ದೆಹಲಿಯ 3 ಮಹಾನಗರ ಪಾಲಿಕೆ ವಿಲೀನಕ್ಕೆ ಕೇಂದ್ರ ಸರ್ಕಾರದ ಹಸಿರು ನಿಶಾನೆ
ನವದೆಹಲಿ, ಮಾರ್ಚ್ 22: ನವದೆಹಲಿಯ ಮೂರು ಮಹಾನಗರ ಪಾಲಿಕೆಗಳನ್ನು ವಿಲೀನಗೊಳಿಸುವ ಏಕೀಕರಣ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವುದಕ್ಕೆ ಕೇಂದ್ರ ಸರ್ಕಾರ ನಿರ್ಧರಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ಅಸ್ತಿತ್ವದಲ್ಲಿರುವ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅನ್ನು ವಿಲೀನಗೊಳಿಸುವುದಕ್ಕೆ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ.
ಮುಂದಿನ ವಾರ ದೆಹಲಿ ಮಹಾನಗರ ಪಾಲಿಕೆಗಳ ವಿಲೀನಕ್ಕೆ ಸಂಬಂಧಿಸಿದ ಏಕೀಕರಣ ಮಸೂದೆಯು ಸಂಸತ್ತಿನಲ್ಲಿ ಮಂಡನೆ ಆಗಲಿದೆ. ರಾಷ್ಟ್ರಪತಿಗಳ ಅನುಮೋದನೆ ನಂತರ ಮೂರು ಮಹಾನಗರ ಪಾಲಿಕೆಗಳು ವಿಲೀನಗೊಳ್ಳಲಿದ್ದು, ಒಬ್ಬರೇ ಮೇಯರ್ ಆಗಲಿದ್ದಾರೆ.

ಬಿಜೆಪಿಯನ್ನು ಪ್ರಶ್ನೆ ಮಾಡಿದ ಸಿಎಂ ಅರವಿಂದ್ ಕೇಜ್ರಿವಾಲ್:
"ಕೇಂದ್ರದಲ್ಲಿ ಭಾರತೀಯ ಜನತಾ ಪಕ್ಷವು ಸುಮಾರು ಎಂಟು ವರ್ಷಗಳಿಂದ ಅಧಿಕಾರದಲ್ಲಿದೆ. ಅವರು ಮೂರು ಪಾಲಿಕೆಗಳನ್ನು ವಿಲೀನಗೊಳಿಸುವುದೇ ಆಗಿದ್ದರೆ, ಇಷ್ಟು ವರ್ಷಗಳ ಕಾಲ ಅದನ್ನು ಏಕೆ ಮಾಡಲಿಲ್ಲ. ಎಂಸಿಡಿ ಚುನಾವಣೆಯ ದಿನಾಂಕಗಳ ನಿಗದಿತ ಘೋಷಣೆಗೆ ಕೇವಲ ಒಂದು ಗಂಟೆ ಮೊದಲು ಚುನಾವಣಾ ಆಯೋಗಕ್ಕೆ ಏಕೆ ಪತ್ರ ಬರೆಯಬೇಕು? ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ಬಿಜೆಪಿಗೆ ಸೋಲಿನ ಭೀತಿ ಎಂದ ಆಪ್:
"ಮೂರು ಮಹಾನಗರ ಪಾಲಿಕೆಗಳ ಏಕೀಕರಣವನ್ನು ಬಹಳ ಹಿಂದೆಯೇ ಮಾಡಬಹುದಾಗಿತ್ತು. ಯಾವಾಗ ಬೇಕಿದ್ದರೂ ಮಾಡಬಹುದಿತ್ತು. ಆದರೆ ಇದು ಮಹಾನಗರ ಪಾಲಿಕೆಗಳ ಚುನಾವಣೆಯನ್ನು ವಿಳಂಬಗೊಳಿಸುವ ತಂತ್ರ. ದೆಹಲಿಯ ನಾಗರಿಕ ಚುನಾವಣೆಯಲ್ಲಿ ಬಿಜೆಪಿಯು ಸೋಲುವ ಭಯದಲ್ಲಿದೆ ಎಂದು ಆಮ್ ಆದ್ಮಿ ಪಕ್ಷ ದೂಷಿಸಿದೆ.
ಬಿಜೆಪಿಗೆ ಸೋಲಿನ ಅಂತರದ ಭೀತಿ ಹೆಚ್ಚಿದೆ:
"ಮೂರು ಮಹಾನಗರ ಪಾಲಿಕೆಗಳಲ್ಲಿ ಲಭ್ಯತೆ ಮತ್ತು ಸಂಪನ್ಮೂಲಗಳ ನಡುವೆ ಭಾರಿ ಅಂತರವಿದೆ. ಮೂರು ಮುನ್ಸಿಪಲ್ ಕಾರ್ಪೊರೇಶನ್ಗಳ ಆರ್ಥಿಕ ತೊಂದರೆಗಳು ಕಾಲದಿಂದ ಕಾಲಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಸರಿಯಾದ ಸಮಯಕ್ಕೆ ತನ್ನ ಉದ್ಯೋಗಿಗಳಿಗೆ ವೇತನವನ್ನೂ ನೀಡಲಾಗದ ಸ್ಥಿತಿ ಸೃಷ್ಟಿಯಾಗಿದೆ. ದೆಹಲಿಯ ಮೂರು ಪಾಲಿಕೆಗಳಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ಉದ್ಯೋಗಿಗಳಿಗೆ ಸೂಕ್ತ ಕಾಲಕ್ಕೆ ನಿವೃತ್ತಿ ಪ್ರಯೋಜನಗಳನ್ನು ನೀಡುವುದರಲ್ಲಿಯೂ ತೀವ್ರ ಅಡಚಣೆಗಳು ಎದುರಾಗಿರುವ ಬಗ್ಗೆ ಆಪ್ ಆರೋಪಿಸಿದೆ.
ಮೂರು ಮಹಾನಗರ ಪಾಲಿಕೆಗಳ ವಿಲೀನ ಕಾಯ್ದೆ:
ಈ ಹಿಂದಿನಿಂದಲೂ ದೆಹಲಿ ಮಹಾಗರ ಪಾಲಿಕೆಯನ್ನು ಮೂರು ಮುನ್ಸಿಪಲ್ ಕಾರ್ಪೊರೇಶನ್ ಆಗಿ ವಿಭಜಿಸಲಾಗಿದೆ. 2011 ರಲ್ಲಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತಿದ್ದುಪಡಿ ಕಾಯ್ದೆ ಪ್ರಕಾರ, ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (SDMC), ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (NDMC), ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (EDMC) ಆಗಿವೆ. ಈ ಕಾಯ್ದೆಯ ತಿದ್ದುಪಡಿಯು ಅಸ್ತಿತ್ವದಲ್ಲಿರುವ ಮೂರು ನಿಗಮಗಳನ್ನು ಒಳಗೊಳ್ಳುವ ಮೂಲಕ ದೆಹಲಿಯ ಏಕೀಕೃತ ಮುನ್ಸಿಪಲ್ ಕಾರ್ಪೊರೇಶನ್ ಆಗಿ ಮಾಡುತ್ತದೆ.
ಮಹಾನಗರ ಪಾಲಿಕೆ ಚುನಾವಣೆ ಮುಂದೂಡಿಕೆಗೆ ಪತ್ರ:
ಭಾರತೀಯ ಜನತಾ ಪಕ್ಷಕ್ಕೆ ಸೋಲಿನ ಭೀತಿಯಿಂದ ಮಹಾನಗರ ಪಾಲಿಕೆ ಚುನಾವಣೆ ಮುಂದೂಡುವುದಕ್ಕೆ ಪ್ರಯತ್ನಿಸುತ್ತಿದೆ. ಇದು ದೇಶದ ಪ್ರಜಾಪ್ರಭುತ್ವವನ್ನೇ ಬೆದರಿಸುವಂತಿದೆ. ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಮುಂದೂಡುವಂತೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು ರಾಜ್ಯದ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.












Click it and Unblock the Notifications