UPSC ಪರೀಕ್ಷೆ; ಕೊನೆ ಪ್ರಯತ್ನದಿಂದ ವಂಚಿತರಾದವರಿಗೆ ಮತ್ತೊಂದು ಅವಕಾಶ ನೀಡಲು ಗ್ರೀನ್ ಸಿಗ್ನಲ್
ನವದೆಹಲಿ, ಫೆಬ್ರುವರಿ 05: ಕೊರೊನಾ ಸೋಂಕಿನ ಕಾರಣದಿಂದಾಗಿ 2020ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) ಪರೀಕ್ಷೆ ಬರೆಯುವ ತಮ್ಮ ಕೊನೆಯ ಅವಕಾಶದಿಂದ ವಂಚಿತರಾದ ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಮತ್ತೊಂದು ಅವಕಾಶ ನೀಡುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಶುಕ್ರವಾರ ತಿಳಿಸಿದೆ.
ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಕೋರಿ ರಚನಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಕೈಗೊಂಡಿದ್ದು, ಈ ಸಂದರ್ಭ ಕೊರೊನಾ ಕಾರಣದಿಂದಾಗಿ ಪರೀಕ್ಷೆ ಬರೆಯುವ ತಮ್ಮ ಕೊನೆಯ ಅವಕಾಶದಿಂದ (ವಯಸ್ಸಿನ ಮಿತಿಯ ಕಾರಣ) ವಂಚಿತರಾದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡುವ ಕುರಿತು ಆಲೋಚಿಸುವಂತೆ ಕೋರ್ಟ್ ಕೇಂದ್ರಕ್ಕೆ ತಿಳಿಸಿತ್ತು.
UPSC ಪರೀಕ್ಷೆ; ಕೊನೆ ಪ್ರಯತ್ನದಿಂದ ವಂಚಿತರಾದವರಿಗೆ ಮತ್ತೊಂದು ಅವಕಾಶವಿದೆಯೇ?
ಕಳೆದ ಅಕ್ಟೋಬರ್ 4ರಂದು ನಾಗರಿಕ ಸೇವಾ ಪರೀಕ್ಷೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮೇನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ಕೊರೊನಾ ಕಾರಣದಿಂದಾಗಿ ಅಕ್ಟೋಬರ್ ಗೆ ಮುಂದೂಡಲಾಗಿತ್ತು. ಆನಂತರ ಸೆಪ್ಟೆಂಬರ್ ನಲ್ಲಿ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಲೋಕಸೇವಾ ಆಯೋಗಕ್ಕೆ ಮನವಿಯನ್ನು ಗಣನೆಗೆ ತೆಗೆದುಕೊಳ್ಳುವಂತೆ ತಿಳಿಸಿತ್ತು.
ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯು ಈ ವಿಷಯವನ್ನು ಸರ್ಕಾರ ಪರಿಗಣಿಸುತ್ತಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿತ್ತು. ಆದರೆ ಜನವರಿ 22ರಂದು, ಅಭ್ಯರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಪ್ರಕಟಿಸಿತ್ತು. ಆದರೆ ಇದೀಗ ಮತ್ತೊಂದು ಅವಕಾಶ ನೀಡಲು ಸಿದ್ಧವಿರುವುದಾಗಿ ತಿಳಿಸಿದೆ.