ಮೋದಿ ಭೇಟಿಯಾದ ಯಡಿಯೂರಪ್ಪ: ನೆರವಿಗಾಗಿ ಮತ್ತೆ ಮನವಿ
ನವದೆಹಲಿ, ಆಗಸ್ಟ್ 16: ಸಿಎಂ ಯಡಿಯೂರಪ್ಪ ಅವರು ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯ ಬಗ್ಗೆ ಮೋದಿ ಅವರೊಂದಿಗೆ ಚರ್ಚೆ ನಡೆಸಿದ ಯಡಿಯೂರಪ್ಪ ಅವರು, ಆಗಿರುವ ಅಪಾರ ಹಾನಿಗೆ ಸೂಕ್ತ ನೆರವು ನೀಡಬೇಕೆಂದು ಕೋರಿಕೆ ಮುಂದಿಟ್ಟಿದ್ದಾರೆ. ತಕ್ಷಣವೇ ಕನಿಷ್ಟ ಮೂರು ಸಾವಿರ ಕೋಟಿ ನೆರವು ನೀಡಬೇಕೆಂದು ಯಡಿಯೂರಪ್ಪ ಮನವಿ ಸಲ್ಲಿಸಿದ್ದಾರೆ.
ಮೋದಿ ಅವರು ಸೂಕ್ತವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದ್ದಾರೆ ಎಂದು ಭೇಟಿಯ ಬಳಿಕ ಯಡಿಯೂರಪ್ಪ ಅವರು ಮಾಧ್ಯಮಗಳೊಟ್ಟಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈಗಾಗಲೇ ನಿರ್ಮಲಾ ಸೀತಾರಾಮನ್, ಅಮಿತ್ ಶಾ ಅವರನ್ನು ಪ್ರವಾಹ ವೀಕ್ಷಣೆಗೆ ಮೋದಿ ಕಳುಹಿಸಿದ್ದಾರೆ. ಜೊತೆಗೆ ವಿಶೇಷ ತಂಡವೊಂದನ್ನು ಪ್ರವಾಹ ವರದಿಗೆ ಕಳುಹಿಸುವುದಾಗಿಯೂ ಮೋದಿ ಹೇಳಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಪ್ರವಾಹದಿಂದ ಅಂದಾಜು 40,000 ಕೋಟಿ ರೂಪಾಯಿ ನಷ್ಟವಾಗಿದ್ದು, ಪರಿಹಾರ ಕಾರ್ಯಗಳು ನಡೆಯುತ್ತಿವೆ. ತಕ್ಷಣವಾಗಿ ಮೂರು ಸಾವಿರ ಕೋಟಿ ನೀಡಿರೆಂದು ಪ್ರಧಾನಿಗಳಲ್ಲಿ ಮನವಿ ಮಾಡಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಅವರೊಂದಿಗೆ ಜಗದೀಶ್ ಶೆಟ್ಟರ್, ಆರ್.ಅಶೋಕ್, ಗೋವಿಂದ ಕಾರಜೋಳ, ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಕೇಂದ್ರ ಸಚಿವರಾದ ಸುರೇಶ್ ಅಂಗಡಿ ಹಾಗೂ ಪ್ರಹ್ಲಾದ ಜೋಷಿ ಉಪಸ್ಥಿತರಿದ್ದರು.












Click it and Unblock the Notifications