ಉರಿಯುವ ಬೆಂಕಿಗೆ ತುಪ್ಪ ಸುರಿದ ಕೇಂದ್ರ: ದೆಹಲಿ ಸರ್ಕಾರದ ಅಧಿಕಾರಕ್ಕೆ ಅಂಕುಶ
ನವದೆಹಲಿ, ಮಾರ್ಚ್ 16: ದೆಹಲಿಯಲ್ಲಿನ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವಿನ ತಿಕ್ಕಾಟ ತೀವ್ರವಾಗಿರುವ ನಡುವೆಯೇ ಲೆಫ್ಟಿನೆಂಟ್ ಗವರ್ನರ್ಗೆ ಮತ್ತಷ್ಟು ಅಧಿಕಾರ ನೀಡುವ ವಿವಾದಾತ್ಮಕ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯ ಲೋಕಸಭೆಯಲ್ಲಿ ಮಂಡಿಸಿದೆ.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅವರ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಈ ಮಸೂದೆ ಇನ್ನಷ್ಟು ಅಧಿಕಾರ ನೀಡಲಿದ್ದು, ಆಮ್ ಆದ್ಮಿ ಪಕ್ಷದ ಸರ್ಕಾರ ಹಾಗೂ ಕೇಂದ್ರದ ಸಂಘರ್ಷಕ್ಕೆ ತುಪ್ಪ ಸುರಿದಂತಾಗಿದೆ.
ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಸರ್ಕಾರ (ತಿದ್ದುಪಡಿ) ಕಾಯ್ದೆ 2021 ಮಸೂದೆಯ ಪ್ರಕಾರ, ದೆಹಲಿಯಲ್ಲಿನ ವಿಧಾನಸಭೆಯಲ್ಲಿ ಅಂಗೀಕರಿಸುವ ಯಾವುದೇ ಕಾನೂನಿನಲ್ಲಿ ಉಲ್ಲೇಖಿಸುವ 'ಸರ್ಕಾರ' ಎನ್ನುವುದು ಲೆಫ್ಟಿನೆಂಟ್ ಗವರ್ನರ್ ಎಂಬ ಅರ್ಥ ನೀಡುತ್ತದೆ. ಯಾವುದೇ ಕ್ರಮವನ್ನು ಅನುಷ್ಠಾನಗೊಳಿಸುವ ಮುನ್ನ ಚುನಾಯಿ ಸರ್ಕಾರವು ಎಲ್-ಜಿಯ ಅಭಿಪ್ರಾಯ ಪಡೆಯಬೇಕು. ಚುನಾಯಿತ ಸರ್ಕಾರವು ದೈನಂದಿನ ಆಡಳಿತದ ವಿಚಾರಗಳನ್ನು ಕೈಗೆತ್ತಿಕೊಳ್ಳಲು ಅಥವಾ ಆಡಳಿತಾತ್ಮಕ ನಿರ್ಧಾರಗಳಲ್ಲಿ ತನಿಖೆಗಳನ್ನು ನಡೆಸುವ ಸಲುವಾಗಿ ತನ್ನ ಅಥವಾ ಅದರ ಸಮಿತಿಗಳ ಅಧಿಕಾರವನ್ನು ವಿಸ್ತರಿಸುವ ಯಾವುದೇ ನಿಯಮಗಳನ್ನು ಮಾಡುವುದರಿಂದ ನಿರ್ಬಂಧಿಸಲಾಗಿದೆ.

ನೀತಿ ರೂಪಿಸುವಂತಿಲ್ಲ
ದೆಹಲಿ ವಿಧಾನಸಭೆಯು ಭಾರತೀಯ ಸಂಸತ್ನಲ್ಲಿನ ವ್ಯವಹಾರಗಳ ಕಾರ್ಯವಿಧಾನ ಮತ್ತು ನೀತಿಯ ನಿಯಮಗಳಿಗೆ ಹೊಂದಾಣಿಕೆಯಾಗದ ರೀತಿಯಲ್ಲಿ ತನ್ನ ವ್ಯವಹಾರಗಳ ಕಾರ್ಯವಿಧಾನ ಮತ್ತು ನೀತಿಗಳನ್ನು ನಿಯಂತ್ರಿಸುವ ನೀತಿಗಳನ್ನು ರಚಿಸುವಂತಿಲ್ಲ.

ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು
2018ರ ಜುಲೈ 4ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ದೆಹಲಿ ಸರ್ಕಾರದ ಪ್ರತಿ ನಿರ್ಧಾರಗಳಲ್ಲಿಯೂ ಲೆಫ್ಟಿನೆಂಟ್ ಗವರ್ನರ್ ಹಸ್ತಕ್ಷೇಪ ಮಾಡುವಂತಿಲ್ಲ. ಅವರು ಸರ್ಕಾರದ ಸಂಪುಟಕ್ಕೆ ಸಲಹೆ ಮತ್ತು ಸಹಾಯ ಮಾಡುವ ರೀತಿಯಲ್ಲಷ್ಟೇ ಕೆಲಸ ಮಾಡಬೇಕು ಎಂದು ಹೇಳಿತ್ತು.

ಜನರಿಂದ ತಿರಸ್ಕೃತ ಬಿಜೆಪಿ
ಈ ಮಸೂದೆಯ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ. 'ದೆಹಲಿಯ ಜನರಿಂದ ತಿರಸ್ಕೃತಗೊಂಡ ಬಳಿಕ (ವಿಧಾನಸಭೆಯಲ್ಲಿ 8 ಸೀಟು, ಎಂಸಿಡಿ ಉಪ ಚುನಾವಣೆಯಲ್ಲಿ 0 ಸೀಟು), ಚುನಾಯಿತ ಸರ್ಕಾರದ ಅಧಿಕಾರವನ್ನು ತೀವ್ರವಾಗಿ ಹತ್ತಿಕ್ಕಲು ಇಂದು ಲೋಕಸಭೆಯಲ್ಲಿ ಮಸೂದೆ ಮಂಡಿಸಿದೆ. ಈ ಮಸೂದೆಯು ಸಾಂವಿಧಾನಿಕ ಪೀಠದ ತೀರ್ಪಿಗೆ ವಿರುದ್ಧವಾಗಿದೆ. ಬಿಜೆಪಿಯ ಪ್ರಜಾಪ್ರಭುತ್ವ ವಿರೋಧಿ ಅಸಂವಿಧಾನಿಕ ನಡೆಯನ್ನು ಖಂಡಿಸುತ್ತೇವೆ' ಎಂದು ಟ್ವೀಟ್ ಮಾಡಿದ್ದಾರೆ.

ಕೇಜ್ರಿವಾಲ್ ಪ್ರಶ್ನೆ
'ಈ ಮಸೂದೆ ಹೇಳುತ್ತದೆ- 1. ದೆಹಲಿಗೆ, 'ಸರ್ಕಾರ' ಎಂದರೆ ಎಲ್ಜಿ. ಹಾಗಾದರೆ ಚುನಾಯಿತ ಸರ್ಕಾರ ಏನು ಮಾಡುವುದು? 2. ಎಲ್ಲ ಕಡತಗಳೂ ಎಲ್ಜಿಗೆ ಹೋಗುತ್ತವೆ. ಇದು 4.7.18ರ ಸಂವಿಧಾನ ಪೀಠದ ತೀರ್ಪಿಗೆ ವಿರುದ್ಧವಾಗಿದೆ. ಕಡತಗಳು ಎಲ್ಜಿಗೆ ಹೋಗುವ ಅಗತ್ಯವಿಲ್ಲ, ಚುನಾಯಿತ ಸರ್ಕಾರವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ ಮತ್ತು ನಿರ್ಧಾರದ ಪ್ರತಿಯನ್ನು ಎಲ್ಜಿಗೆ ಕಳುಹಿಸುತ್ತದೆ' ಎಂದು ಕೇಜ್ರಿವಾಲ್ ಹೇಳಿದ್ದಾರೆ.












Click it and Unblock the Notifications