ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ನನ್ನ ಪಕ್ಷ ಕಾಪಾಡುತ್ತದೆ; ರಾಹುಲ್ ಗಾಂಧಿ
ನವದೆಹಲಿ, ಜನವರಿ 23: ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆ ಸಲುವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರದಿಂದ ಮೂರು ದಿನಗಳ ಕಾಲ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.
ಟ್ವಿಟ್ಟರ್ ನಲ್ಲಿ ಈ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ಹಂಚಿಕೊಂಡಿದ್ದು, "ತಮಿಳುನಾಡಿಗೆ ಭೇಟಿ ನೀಡುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕೊಂಗು ಪ್ರದೇಶದ ನನ್ನ ಸಹೋದರ ಸಹೋದರಿಯರೊಂದಿಗೆ ಸಮಯ ಕಳೆಯಬೇಕೆಂದುಕೊಂಡಿದ್ದೇನೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ದಾಳಿಯಿಂದ ತಮಿಳರ ವಿಶಿಷ್ಟ ಸಂಸ್ಕೃತಿಯನ್ನು ನಾನು ಹಾಗೂ ನನ್ನ ಪಕ್ಷ ರಕ್ಷಿಸುತ್ತದೆ" ಎಂದು ಹೇಳಿದ್ದಾರೆ.
ABP-C Voter Opinion Poll: ತಮಿಳುನಾಡಿನಲ್ಲಿ ಯುಪಿಎಗೆ ಮತ್ತೆ ಅಧಿಕಾರ
ತಿಂಗಳಿನಲ್ಲಿ ರಾಹುಲ್ ಗಾಂಧಿ ಎರಡನೇ ಭೇಟಿ ಇದಾಗಿದ್ದು, ಈ ಬಾರಿ ಭೇಟಿ ಸಂದರ್ಭ ವಿಧಾನ ಸಭೆ ಚುನಾವಣೆಗೆ ಪಕ್ಷದ ಪ್ರಚಾರ ಕಾರ್ಯ ಕೈಗೊಳ್ಳುವುದಾಗಿ ತಿಳಿದುಬಂದಿದೆ. ಇಲ್ಲಿನ ಕಲಪಟ್ಟಿಯ ನೆಹರು ನಗರದ ಸುಗುಣಾ ಆಡಿಟೋರಿಯಂನಲ್ಲಿ ರೈತರು, ಎಂಎಸ್ ಎಂಇ ಪ್ರತಿನಿಧಿಗಳು, ಕಾರ್ಮಿಕರು, ನೇಕಾರರೊಂದಿಗೆ ಸಂವಾದ ನಡೆಸುವುದಾಗಿ ರಾಹುಲ್ ಗಾಂಧಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿರುವ ಪ್ರತಿಭಟನೆಗೂ ಬೆಂಬಲ ವ್ಯಕ್ತಪಡಿಸಿರುವ ರಾಹುಲ್, ಕರೂರಿನಲ್ಲಿ ಈ ಸಂಬಂಧ ರೈತರೊಂದಿಗೆ ಸಂವಾದ ನಡೆಸುವುದಾಗಿ ತಿಳಿಸಿದ್ದಾರೆ. ಕೊಯಮತ್ತೂರು ಹಾಗೂ ತ್ರಿಪುರಾ ಜಿಲ್ಲೆಗಳಲ್ಲಿ ಚುನಾವಣಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.