ನ್ಯಾಯಾಧೀಶರಿಗೆ ರಜೆಯಿಲ್ಲ! ಬಾಕಿ ಪ್ರಕರಣ ಇತ್ಯರ್ಥಕ್ಕೆ ಸಿಜೆಐ ಹೊಸ ಕ್ರಮ!
ನವದೆಹಲಿ, ಅಕ್ಟೋಬರ್ 12: ಬಾಕಿ ಇರುವ ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ನ್ಯಾಯಾಧೀಶರು ಕೆಲದಿನಗಳ ಕಾಲ ರಜೆ ಪಡೆಯಬಾರದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್, ಹೈಕೋರ್ಟ್ ಮತ್ತು ಟ್ರಯಲ್ ಕೋರ್ಟಿನಲ್ಲಿ ಈಗಾಗಲೇ ಒಟ್ಟು 3 ಕೋಟಿ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ. ಅವುಗಳನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಮತ್ತಷ್ಟು ಗೌರವ ಹೆಚ್ಚಿಸಬೇಕಿದೆ ಎಂದು ಗೊಗೊಯ್ ಅಭಿಪ್ರಾಯ ಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್, ಟ್ರಯಲ್ ಕೋರ್ಟ್ ಮತ್ತು ಹೈಕೋರ್ಟಿನ ನ್ಯಾಯಾಧೀಶರು ಕೆಲದಿನಗಳ ಕಾಲ ಅಂದರೆ ವಾರದ ದಿನಗಳಲ್ಲಿ ಯಾವುದೇ ರಜೆ ಪಡೆಯದೆ ಕೆಲಸ ಮಾಡಬೇಕು ಎಂಬ ಹೊಸ ಕ್ರಮವನ್ನು ನೂತನ ಸಿಜೆಐ ತಂದಿದ್ದಾರೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಅಕ್ಟೋಬರ್ 3 ರಂದು ನ್ಯಾ.ರಂಜನ್ ಗೊಗೊಯ್ ನೇಮಕಗೊಂಡರು. ಅಕ್ಟೋಬರ್ 2 ರಂದು ನ್ಯಾ.ದೀಪಕ್ ಮಿಶ್ರಾ ಅವರ ಅಧಿಕಾರಾವಧಿ ಅಂತ್ಯವಾಗಿದ್ದರಿಂದ, ಹಿರಿತನದ ಆಧಾರದ ಮೇಲೆ ಗೊಗೊಯ್ ಅವರನ್ನು ನೂತನ ಸಿಜೆಐ ಆಗಿ ನೇಮಿಸಲಾಗಿದೆ.
ಸಿಜೆಐ ಆಗಿ ಅಧಿಕಾರ ಸ್ವೀಕರಿದ ಒಂದು ವಾರದಲ್ಲೇ ನ್ಯಾಯಾಧೀಶರ ರಜೆಗೆ ಗೊಗೊಯ್ ಕೊಕ್ಕೆ ಹಾಕಿದ್ದು, ನ್ಯಾಯಾಂಗ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.












Click it and Unblock the Notifications