ಕರ್ನಾಟಕ ಭವನಕ್ಕೆ ಶಂಕು ಸ್ಥಾಪನೆ : ಒಟ್ಟಾಗಿ ಪೂಜೆ ಮಾಡಿದ ರೇವಣ್ಣ, ಬಿಎಸ್ವೈ
ನವದೆಹಲಿ, ಮಾರ್ಚ್ 08 : ನವದೆಹಲಿಯಲ್ಲಿ ನೂತನ ಕರ್ನಾಟಕ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಎಚ್.ಡಿ.ರೇವಣ್ಣ ಅವರು ಬಿ.ಎಸ್.ಯಡಿಯೂರಪ್ಪ ಕೈ ಹಿಡಿದು ಪೂಜೆ ಮಾಡಿಸಿದ್ದು ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು.
ಶುಕ್ರವಾರ ಎರಡು ಬಾರಿ ದೆಹಲಿಯ ಕರ್ನಾಟಕ ಭವವ ನಿರ್ಮಾಣಕ್ಕೆ ಪೂಜೆ ಸಲ್ಲಿಸಲಾಯಿತು. ಸಂಜೆ 4.30ಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿಯಾಗಿತ್ತು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ತಮ್ಮ ನಂಬಿಕೆಯಂತೆ ಬೆಳಗ್ಗೆ 7.30ಕ್ಕೆ ಪೂಜೆ ಸಲ್ಲಿಸಿದರು.
ಸಂಜೆ 4.30ಕ್ಕೆ ನಡೆದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಯಡಿಯೂರಪ್ಪ ಕರೆತಂದ ರೇವಣ್ಣ : ಬೆಳಗ್ಗೆ 7.30ಕ್ಕೆ ಎಚ್.ಡಿ.ರೇವಣ್ಣ ಭವನ ನಿರ್ಮಾಣಕ್ಕೆ ಪೂಜೆ ಸಲ್ಲಿಸಲು ಹೋಗಿದ್ದರು. ಆಗ ಅಲ್ಲಿಯೇ ವಾಕಿಂಗ್ ಹೋಗುತ್ತಿದ್ದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಕಂಡು, ಅವರ ಬಳಿ ಹೋದರು.
ಯಡಿಯೂರಪ್ಪ ಅವರಿಗೆ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಇಲ್ಲದಿದ್ದರೂ ಅವರ ಕೈ ಹಿಡಿದು ಎಳೆದುಕೊಂಡು ಬಂದ ರೇವಣ್ಣ ಅವರು ಅವರಿಂದ ಪೂಜೆ ಮಾಡಿಸಿದರು. ಈ ಮೂಲಕ ರಾಜಕೀಯ ವೈಷಮ್ಯ ಮರೆತು ಒಂದಾದರು.
ನಿಗದಿತ ಕಾರ್ಯಕ್ರಮದಂತೆ ಸಂಜೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ದೆಹಲಿಯಲ್ಲಿ ಈಗಿರುವ ಕರ್ನಾಟಕ ಭವನ ಹಳೆಯದಾಗಿದೆ. ಆದ್ದರಿಂದ, 82 ಕೋಟಿ ವೆಚ್ಚದಲ್ಲಿ ಹೊಸ ಭವನ ನಿರ್ಮಾಣ ಮಾಡಲಾಗುತ್ತಿದೆ.

ದೆಹಲಿಗೆ ರಾಜ್ಯದ ಜನಪ್ರತಿನಿಧಿಗಳು ತೆರಳಿದಾಗ ವಾಸ್ತವ್ಯ ಹೂಡಲು ಕರ್ನಾಟಕ ಭವನ ನಿರ್ಮಾಣ ಮಾಡಲಾಗುತ್ತದೆ. ಮೊದಲು ಇದನ್ನು ಮೈಸೂರು ಭವನ ಎಂದು ಕರೆಯುತ್ತಿದ್ದರು. ಧರಂ ಸಿಂಗ್ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ಭವನ ಎಂದು ಮರು ನಾಮಕರಣ ಮಾಡಿದರು. ಈಗ ಕರ್ನಾಟಕ ಭವನ ಎಂದು ಕರೆಯಲಾಗುತ್ತಿದೆ.












Click it and Unblock the Notifications