Breaking: ಬಂಧಿತ ಸಚಿವರ ಕರೆ ಸ್ವೀಕರಿಸದ ಮಮತಾ ಬ್ಯಾನರ್ಜಿ!
ನವದೆಹಲಿ, ಜುಲೈ 25: ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಸಚಿವ ಪಾರ್ಥ ಚಟರ್ಜಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಕರೆ ಮಾಡಿದ್ದಾರೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ ಎಂದು ಅಧಿಕೃತ ದಾಖಲೆ ಬಹಿರಂಗಪಡಿಸಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ ಅವರನ್ನು ಶನಿವಾರ (ಜುಲೈ 23) ಬಂಧಿಸಿದೆ.
70 ವರ್ಷ ವಯಸ್ಸಿನ ಬಂಧಿತ ಸಚಿವ ಪಾರ್ಥ ಚಟರ್ಜಿ ಬಂಧನದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮೂರು ಕರೆಗಳನ್ನು ಮಾಡಿದ್ದರು. ಆದರೂ ಅವರು ಯಾವುದೇ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಸಚಿವರ ಅರೆಸ್ಟ್ ಮೆಮೋ ತಿಳಿಸಿದೆ.

ಪಾರ್ಥ ಚಟರ್ಜಿಯವರ "ಅರೆಸ್ಟ್ ಮೆಮೊ" ತಿಳಿಸುವಂತೆ ಅವರು ತಮ್ಮ ಬಂಧನದ ಕುರಿತು ತಿಳಿಸಬೇಕಿರುವ ವ್ಯಕಿ ಎಂಬ ಆಯ್ಕೆಗೆ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿಯನ್ನು ಆಯ್ಕೆ ಮಾಡಿದ್ದಾರೆ.
ಪೋಲೀಸರ ಪ್ರಕಾರ, ಯಾವುದೇ ಆರೋಪಿ ವ್ಯಕ್ತಿಗೆ ತಮ್ಮ ಬಂಧನದ ಬಗ್ಗೆ ತಿಳಿಸಲು ಸಂಬಂಧಿಕರು ಅಥವಾ ಸ್ನೇಹಿತರಿಗೆ ಕರೆ ಮಾಡಲು ಅವಕಾಶ ನೀಡಲಾಗುತ್ತದೆ. ಈ ಅವಕಾಶ ಪಡೆದು ಸಚಿವರು ಮಮತಾ ಬ್ಯಾನರ್ಜಿಗೆ ಕರೆ ಮಾಡಿದ್ದಾರೆ.
ಆದರೆ, ತೃಣಮೂಲ ಕಾಂಗ್ರೆಸ್ ಇದನ್ನು ನಿರಾಕರಿಸಿದೆ. ಬಂಧಿತ ಸಚಿವರ ಫೋನ್ ಜಾರಿ ನಿರ್ದೇಶನಾಲಯದಲ್ಲಿ ಇರುವುದರಿಂದ ಅವರು ಮಮತಾ ಬ್ಯಾನರ್ಜಿ ಅವರಿಗೆ ಕರೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ನಾಯಕ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

ಪ್ರಸ್ತುತ ಕೈಗಾರಿಕೆಗಳು ಮತ್ತು ವಾಣಿಜ್ಯ ಸಚಿವರಾಗಿರುವ ಪಾರ್ಥ ಚಟರ್ಜಿ ಅವರು ಶಿಕ್ಷಕರ ನೇಮಕಾತಿ ಹಗರಣ ನಡೆದಾಗ ಶಿಕ್ಷಣ ಖಾತೆಯನ್ನು ಹೊಂದಿದ್ದರು. ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಪಶ್ಚಿಮ ಬಂಗಾಳದ ಪ್ರೌಢ ಶಿಕ್ಷಣ ಮಂಡಳಿಯಿಂದ ನಡೆಯುವ ಶಾಲಾ ಶಿಕ್ಷಕರು ಮತ್ತು ಬೋಧಕ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿರುವ ಅಕ್ರಮದಲ್ಲಿ ಅವರ ಪಾತ್ರವಿದೆ ಎಂದು ಆರೋಪಿಸಲಾಗಿದೆ. ಸಚಿವರ ಆಪ್ತೆ ಅರ್ಪಿತಾ ಮುಖರ್ಜಿಯಿಂದ 20 ಕೋಟಿ ನಗದು ಹಣ ವಶಪಡಿಸಿಕೊಂಡ ಒಂದು ದಿನದ ನಂತರ ಇವರನ್ನು ಬಂಧಿಸಲಾಗಿದೆ.
ಬಂಧನವಾದ ತಕ್ಷಣವೇ ಅನಾರೋಗ್ಯದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಎಸ್ಎಸ್ಕೆಎಂ ಆಸ್ಪತ್ರೆಯಿಂದ ಅವರನ್ನು ಸ್ಥಳಾಂತರಿಸಬೇಕು ಎಂದು ಜಾರಿ ನಿರ್ದೇಶನಾಲಯ ನ್ಯಾಯಾಲಯದ ಮೊರೆ ಹೋಗಿತ್ತು. ಅವರನ್ನು ಏಮ್ಸ್-ಭುವನೇಶ್ವರಕ್ಕೆ ಕರೆದೊಯ್ಯಲು ಕಲ್ಕತ್ತಾ ಹೈಕೋರ್ಟ್ನ ಆದೇಶಿಸಿದೆ. ನಂತರ ಅವರನ್ನು ಇಂದು ಬೆಳಿಗ್ಗೆ ಏರ್ ಆಂಬ್ಯುಲೆನ್ಸ್ ಮೂಲಕ ಒಡಿಶಾಕ್ಕೆ ಕರೆದೊಯ್ಯಲಾಗಿದೆ.












Click it and Unblock the Notifications