ದೆಹಲಿ ಗಲಭೆ ಆರೋಪ ಕೇಳಿಬರುತ್ತಿದ್ದಂತೆ ನಾಪತ್ತೆಯಾದ ನಟ
ನವದೆಹಲಿ, ಜನವರಿ 28: ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ರೈತರ ಟ್ರ್ಯಾಕ್ಟರ್ ಪರೇಡ್ ಸಂದರ್ಭ ಗಲಭೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಪಂಜಾಬಿ ನಟ ದೀಪ್ ಸಿಧು ಹಾಗೂ ಲಖಾ ಸಿದ್ಧನಾ ಮೇಲೆ ದೂರು ದಾಖಲಿಸಿದ್ದಾರೆ. ಆದರೆ ಈ ಆರೋಪಗಳು ಕೇಳಿಬರುತ್ತಿದ್ದಂತೆ ಸಿಧು ನಾಪತ್ತೆಯಾಗಿದ್ದಾರೆ.
ಗಣರಾಜ್ಯೋತ್ಸವದಂದು ರೈತರು ಕೆಂಪುಕೋಟೆ ಮೇಲೆ ಬಾವುಟ ಹಾರಿಸಲು ಪ್ರಚೋದಿಸಿದ ಆರೋಪ ಸಿಧು ಮೇಲೆ ಕೇಳಿಬಂದಿತ್ತು. ಆನಂತರ ಅವರು ಪ್ರತಿಭಟನೆ ವೇಳೆಯೇ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದರು. ರೈತ ಸಂಘಗಳೂ ಸಿಧು ವಿರುದ್ಧ ಕಿಡಿಕಾರಿದ್ದು, ತಮ್ಮ ಪ್ರತಿಭಟನೆಯ ದಿಕ್ಕು ತಪ್ಪಿಸಿದ ಆರೋಪವನ್ನು ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗೆಳ ನಂತರ ಸಿಧು ನಾಪತ್ತೆಯಾಗಿದ್ದಾರೆ. ಮುಂದೆ ಓದಿ...

ಸಿಧು ಮೇಲೆ ಎಫ್ ಐಆರ್ ದಾಖಲು
ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದ ಆರೋಪದಲ್ಲಿ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಾಚೀನ ಸ್ಮಾರಕ ಹಾಗೂ ಪುರಾತತ್ವ ಸ್ಥಳಗಳು, ಅವಶೇಷಗಳ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆ ನಿಬಂಧನೆಗಳನ್ನು ಎಫ್ ಐಆರ್ ನಲ್ಲಿ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 186, 353, 308, 152, 397 ಹಾಗೂ 307ರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೆಂಪು ಕೋಟೆ ಮೇಲೆ ಧ್ವಜ ಹಾರಿಸಲು ಪ್ರೇರೇಪಣೆ
ಜನವರಿ 26ರಂದು ದೆಹಲಿಯ ಕೆಂಪು ಕೋಟೆ ಬಳಿ ರಾಜ್ ಘೋಷಣೆ ಕೂಗುತ್ತಾ ದೀಪ್ ಸಿಧು ಕೇಸರಿ ಧ್ವಜವನ್ನು ವ್ಯಕ್ತಿಯೊಬ್ಬರಿಗೆ ನೀಡಿ ಕೋಟೆ ಮೇಲೆ ಹಾರಿಸಲು ತಿಳಿಸಿದ್ದರು ಎನ್ನಲಾಗಿದೆ. ಆನಂತರ ರೈತರ ಟ್ರ್ಯಾಕ್ಟರ್ ಮೆರವಣಿಗೆ ವೇಳೆ ಕೆಂಪುಕೋಟೆಯಲ್ಲಿ ಸಿಖ್ಖರ ಧಾರ್ಮಿಕ ಧ್ವಜ ಹಾರಿಸಿದ ಸಂದರ್ಭದಲ್ಲಿ ತಾವು ಸ್ಥಳದಲ್ಲಿಯೇ ಇದ್ದಿದ್ದಾಗಿ ನಟ ದೀಪ್ ಸಿಧು ಒಪ್ಪಿಕೊಂಡಿದ್ದರು. ತಾವು ಮತ್ತು ತಮ್ಮ ಬೆಂಬಲಿಗರು ರಾಷ್ಟ್ರ ಧ್ವಜವನ್ನು ತೆರವುಗೊಳಿಸಿರಲಿಲ್ಲ. ಕೆಂಪುಕೋಟೆಯಲ್ಲಿ ಸಾಂಕೇತಿಕ ಪ್ರತಿಭಟನೆಯಾಗಿ ನಿಶಾನ್ ಸಾಹಿಬ್ಅನ್ನು ಹಾರಿಸಿದ್ದೆವು ಎಂದಿದ್ದರು. ಮಂಗಳವಾರ ಸಂಜೆ ಫೇಸ್ಬುಕ್ ಪುಟದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಸಿಧು, ಇದು ಪೂರ್ವನಿಯೋಜಿತ ಕೃತ್ಯವಾಗಿರಲಿಲ್ಲ. ಇದಕ್ಕೆ ಯಾವುದೇ ಕೋಮು ಬಣ್ಣ ಅಥವಾ ಮೂಲಭೂತವಾದಿಗಳ ಕೃತ್ಯ ಎಂಬ ಹಣೆಪಟ್ಟಿ ನೀಡಬಾರದು ಎಂದಿದ್ದರು.

ದೀಪ್ ಸಿಧು ವಿರೋಧಿಸಿದ್ದ ರೈತರು
ಈತ ಆರ್ ಎಸ್ ಎಸ್ ಏಜೆಂಟ್ ಎಂದು ಸಂಯುಕ್ತ ಕಿಸಾನ್ ಮೋರ್ಚಾ, ಪ್ರತಿಭಟನೆಗೆ ಸಿಧು ಬೆಂಬಲವನ್ನು ತಿರಸ್ಕರಿಸಿತ್ತು. ರೈತ ಚಳವಳಿಯಲ್ಲಿ ದೀಪ್ ಸಿಧು ಮುಂದಾಳತ್ವ ವಹಿಸಿಕೊಳ್ಳಲು ಬಯಸಿದ್ದು, ಹಲವು ರೈತ ಸಂಘಟನೆಗಳು ದೂರವೇ ಇಟ್ಟಿದ್ದವು ಎಂದು ತಿಳಿದುಬಂದಿದೆ. ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಟ್ರ್ಯಾಕ್ಟರ್ ಮೆರವಣಿಗೆಯ ತಮ್ಮ ಮೂಲ ಯೋಜನೆಗೆ ಬದ್ಧವಾಗಿತ್ತು. ಆದರೆ ಈ ಯೋಜನೆಯ ದಿಕ್ಕು ತಪ್ಪಿಸಿ ತಮ್ಮ ಮೆರವಣಿಗೆ ಆರಂಭ ಮಾಡಿ ದೆಹಲಿಗೆ ನುಗ್ಗಲು ಮುಂದಾದರು ಎಂದು ರೈತ ಸಂಘಟನೆಗಳು ಆರೋಪಿಸಿವೆ.

ಬೈಕ್ ನಲ್ಲಿ ಪರಾರಿಯಾಗಿದ್ದ ಸಿಧು
ಪ್ರತಿಭಟನಾ ಸ್ಥಳದಲ್ಲಿದ್ದ ದೀಪ್ ಸಿಧುವನ್ನು ಗುರುತಿಸಿದ್ದ ರೈತರು ಅವರನ್ನು ಪ್ರಶ್ನಿಸಿದ್ದರು. ಅವರಿಂದ ತಪ್ಪಿಸಿಕೊಂಡಿದ್ದ ಸಿಧು, ತಮಗಾಗಿ ನಿಂತಿದ್ದ ಬೈಕ್ ಒಂದನ್ನು ಕಸಿದುಕೊಂಡು ಅದರಲ್ಲಿ ಪರಾರಿಯಾಗಿದ್ದರು. ರೈತರು ಅವರನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅದಕ್ಕೆ ಪೂರಕವಾದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಂತರ ದೀಪ್ ಸಿಧು ವಿಚಾರ ಮುನ್ನೆಲೆಗೆ ಬಂದಿದ್ದು, ನಾಪತ್ತೆಯಾಗಿದ್ದಾರೆ.












Click it and Unblock the Notifications