'ನಮ್ಮಿಂದ ಒಂದಿಂಚು ಭೂಮಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ'- ರಾಜನಾಥ್ ಸಿಂಗ್
ದೆಹಲಿ, ಜುಲೈ 17: ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ಆದ ಒಂದು ತಿಂಗಳ ನಂತರ ಲಡಾಖ್ಗೆ ಭೇಟಿ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ 'ನಮ್ಮಿಂದು ಒಂದು ಇಂಚು ಭೂಮಿಯನ್ನು ಸಹ ಜಗತ್ತಿನ ಯಾವುದೇ ಶಕ್ತಿಯಿಂದ ತೆಗೆದುಕೊಳ್ಳಲಾಗುವುದಿಲ್ಲ' ಎಂದು ಯೋಧರಿಗೆ ಭರವಸೆ ನೀಡಿದ್ದಾರೆ.
ಶುಕ್ರವಾರ ಬೆಳಗ್ಗೆ ಲೇಹ್ಗೆ ಭೇಟಿ ನೀಡಿದ ರಾಜನಾಥ್ ಸಿಂಗ್ ಗಡಿ ಭದ್ರತಾ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಯೋಧರ ಜೊತೆ ಮಾತುಕತೆ ನಡೆಸಿದರು. ಸಿಹಿ ಹಂಚಿ ಧನ್ಯವಾದ ತಿಳಿಸಿದರು.
Ladakh: Defence Minister Rajnath Singh interacts with Indian Army & ITBP personnel at Lukung, along with Chief of Defence Staff General Bipin Rawat and Army Chief General MM Naravane. pic.twitter.com/Q9bDjK7gI3
— ANI (@ANI) July 17, 2020
ಈ ವೇಳೆ ಸೈನಿಕರನ್ನು ಕುರಿತು ಮಾತನಾಡಿದ ರಾಜನಾಥ್ ಸಿಂಗ್ ''ನಿಮ್ಮೆಲ್ಲರನ್ನೂ ಭೇಟಿಯಾಗಲು ನನಗೆ ಸಂತೋಷವಾಗಿದೆ. ಆದರೆ ಇತ್ತೀಚೆಗೆ ಭಾರತ ಮತ್ತು ಚೀನಾ ಪಡೆಗಳ ನಡುವೆ ಆದ ಘಟನೆಯಲ್ಲಿ ನಮ್ಮ ಗಡಿಯನ್ನು ರಕ್ಷಿಸಲು ನಮ್ಮ ಕೆಲವು ಸಿಬ್ಬಂದಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಅವರ ನಷ್ಟದಿಂದಾಗಿ ದುಃಖಿತನಾಗಿದ್ದೇನೆ. ನಾನು ಅವರಿಗೆ ನನ್ನ ಗೌರವ ಸಲ್ಲಿಸುತ್ತೇನೆ'' ಎಂದರು.
ಲಡಾಖ್ ಗಡಿ ಸಂಘರ್ಷ: ಚೀನಾದ ಮೇಲೆ ನಿರಂತರ ಕಣ್ಣಿಟ್ಟಿರಬೇಕು ಎಂದ ಭಾರತೀಯ ಸೇನೆ
ಚೀನಾ ಮತ್ತು ಭಾರತ ಕಮಾಂಡರ್ಗಳ ನಡುವಿನ ಮಾತುಕತೆ ಕುರಿತು ಮಾಹಿತಿ ನೀಡಿದ ರಾಜನಾಥ್ ಸಿಂಗ್ ''ಗಡಿ ವಿವಾದವನ್ನು ಬಗೆಹರಿಸಲು ಮಾತುಕತೆ ನಡೆಯುತ್ತಿದೆ ಆದರೆ ಅದನ್ನು ಎಷ್ಟರ ಮಟ್ಟಿಗೆ ಪರಿಹರಿಸಬಹುದು ಎಂದು ನಾನು ಖಾತರಿಪಡಿಸುವುದಿಲ್ಲ'' ಎಂದು ಹೇಳಿದರು.
'ಆದರೆ ಒಂದಂತೂ ಭರವಸೆ ನೀಡಬಲ್ಲೆ, ನಮ್ಮ ಭೂಮಿಯ ಒಂದು ಇಂಚು ಸಹ ಜಗತ್ತಿನ ಯಾವುದೇ ಶಕ್ತಿಯಿಂದ ನಮ್ಮಿಂದ ತೆಗೆದುಕೊಳ್ಳಲಾಗುವುದಿಲ್ಲ' ಎಂದು ಸೈನಿಕರಿಗೆ ಆತ್ಮಸ್ಥೈರ್ಯ ತುಂಬಿದರು. 'ಮಾತುಕತೆಯಿಂದ ಪರಿಹಾರವನ್ನು ಕಂಡುಹಿಡಿಯಬಹುದಾದರೆ, ಇದಕ್ಕಿಂತ ಉತ್ತಮವಾದದ್ದೇನೂ ಇಲ್ಲ' ಎಂದು ಹೇಳುವ ಮೂಲಕ ಸಂಧಾನದ ಸುಳಿವು ಸಹ ನೀಡಿದರು.
ಇಂದಿನ ಕಾರ್ಯಕ್ರಮದಲ್ಲಿ ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಸಾಥ್ ನೀಡಿದ್ದರು. ಜುಲೈ 18ರಂದು ಜಮ್ಮು ಕಾಶ್ಮೀರಕ್ಕೆ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ.
ಇದಕ್ಕೂ ಮುಂಚೆ ಪ್ರಧಾನಿ ನರೇಂದ್ರ ಮೋದಿ ಅವರು ಲಡಾಖ್ ಗೆ ಭೇಟಿ ನೀಡಿ ಸೈನಿಕರ ಯೋಗಕ್ಷೇಮ ವಿಚಾರಿಸಿದ್ದರು. ಜೂನ್ 15 ರಂದು ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಮತ್ತು ಭಾರತ ಸೇನೆ ನಡುವೆ ಹಿಂಸಾತ್ಮಕ ಘರ್ಷಣೆ ಸಂಭವಿಸಿ 20 ಜನ ಭಾರತೀಯ ಯೋಧರು ಹುತಾತ್ಮರಾಗಿದ್ದರು.