ಕಲ್ಲಿದ್ದಲು ಹಗರಣ: ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ಜೈಲು ಶಿಕ್ಷೆ
ನವದೆಹಲಿ, ಅಕ್ಟೋಬರ್ 26: ಜಾರ್ಖಂಡ್ ಕಲ್ಲಿದ್ದಲು ಘಟಕದ ಹಂಚಿಕೆಯಲ್ಲಿ 1999ರಲ್ಲಿ ನಡೆದ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಕೇಂದ್ರದ ಮಾಜಿ ಸಚಿವ ದಿಲೀಪ್ ರೇ ಅವರಿಗೆ ಸೋಮವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ದಿಲೀಪ್ ರೇ ಅವರಲ್ಲದೆ ಇದೇ ಪ್ರಕರಣದಲ್ಲಿ ಪಾತ್ರ ವಹಿಸಿರುವುದು ಸಾಬೀತಾದ ಇನ್ನೂ ಇಬ್ಬರು ವ್ಯಕ್ತಿಗಳನ್ನು ಕೂಡ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ರಾಜ್ಯ ಕಲ್ಲಿದ್ದಲು ಖಾತೆ ಸಚಿವರಾಗಿದ್ದ ದಿಲೀಪ್ ರೇ ವಿರುದ್ಧದ ಕಲ್ಲಿದ್ದಲು ಘಟಕ ಹಂಚಿಕೆ ವ್ಯವಹಾರದ ವಿಚಾರಣೆ ನಡೆಸಿದ್ದ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಅಪರಾಧ ಸಂಚು ಹಾಗೂ ಇತರೆ ಅಪರಾಧಗಳಡಿ ಅವರು ತಪ್ಪಿತಸ್ಥ ಎಂದು ಶಿಕ್ಷೆ ವಿಧಿಸಿತ್ತು. ಅಕ್ಟೋಬರ್ 6ರಂದು ನೀಡಿದ್ದ ತೀರ್ಪಿನಂತೆ ರೇ ಅವರನ್ನು ಐಪಿಸಿ ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ನಂಬಿಕೆ ದ್ರೋಹದ ಅಪರಾಧ ಸೇರಿದಂತೆ ಗರಿಷ್ಠ ಜೀವಾವಧಿ ಶಿಕ್ಷೆಗೆ ಒಳಪಡಿಸಬಹುದಾದ ವಿವಿಧ ಸೆಕ್ಷನ್ಗಳಲ್ಲಿ ಅವರನ್ನು ಶಿಕ್ಷೆ ಒಳಪಡಿಸಲಾಗಿತ್ತು.

ಅಕ್ಟೋಬರ್ 14ರಂದು ಸಿಬಿಐ ಮತ್ತು ಅಪರಾಧಿಗಳಿಂದ ಅಂತಿಮ ವಾದ ವಿವಾದಗಳಿಗಾಗಿ ಮತ್ತೊಂದು ವಿಚಾರಣೆ ನಡೆಸಲಾಗಿತ್ತು. ಈ ಸಂಬಂಧದ ಅಂತಿಮ ತೀರ್ಪನ್ನು ಅಕ್ಟೋಬರ್ 26ರಂದು ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಪ್ರಕಟಿಸಿದರು.
ರೇ ಹಾಗೂ ಇತರೆ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಸುಪ್ರೀಂಕೋರ್ಟ್ ಒತ್ತಾಯಿಸಿತ್ತು. ಪ್ರತಿಷ್ಠಿತರು ಮಾಡುತ್ತಿರುವ ಅಪರಾಧಗಳು ಹೆಚ್ಚಾಗುತ್ತಿದ್ದು, ಸಮಾಜಕ್ಕೆ ಸಂದೇಶ ರವಾನಿಸುವ ಸಲುವಾಗಿ ಗರಿಷ್ಠ ಶಿಕ್ಷೆ ವಿಧಿಸುವುದು ಅಗತ್ಯವಾಗಿದೆ ಎಂದು ಸಿಬಿಐ ವಾದಿಸಿತ್ತು.
1999ರಲ್ಲಿ ನಡೆದ ಜಾರ್ಖಂಡ್ ಕಲ್ಲಿದ್ದಲು ಹಂಚಿಕೆ ಅಕ್ರಮ ಹಗರಣದಲ್ಲಿ ಕಲ್ಲಿದ್ದಲು ಸಚಿವಾಲಯದಲ್ಲಿದ್ದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ ಗೌತಮ್ ಹಾಗೂ ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರವಾಲಾ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಕೋರಲಾಗಿತ್ತು. ತಮ್ಮ ವಯಸ್ಸು ಹಾಗೂ ಈ ಹಿಂದೆ ಯಾವುದೇ ಶಿಕ್ಷೆಗೆ ಒಳಗಾಗದೆ ಇರುವುದನ್ನು ಪರಿಗಣಿಸಿ ಶಿಕ್ಷೆಯಲ್ಲಿ ವಿನಾಯಿತಿ ನೀಡುವಂತೆ ಅಪರಾಧಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.












Click it and Unblock the Notifications