ಬಿಜೆಪಿಯ ಪಂಚ ಪಶ್ನೆಗಳು: ವ್ಯಂಗ್ಯ ನಗು ಬೀರಿದ ಕೇಜ್ರಿವಾಲ್
ನವದೆಹಲಿ, ಜ 30: ದೆಹಲಿ ಅಸೆಂಬ್ಲಿ ಚುನಾವಣೆಗೆ ಮಹೂರ್ತ ಸಮೀಪಿಸುತ್ತಿದ್ದಂತೇ ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರುತ್ತಿದೆ. ಈ ನಡುವೆ ಗುರುವಾರ ಸಂಜೆ (ಜ 29) ಬಿಜೆಪಿ, ಅರವಿಂದ್ ಕೇಜ್ರಿವಾಲ್ ಗೆ ಐದು ಪ್ರಶ್ನೆಗಳನ್ನು ಕೇಳಿದೆ.
ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವ ಬದಲು ಬಿಜೆಪಿ, ಆಮ್ ಆದ್ಮಿ ಪಕ್ಷದ ಜನಪ್ರಿಯತೆಯ ನಾಗಾಲೋಟಕ್ಕೆ ಬ್ರೇಕ್ ಹಾಕಲು ಪ್ರಶ್ನೆಗಳ ಮೊರೆ ಹೋಗಿರುವುದು ವಿಶೇಷ.
ಬಿಜೆಪಿಯ ಪಂಚ ಪ್ರಶ್ನೆಗಳಿಗೆ ವ್ಯಂಗ್ಯ ನಗು ಬೀರಿರುವ ಆಮ್ ಆದ್ಮಿ ಪಕ್ಷ, ನಮ್ಮ ಪಾರ್ಟಿಗೆ ಸಿಗುತ್ತಿರುವ ಜನಬೆಂಬಲ ಕಂಡು ಬಿಜೆಪಿ 'ಢರ್ ಗಯಾ' ಎಂದು ಲೇವಡಿ ಮಾಡಿದೆ. (ದೆಹಲಿ ಚುನಾವಣೆ: ಅಖಾಡಕ್ಕೆ ಜೇಟ್ಲಿ)
ಬಿಜೆಪಿಯ ಐದಲ್ಲ, ಐವತ್ತು ಪ್ರಶ್ನೆಗಳಿಗೆ ನಮ್ಮ ಪಕ್ಷ ಉತ್ತರಿಸಲು ಸಿದ್ದವಿದೆ. ಆದರೆ ಕೇಳಿದ ಪ್ರಶ್ನೆಯನ್ನೇ ಮತ್ತೆ ಮತ್ತೆ ಕೇಳಿದರೆ ಅದಕ್ಕೆ ಉತ್ತರಿಸುವ ಅವಶ್ಯಕತೆ ಮತ್ತು ಸಮಯಾವಕಾಶವೂ ನಮ್ಮಲಿಲ್ಲ ಎಂದು ಆಪ್ ಮುಖಂಡ ಯೋಗೇಂದ್ರ ಯಾದವ್ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ಮುಖಂಡ ಮತ್ತು ಸಚಿವರಾದ ರಾಜೀವ್ ಪ್ರತಾಪ್ ರೂಢಿ ಮತ್ತು ನಿರ್ಮಲಾ ಸೀತರಾಮನ್, ಇಂದಿನಿಂದ ಫೆಬ್ರವರಿ ಐದನೇ ತಾರೀಕನವರೆಗೆ ಬಿಜೆಪಿ, ಆಮ್ ಆದ್ಮಿ ಪಕ್ಷಕ್ಕೆ ದಿನವೊಂದಕ್ಕೆ 5 ಪ್ರಶ್ನೆಗಳನ್ನು ಕೇಳಲಿದೆ. ಇದಕ್ಕೆ ಆಮ್ ಆದ್ಮಿ ಪಕ್ಷ ಉತ್ತರಿಸಲಿ ಎಂದು ರೂಢಿ ಹೇಳಿದ್ದಾರೆ. (ದೆಹಲಿ ಗದ್ದುಗೆ ಮತ್ತೆ ಆಮ್ ಆದ್ಮಿಗೆ)
ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಗುರುವಾರ ಕೇಳಿದ ಐದು ಪ್ರಶ್ನೆಗಳು ಸ್ಲೈಡಿನಲ್ಲಿ..

ಪ್ರಶ್ನೆ ನಂಬರ್ ಒನ್
ಅಧಿಕಾರಕ್ಕೆ ಬಂದರೆ ದೆಹಲಿಯ ಹಿಂದಿನ ಸಿಎಂ ಶೀಲಾ ದೀಕ್ಷಿತ್ ಮೇಲೆ ಕೇಸ್ ದಾಖಲಿಸುವುದಾಗಿ ಆಮ್ ಆದ್ಮಿ ಪಕ್ಷ ಜನತೆ ವಚನ ನೀಡಿತ್ತು. ಶೀಲಾ ದೀಕ್ಷಿತ್ ಅವಧಿಯಲ್ಲಿ ನಡೆದ ಎಲ್ಲಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗುವುದು ಎಂದು ಹೇಳಿತ್ತು. 49 ದಿನದ ನಿಮ್ಮ ಅಧಿಕಾರದ ಅವಧಿಯಲ್ಲಿ ಯಾಕೆ ಶೀಲಾ ಮೇಲೆ ಕೇಸು ದಾಖಲಿಸಲಿಲ್ಲ?

ಎಲ್ಲಾ ಓಕೆ, ಬ್ಯುಸಿನೆಸ್ ಕ್ಲಾಸ್ ಯಾಕೆ?
ದುಂದು ವೆಚ್ಚ ಮಾಡುವುದಿಲ್ಲ ಎಂದು ಡಂಗುರ ಸಾರುತ್ತಿದ್ದ ಅರವಿಂದ್ ಕೇಜ್ರಿವಾಲ್, ಪ್ರತೀ ಬಾರಿ ತನ್ನ ವಿಮಾನ ಪ್ರಯಾಣಕ್ಕೆ ದುಬಾರಿ ಬ್ಯೂಸಿನೆಸ್ ಕ್ಲಾಸ್ ನಲ್ಲಿ ಬಳುಸುವುದು ಯಾಕೆ, ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಯಾಕೆ?

ಭದ್ರತೆ ಬೇಕಾ?
ಉತ್ತರಪ್ರದೇಶ ಸರಕಾರ ಮತ್ತು ದೆಹಲಿಯ ಪೊಲೀಸರು ಕೇಜ್ರಿವಾಲ್ ಅವರಿಗೆ 'Z' ಸೆಕ್ಯೂರಿಟಿಯನ್ನು ನೀಡುತ್ತಿದ್ದಾರೆ. ಕಾಮನ್ ಮ್ಯಾನ್ ಕೇಜ್ರಿವಾಲ್ ತಾನು ಆಡಿದ ಮಾತಿಗೆ ತಪ್ಪಿದ್ದು ಯಾಕೆ?

ಪ್ರಮಾಣವಚನದ ಸಮಯದಲ್ಲಿ
ಸಿಎಂ ಆಗಿ ಕೇಜ್ರಿವಾಲ್ ಪ್ರಮಾಣವಚನ ಸ್ವೀಕರಿಸಿದ ಸಮಯದಲ್ಲಿ ಮೆಟ್ರೋ ರೈಲು ಮತ್ತು ವ್ಯಾಗನಾರ್ ಕಾರಿನಲ್ಲಿ ಬಂದಿದ್ದರು, ಸಿಎಂ ಆದ ನಂತರ ಕ್ಯಾಬಿನೆಟ್ ಸಚಿವರಿಗೆ SUV ವಾಹನ ಡಿಮಾಂಡ್ ಮಾಡಿದ್ದು ಯಾಕೆ?

ಕಾಂಗ್ರೆಸ್ ವಿಚಾರದಲ್ಲಿ ನೀವು ಮಾಡಿದ್ದು ಸರೀನಾ?
ಚುನಾವಣೆಗೆ ಮುನ್ನ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ದ ಹರಿಹಾಯುತ್ತಿದ್ದ ನೀವು, ಅಧಿಕಾರದ ರುಚಿಗಾಗಿ ಕಾಂಗ್ರೆಸ್ ಪಕ್ಷದ ಪರೋಕ್ಷ ಬೆಂಬಲ ಪಡೆದುಕೊಂಡಿದ್ದು ಯಾಕೆ?












Click it and Unblock the Notifications