ಕೊರೊನಾವೈರಸ್ 'ಲಸಿಕೆ'ಗಾಗಿ ಇನ್ನೆಷ್ಟು ದಿನ ಕಾಯಬೇಕು?
ನವದೆಹಲಿ, ಆಗಸ್ಟ್,17: ಕೊರೊನಾವೈರಸ್ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಲಕ್ಷದ ಗಡಿ ದಾಟುತ್ತಿದ್ದು, ಲಸಿಕೆ ಅದೆಂದು ಸಿಗುವುದೋ ಎಂಬ ನಿರೀಕ್ಷೆಯಲ್ಲಿ ಇಡೀ ಜಗತ್ತು ಎದುರು ನೋಡುತ್ತಿದೆ. ಕೊವಿಡ್-19 ಲಸಿಕೆ ಅಭಿವೃದ್ಧಿಪಡಿಸಲು 1.5 ವರ್ಷಗಳು ಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ತಿಳಿಸಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು 17 ತಿಂಗಳು ಬೇಕಾಗುತ್ತಿದ್ದು, ಈ ಅವಧಿಯಲ್ಲಿ ಈಗಾಗಲೇ 6 ತಿಂಗಳು ಕಳೆದು ಹೋಗಿವೆ. ಭಾರತದಲ್ಲೇ ವಿವಿಧ ಕಂಪನಿಗಳಿಗೆ ಸೇರಿದ ಎಂಟು ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ ಎಂದರು.
ದೇಶಿ ಲಸಿಕೆ ಕೊವ್ಯಾಕ್ಸಿನ್ ಮೊದಲ ಹಂತದ ಪ್ರಯೋಗ ಯಶಸ್ವಿ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ 26,47,664ಕ್ಕೆ ಏರಿಕೆಯಾಗಿದ್ದು, ಕಳೆದ 24 ಗಂಟೆಗಳಲ್ಲೇ 57982 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಒಂದೇ ದಿನ ಮಹಾಮಾರಿಗೆ 941 ಜನರು ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆಯು 50,921ಕ್ಕೆ ಏರಿಕೆಯಾಗಿದೆ. ದೇಶದಲ್ಲಿ 19,19,843 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 6,76,900 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.
ಹೊಸ ಲಸಿಕೆ ಅಭಿವೃದ್ಧಿಪಡಿಸಲು 5 ರಿಂದ 10 ವರ್ಷ
ವಿಶ್ವದ ಯಾವುದೇ ದೇಶದಲ್ಲಿ ಸಾಮಾನ್ಯವಾಗಿ ಒಂದು ಹೊಸ ಲಸಿಕೆಯನ್ನು ಅಭಿವೃದ್ಧಿಪಡಿಸುವುದಕ್ಕೆ ಕನಿಷ್ಠ 5 ರಿಂದ 10 ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಆದರೆ ಕೊರೊನಾವೈರಸ್ ಸೋಂಕಿತನಂತಾ ಸಾಂಕ್ರಾಮಿಕ ಪಿಡುಗು ಎದುರಾದ ಸಂದರ್ಭಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ವಿವಿಧ ಸಂಸ್ಥೆಗಳ ಜೊತೆಗೆ ಕೈಜೋಡಿಸುವ ಮೂಲಕ ಕ್ಷಿಪ್ರಗತಿಯಲ್ಲಿ ಲಸಿಕೆ ಅಭಿವೃದ್ಧಿಪಡಿಸಲು ಶ್ರಮಿಸಲಾಗುತ್ತಿದೆ. ಹೀಗಿದ್ದರೂ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ಕನಿಷ್ಠ ಒಂದೂವರೆ ವರ್ಷಗಳು ಬೇಕಾಗುತ್ತವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್ ತಿಳಿಸಿದರು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಬಹುಮುಖ್ಯ
ಕೊರೊನಾವೈರಸ್ ಸೋಂಕಿನಿಂದ ಪಾರಾಗುವುದಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ಮಾಸ್ಕ್ ಧರಿಸದೇ ಸಾರ್ವಜನಿಕರ ಪ್ರದೇಶಗಳಲ್ಲಿ ಸಂಚರಿಸುವುದು ಸೂಕ್ತವಲ್ಲ. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧರಿಸುವುದರಿಂದ ಸೋಂಕು ತಗಲುವಿಕೆ ಪ್ರಮಾಣವನ್ನು ತಗ್ಗಿಸಲು ಸಾಧ್ಯವಾಗುತ್ತದೆ ಎಂದು ಡಾ.ಸೌಮ್ಯ ಸ್ವಾಮಿನಾಥನ್ ಸಲಹೆ ನೀಡಿದ್ದಾರೆ.
ಕೊರೊನಾವೈರಸ್ ನಿಯಂತ್ರಿಸುವಲ್ಲಿ ಮಾರ್ಗದರ್ಶನ
ತಮಿಳುನಾಡಿನಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಡಾ.ಸೌಮ್ಯ ಸ್ವಾಮಿನಾಥನ್ ಮಾರ್ಗದರ್ಶನ ನೀಡಿದರು. ಕೊವಿಡ್-19 ಸೋಂಕು ನಿಯಂತ್ರಿಸಲು ಯಾವ ರೀತಿಯ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎನ್ನುವುದರ ಕುರಿತು ತಮಿಳುನಾಡಿನ ಆರೋಗ್ಯ ಇಲಾಖೆಗೆ ಸಲಹೆಗಳನ್ನು ನೀಡಿದ್ದರು. ಈ ಹಿನ್ನೆಲೆ ಅವರನ್ನು ತಮಿಳುನಾಡು ಮುಖ್ಯಮಂತ್ರಿ ವಿಶೇಷ ಪ್ರಶಸ್ತಿ ನೀಡುವ ಮೂಲಕ ಗೌರವ ಸಲ್ಲಿಸಲಾಯಿತು.
ವೈದ್ಯಕೀಯ ಸಂಶೋಧನಾ ರಂಗದಲ್ಲಿ 30 ವರ್ಷಗಳ ಅನುಭವ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಜ್ಞಾನಿಗಳ ಮುಖ್ಯಸ್ಥೆ ಡಾ.ಸೌಮ್ಯ ಸ್ವಾಮಿನಾಥನ್ ಅವರು, ವೈದ್ಯಕೀಯ ವಲಯ ಮತ್ತು ಸಂಶೋಧನೆಯಲ್ಲಿ 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ತಮ್ಮ ವೈದ್ಯಕೀಯ ಸಂಶೋಧನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿಯೂ ಡಾ.ಸೌಮ್ಯ ಸ್ವಾಮಿನಾಥನ್ ಯಶಸ್ವಿಯಾಗಿದ್ದಾರೆ.