಂಜಾಬ್ ನಿಂದಲೂ ಆಗಮಿಸುತ್ತಿರುವ ಪ್ರತಿಭಟನಾನಿರತ ರೈತರನ್ನು ನಿಯಂತ್ರಿಸುವುದಕ್ಕೆ ಶಿಸ್ತುಕ್ರಮ ತೆಗೆದುಕೊಳ್ಳಲಾಗಿದ್ದು, ಗಡಿ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದೆ. ದಹೆಲಿ ಪ್ರವೇಶಿಸಲು ಇರುವ ಫರಿದಾಬಾದ್ ಮತ್ತು ಗುರುಗಾವ್ ಗಡಿಗಳಲ್ಲೂ ಭದ್ರತೆ ಸಿಬ್ಬಂದಿ ನಿಯೋಜಿಸಲಾಗಿದೆ.
ಕೃಷಿ ಕಾಯ್ದೆ ರದ್ದುಗೊಳಿಸುವವರೆಗೂ ಹೋರಾಟ:
"ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ನಾವು ದೆಹಲಿಯನ್ನು ಪ್ರವೇಶಿಸಿಯೇ ಪ್ರವೇಶಿಸುತ್ತೇವೆ. ಸರ್ಕಾರವು ಕಾಯ್ದೆ ರದ್ದುಗೊಳಿಸುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮನ್ನು ಪೊಲೀಸರು ಅಶ್ರುವಾಯು ಸಿಡಿಸುವ ಮೂಲಕ ಸ್ವಾಗತಿಸಿಕೊಳ್ಳುತ್ತಿದ್ದಾರೆ" ಎಂದು ಪಂಜಾಬಿನ ಫತೇಘರ್ ಸಾಹಿಬ್ ಮೂಲದ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರನ್ನು ಕಂಗೆಡಿಸಿದ ಕೃಷಿ ಸಂಬಂಧಿತ ಕಾಯ್ದೆಗಳು:
ಕಳೆದ ಸಪ್ಟೆಂಬರ್.27ರಂದು ಕೇಂದ್ರ ಸರ್ಕಾರವು ಮೂರು ಕೃಷಿ ಸಂಬಂಧಿತ ಕಾಯ್ದೆಗಳ ಜಾರಿಗೊಳಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ್ದರು. ರೈತರ ಆಕ್ರೋಶಕ್ಕೆ ಕಾರಣವಾಗಿರುವ ಮತ್ತು ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಆ ಮೂರು ಕೃಷಿ ಸಂಬಂಧಿತ ಕಾಯ್ದೆಗಳು ಯಾವುವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.
1. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ
2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ
3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ