"ಶ್ರೀಮಂತರ ಬಜೆಟ್" ಆರೋಪ ಅಲ್ಲಗಳೆದ ನಿರ್ಮಲಾ ಸೀತಾರಾಮನ್
ನವದೆಹಲಿ, ಫೆಬ್ರುವರಿ 12: "ಅನುಭವ ಹಾಗೂ ಆಡಳಿತಾತ್ಮಕ ಸಾಮರ್ಥ್ಯದ ಆಧಾರದಲ್ಲಿ ಈ ಬಜೆಟ್ ರೂಪಿಸಲಾಗಿದೆ. ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಿಯಾಗಿ ಸುದೀರ್ಘ ಅವಧಿಯ ಮೋದಿಯವರ ಆಡಳಿತ ಅನುಭವದಲ್ಲಿ ಅಭಿವೃದ್ಧಿ, ಬೆಳವಣಿಗೆ ಮತ್ತು ಸುಧಾರಣೆಗಳ ಬಗೆಗಿನ ಬದ್ಧತೆಗೆ ರೂಪಕವಾಗಿ ಈ ಬಜೆಟ್ ರೂಪಿಸಲಾಗಿದೆ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಕುರಿತು ಸಮರ್ಥನೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಅಧಿವೇಶನದ ಭಾಷಣದಲ್ಲಿ ಅವರು ಕೇಂದ್ರ ಬಜೆಟ್ ಕುರಿತು ಅವರು ವಿವರಣೆ ನೀಡಿದರು. ಇದೇ ಫೆಬ್ರುವರಿ 1ರಂದು ಕೇಂದ್ರ ಬಜೆಟ್ ಮಂಡನೆಯಾಗಿತ್ತು.
800 ಮಿಲಿಯನ್ ಜನರಿಗೆ ಉಚಿತ ಧಾನ್ಯ, 80 ಮಿಲಿಯನ್ ಜನರಿಗೆ ಉಚಿತ ಅನಿಲ, ರೈತರು, ಮಹಿಳೆಯರು, ದಿವ್ಯಾಂಗರು, ಬಡವರು ಸೇರಿದಂತೆ ಸುಮಾರು 400 ಮಿಲಿಯನ್ ಜನರಿಗೆ ನೇರ ನಗದು ನೀಡುತ್ತಿರುವುದು ಉಲ್ಲೇಖಾರ್ಹ ಸಂಗತಿಗಳಲ್ಲವೇ ಎಂದು ಪ್ರಶ್ನಿಸಿದ್ದಾರೆ.

"ಬಡವರಿಗೆ ಏನೆಲ್ಲಾ ಸೌಲಭ್ಯಗಳನ್ನು ನೀಡಿದರೂ, ಬಡವರ ಹಾಗೂ ಅಗತ್ಯವಿರುವವರ ನೆರವಿಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರೂ, ಪ್ರತಿ ಬಾರಿ, ಕೇಂದ್ರ ಸರ್ಕಾರ ಕೇವಲ ಶ್ರೀಮಂತರಿಗೆ ಮಾತ್ರ ನೆರವಾಗುತ್ತಿದೆ ಎಂಬ ಸುಳ್ಳು ಆರೋಪ ಮಾಡುವುದು ಕೆಲವು ವಿರೋಧ ಪಕ್ಷಗಳಿಗೆ ಒಂದು ಅಭ್ಯಾಸವಾಗಿಬಿಟ್ಟಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications