Just in: ರಾಷ್ಟ್ರ ಧ್ವಜ ಸಂಹಿತೆಯಲ್ಲಿ ಬದಲಾವಣೆ ಮಾಡಿದ ಸರ್ಕಾರ
ನವದೆಹಲಿ, ಜುಲೈ 23: ತ್ರಿವರ್ಣ ಧ್ವಜವನ್ನು ಹಗಲು-ರಾತ್ರಿ ಹಾರಿಸುವುದು, ಪಾಲಿಸ್ಟರ್ ಬಳಕೆ ಸೇರಿ ಯಂತ್ರದಿಂದ ಧ್ವಜ ತಯಾರಿಸಲು ಅವಕಾಶ ನೀಡುವ ಮೂಲಕ ಕೇಂದ್ರ ಸರ್ಕಾರವು ದೇಶದ ಧ್ವಜ ಸಂಹಿತೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ.
'ಆಜಾದಿ ಕಾ ಅಮೃತ್ ಮಹೋತ್ಸವ'ದ ಅಂಗವಾಗಿ ಸರ್ಕಾರವು ಆಗಸ್ಟ್ 13 ರಿಂದ 15 ರವರೆಗೆ 'ಹರ್ ಘರ್ ತಿರಂಗ' (ಪ್ರತಿ ಮನೆಯಲ್ಲೂ ಧ್ವಜಾರೋಹಣ) ಅಭಿಯಾನ ಪ್ರಾರಂಭಿಸಲಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.
2002ರ ಭಾರತದ ಧ್ವಜ ಸಂಹಿತೆ ಮತ್ತು1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯಿದೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಾಷ್ಟ್ರಧ್ವಜದ ಪ್ರದರ್ಶನ, ಹಾರಾಟ ಮತ್ತು ಬಳಕೆಯನ್ನು ಮಾಡಬೇಕು ಎಂದು ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಪತ್ರ ಬರೆದಿದ್ದಾರೆ.

ಭಾರತದ ಧ್ವಜ ಸಂಹಿತೆ, 2002 ಅನ್ನು ಜುಲೈ 20, 2022 ರ ಆದೇಶದ ಮೂಲಕ ಮತ್ತಷ್ಟು ತಿದ್ದುಪಡಿ ಮಾಡಲಾಗಿದೆ. ಧ್ವಜವನ್ನು ತೆರೆದ ಸ್ಥಳಗಳಲ್ಲಿ, ಸಾರ್ವಜನಿಕ ಸದಸ್ಯರ ಮನೆಯ ಮೇಲೆ ಪ್ರದರ್ಶಿಸಬಹುದು. ಧ್ವಜವನ್ನು ಹಗಲು ರಾತ್ರಿಯಲ್ಲಿ ಹಾರಿಸಬಹುದು. ಈ ಹಿಂದೆ, ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಮಾತ್ರ ತ್ರಿವರ್ಣ ಧ್ವಜವನ್ನು ಹಾರಿಸಲು ಅನುಮತಿಸಲಾಗಿತ್ತು.
ಜೊತೆಗೆ, ರಾಷ್ಟ್ರಧ್ವಜವನ್ನು ಕೈಯಿಂದ ನೂಲುವ ಮತ್ತು ಕೈಯಿಂದ ನೇಯ್ದ ಅಥವಾ ಯಂತ್ರದಿಂದ ತಯಾರಿಸಿದ ಹತ್ತಿ/ಪಾಲಿಸ್ಟರ್/ಉಣ್ಣೆ/ರೇಷ್ಮೆ/ಖಾದಿ ಯನ್ನು ಬಳಸಿ ತಯಾರಿಸಲಾಗುವುದು ಎಂದು ಬದಲಾಯಿಸಲಾಗಿದೆ. ಈ ಮೊದಲು ಯಂತ್ರದಿಂದ ತಯಾರಿಸಿದ ಮತ್ತು ಪಾಲಿಸ್ಟರ್ ಬಳಕೆಯನ್ನು ನಿಷೇಧಿಸಲಾಗಿತ್ತು.

ಸ್ವತಂತ್ರ ಭಾರತದ 75 ವರ್ಷಗಳ ನೆನಪಿಗಾಗಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಆಗಸ್ಟ್ 13 ರಿಂದ 15 ರವರೆಗೆ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ನಾಗರಿಕರನ್ನು ಉತ್ತೇಜಿಸಲು 'ಹರ್ ಘರ್ ತಿರಂಗ' ಅಭಿಯಾನವನ್ನು ಪ್ರಾರಂಭಿಸಲಾಗಿದೆ.












Click it and Unblock the Notifications