ಊಟಕ್ಕಾಗಿ ವಿಷಾನಿಲ: ದಿನಾಚರಣೆ ಕಥೆಯಲ್ಲಿ ಮಕ್ಕಳ ವ್ಯಥೆ!
ದೆಹಲಿ, ನವೆಂಬರ್.14: ರಾಷ್ಟ್ರದಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ. ಶಾಲೆಗಳಲ್ಲಿ ವಿವಿಧ ವೇಷಗಳನ್ನು ತೊಟ್ಟು ವಿದ್ಯಾರ್ಥಿಗಳು ಬರುತ್ತಾರೆ. ಶಿಕ್ಷಕರೆಲ್ಲ ಮಕ್ಕಳ ದಿನಾಚರಣೆ ದಿನ ಸಿಹಿಯನ್ನು ನೀಡಿ ವಿದ್ಯಾರ್ಥಿಗಳ ಜೊತೆ ಆಚರಿಸುತ್ತಾರೆ. ಇದು ಭಾರತದಾದ್ಯಂತ ಮಕ್ಕಳ ದಿನಾಚರಣೆಯನ್ನು ಆಚರಿಸುವ ಪರಿ.
ಮಾಜಿ ಪ್ರಧಾನಮಂತ್ರಿ ದಿವಂಗತ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ದೇಶದಲ್ಲಿ ಆಚರಿಸಲಾಗುತ್ತದೆ. ಇಂದಿನ ದಿನ ಮಕ್ಕಳ ಪಾಲಿಗೆ ಅಕ್ಷರಶಃ ಹಬ್ಬ. ಹೆತ್ತವರಿಗೂ ಈ ದಿನ ಒಂದು ರೀತಿ ವಿಶೇಷವೇ.
ರಾಷ್ಟ್ರವೆಲ್ಲ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತದೆ. ಆದರೆ, ರಾಷ್ಟ್ರ ರಾಜಧಾನಿಯ ಚಿತ್ರಣ ಹಾಗಿಲ್ಲ. ಇಲ್ಲಿ ಮಕ್ಕಳಿಗೆ ದಿನಾಚರಣೆಯ ಸಂಭ್ರಮವಿಲ್ಲ. ಬಾಯಿಗೆ ಸಿಹಿ ಇರಲಿ, ಹಸಿದ ಹೊಟ್ಟೆಗೆ ಊಟವಿಲ್ಲ. ದುಡಿಮೆ ಇಲ್ಲದೇ ಇಲ್ಲಿ ತುತ್ತಿನ ಚೀಲ ತುಂಬುವುದಿಲ್ಲ.
ದಿನಾಚರಣೆ ಅಲ್ಲ ಹಸಿವಿನ ಚೀಲ ಮುಖ್ಯ: ದೆಹಲಿ ಮಕ್ಕಳ ಕಥೆ ಕೇಳಿ
ಇಡೀ ರಾಷ್ಟ್ರಾದ್ಯಂತ ಮಕ್ಕಳ ದಿನಾಚರಣೆಯ ಚಿತ್ರಣವೇ ಒಂದು ರೀತಿಯಿದೆ. ಆದರೆ, ದೆಹಲಿಯಲ್ಲಿ ಮಕ್ಕಳ ದಿನಾಚರಣೆಯ ಚಿತ್ರಣವೇ ಮತ್ತೊಂದು ರೀತಿಯಿದೆ. ನಗರದಲ್ಲಿ ಈಗಾಗಲೇ ವಾಯುಮಾಲಿನ್ಯ ಪ್ರಮಾಣ ಮಿತಿ ಮೀರಿ ಹೋಗಿರುವುದು ಗೊತ್ತೇ ಇದೆ. ಇಲ್ಲಿ ಸಾಧಾರಣವಾಗಿ ಉಸಿರಾಡಿದರೆ ಉಸಿರು ನಿಲ್ಲುವಂತಾ ಪರಿಸ್ಥಿತಿಯಿದೆ. ಎಲ್ಲ ತಿಳಿದಿದ್ದರೂ ಈ ಮಕ್ಕಳಿಗೆ ದುಡಿಮೆ ಮಾಡದೇ ವಿಧಿಯಿಲ್ಲ.

ಮೊಬೈಲ್ ಸ್ಟೇಟಸ್ ಅಲ್ಲ ಇದು ರಿಯಾಲಿಟಿ!
ಮಕ್ಕಳ ದಿನಾಚರಣೆ ದಿನ. ಇಂದು ಮುದ್ದು ಮಕ್ಕಳಿಗೆ ಹೆತ್ತವರು ಮಾಡುವ ಅಲಂಕಾರವನ್ನು ನೋಡುವುದೇ ಚೆಂದ. ಕಲರ್ ಫುಲ್ ಮಕ್ಕಳ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಮೊಬೈಲ್ ಸ್ಟೇಟಸ್ ಹಾಕುವವರ ಸಂಖ್ಯೆ ದೇಶದಲ್ಲಿ ಕಡಿಮೆಯೇನೂ ಇಲ್ಲ. ಯಾಕಂದರೆ ಈಗ ಅದೂ ಕೂಡಾ ಒಂದು ಟ್ರೆಂಡ್ ಆಗಿ ಬಿಟ್ಟಿದೆ. ಆದರೆ, ದೆಹಲಿಯಲ್ಲಿನ ಮಕ್ಕಳ ಬದುಕಿನ ಚಿತ್ರಣ, ರಿಯಾಲಿಟಿಯನ್ನು ಎತ್ತಿ ತೋರಿಸುತ್ತಿದೆ.

ಊಟಕ್ಕಾಗಿ ಉಸಿರಾಡಬೇಕಿದೆ ಈ ಮಕ್ಕಳು!
ದೆಹಲಿಯಲ್ಲಿ ಈ ಮಕ್ಕಳಿಗೆ ಹಸಿವು ನೀಗಿಸಿಕೊಳ್ಳುವ ಅನಿವಾರ್ಯತೆಯಿದೆ. ಇಲ್ಲಿ ಹಬ್ಬ, ಆಚರಣೆಗೆ ಅವಕಾಶವಿಲ್ಲ. ತುತ್ತಿನ ಚೀಲ ತುಂಬಿಸಿಕೊಳ್ಳಲು ಇಲ್ಲಿ ಮಕ್ಕಳೇ ದುಡಿಯಬೇಕು. ದೆಹಲಿಯ ಟ್ರಾಫಿಕ್ ಸಿಗ್ನಲ್ ಗಳಲ್ಲಿ ನಿಂತು ಬಲೂನ್ ಗಳನ್ನು ಮಾರಾಟ ಮಾಡಬೇಕು. ಇದರಲ್ಲಿ ಸಿಕ್ಕ ಲಾಭದಲ್ಲಿ ಹೊಟ್ಟೆ ತುಂಬಿಸಿಕೊಳ್ಳಬೇಕು.

ಏನು ಮಾಡುತ್ತಿದೆಯೋ ಕೇಜ್ರಿ ಸರ್ಕಾರ?
ನಗರದಲ್ಲಿ ಗಾಳಿಯ ಗುಣಮಟ್ಟ ಮಿತಿ ಮೀರಿ ಹೋಗಿದೆ. ದೆಹಲಿಯಲ್ಲಿ ಉಸಿರಾಡುವ ಗಾಳಿ ವಿಷಾನಿಲಕ್ಕಿಂತಲೂ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಹೀಗಾಗಿ ಪ್ರತಿಯೊಬ್ಬರಿಗೂ ಸರ್ಕಾರದಿಂದಲೇ ಮಾಸ್ಕ್ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಆದರೆ, ಬೀದಿ ಬೀದಿ ಸುತ್ತುವ ಸಿಗ್ನಲ್ ಗಳಲ್ಲಿ ಹೀಗೆ ಬಲೂನ್ ಗಳನ್ನು ಮಾರಾಟ ಮಾಡುವ ಮಕ್ಕಳಿಗೆ ಸರ್ಕಾರದಿಂದ ಯಾವುದೇ ಮಾಸ್ಕ್ ಗಳು ಸಿಕ್ಕಿಲ್ಲವಂತೆ. ಇಲ್ಲಿ ನಿತ್ಯ ಉಸಿರಾಡುವುದಕ್ಕೆ ತೊಂದರೆ ಆಗುತ್ತಿದೆ. ಬೆಳಗ್ಗೆ ಎದ್ದು ರಸ್ತೆಗೆ ಇಳಿದರೆ ಸಾಕು ಕಣ್ಣುಗಳು ಉರಿಯುತ್ತವೆ. ಉಸಿರಾಡುವುದಕ್ಕೆ ಕಷ್ಟವಾಗುತ್ತಿದೆ ಎಂದು ಸ್ವತಃ ಪುಟ್ಟ ಬಾಲಕನೊಬ್ಬ ಹೇಳಿಕೊಂಡಿದ್ದಾರೆ.

ಇದು ಶಾಲೆಗೆ ಹೊರಟ ವಿದ್ಯಾರ್ಥಿಗಳ ಕಥೆಯಲ್ಲ!
ಸರ್ಕಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. ಅದು ಉಳ್ಳವರ ಕಥೆಯಾಯಿತು. ಹಿಂದು-ಮುಂದು ಇಲ್ಲದೇ ಹೀಗೆ ಬದುಕನ್ನು ಹುಡುಕಿ ಹೊರಟ ಮಕ್ಕಳಿಗಾಗಿ ದೆಹಲಿ ಸರ್ಕಾರ ಏನು ಮಾಡಿದೆಯೋ ಏನೋ ಆ ದೇವರೇ ಬಲ್ಲ. ನಿತ್ಯ ಸಿಗ್ನಲ್ ಗಳಲ್ಲಿ ದುಡಿಯುತ್ತಿರುವ ಈ ಪುಟ್ಟ ಮಕ್ಕಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲವೋ, ಅಥವಾ ಜನಪ್ರತಿನಿಧಿಗಳು ಹಾಗೂ ಸರ್ಕಾರ ಕಂಡೂ ಕಾಣದಂತೆ ಸುಮ್ಮನಿದ್ದಾರೋ ಎಂಬ ಪ್ರಶ್ನೆಗೆ ಅವರೇ ಉತ್ತರ ನೀಡಬೇಕು.












Click it and Unblock the Notifications