ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ
ನವದೆಹಲಿ, ನವೆಂಬರ್, 7: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಗೈರುಹಾಜರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸತಿಮಿಯ ಅಧ್ಯಕ್ಷತೆ ವಹಿಸಿದ್ದು, ಈ ಬೆಳವಣಿಗೆ ರಾಹುಲ್ ಪಕ್ಷದ ಅಧ್ಯಕ್ಷರಾದರೆ ಎಂಬ ಚರ್ಚೆಗೆ ಇಂದು ಎಡೆಮಾಡಿಕೊಟ್ಟಿತ್ತು.
ರಾಹುಲ್ ಗಾಂಧಿಯವರ ಈ ನಡೆ, ಮುಂದೆ ಅವರೇ ಪಕ್ಷದ ಚುಕ್ಕಾಣಿ ಹಿಡಿಯುತ್ತಾರೆಯೇ? ಎಂಬ ಅನುಮಾನದ ಬೀಜಗಳನ್ನು ಕಾರ್ಯಕರ್ತರಲ್ಲಿ ಬಿತ್ತಿದೆ. ಸೋನಿಯಾ ಗಾಂಧಿ ಅವರು ಅನಾರೋಗ್ಯದ ನಿಮಿತ್ತ ಸಭೆಗೆ ಗೈರುಹಾಜರಾಗಿದ್ದರು ಎಂದು ಪಕ್ಷ ತಿಳಿಸಿದೆ.
ಪಕ್ಷದ ಉನ್ನತ ಸ್ಥಾನವನ್ನು ರಾಹುಲ್ ಗಾಂಧಿ ಅಲಂಕರಿಸುತ್ತಾರೆಯೇ ಎಂಬುದು ಹಲವು ದಿನಗಳಿಂದ ನಡೆಯುತ್ತಿರುವ ಚರ್ಚೆ. ಆದರೆ ಕಾಂಗ್ರೆಸ್ ಪಕ್ಷ ಈ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆ ವಹಿಸಲು ಹಲವು ಹಿರಿಯನಾಯಕರಿದ್ದರೂ ಸಹ ರಾಹುಲ್ ಗಾಂಧಿ ಅವರು ಅಧ್ಯಕ್ಷತೆ ವಹಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಪಕ್ಷದ ಹಲವು ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಮುಂಬರುವ ವಿವಿಧ ರಾಜ್ಯಗಳ ವಿಧನಸಭಾ ಚುನಾವಣೆಗಳು ಮುಗಿಯುವವರೆಗೂ ಸೋನಿಯಾಗಾಂಧಿ ಅವರೇ ಪಕ್ಷವನ್ನು ಮುನ್ನಡೆಸಬೇಕೆಂಬ ಬಯಕೆ ಇದೆ.
ಅಷ್ಟೇ ಅಲ್ಲದೇ "ರಾಹುಲ್ ಗಾಂಧಿ ಅವರಿಗೆ ಪಕ್ಷದ ಜವಾಬ್ದಾರಿ ವಹಿಸಲಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟಪಡಿಸಬೇಕು" ಎಂದು ಕೆಲವು ನಾಯಕರಿಂದ ಒತ್ತಡವೂ ಸಹ ಇದೆ.
ಆದರೆ ಪಕ್ಷದ ಮೂಲಗಳ ಪ್ರಕಾರ ಮುಂಬರುವ ಉತ್ತರಪ್ರದೇಶ, ಪಂಜಾಬ್, ಉತ್ತಾರಾಖಂಡ್, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಗಿಯುವವರೆಗೂ ಸೋನಿಯಗಾಂಧಿ ಅವರೇ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎಂದು ಹೇಳಲಾಗಿದೆ.
ಆದರೂ ಸೋನಿಯಾಗಾಂಧಿ ಅವರ ಅನುಪಸ್ಥಿತಿಯಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷತೆ ವಹಿಸಿರುವುದು ಅವರಿಗೆ ನೀಡಲಾಗುತ್ತಿರುವ ಪರೀಕ್ಷೆ ಎನ್ನಲಾಗುತ್ತಿದೆ.
ತಾಯಿಯ ಅನುಪಸ್ಥಿತಿಯಲ್ಲಿ ಅವರು ಯಾವ ರೀತಿಯ ನಿರ್ದಾರ ತೆಗೆದುಕೊಳ್ಳುತ್ತಾರೆ ಎಂಬುದು ಇಂತಹ ಸಭೆಗಳಿಂದ ತಿಳಿದು ಬರಲಿದೆ ಎಂದು ಹೇಳಲಾಗಿದೆ.
ಸಭೆಯಲ್ಲಿ ಮುಂಬರುವ ಚುನಾವಣೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಜತೆಗೆ ಮುಂದಿನ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಭಾಗವಹಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಈ ಸಭೆಯು ನಿರ್ಣಾಯಕ ಸಭೆಯಾಗಿದ್ದು, ರಾಹುಲ್ ಗಾಂಧಿ ಅವರು ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಯಾವ ರೀತಿ ಅವರು ಪಕ್ಷವನ್ನು ಮುನ್ನಡೆಸುತ್ತಾರೆ. ಮತ್ತು ಭವಿಷ್ಯದಲ್ಲಿ ಅವರ ನಾಯಕತ್ವ ಹೇಗಿರಬಹುದು ಎಂಬುದರ ಕುರಿತು ಪರೀಕ್ಷೆ ಮಾಡಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.