ನೋಟು ರದ್ದತಿಯಿಂದಾಗಿ ರಾಹುಲ್ ಗಾಂಧಿ ಐಷಾರಾಮಿ ಕಾರಿನಿಂದ ಇಳಿಯಲಿಲ್ಲವೇ?: ಬಿಜೆಪಿ ವ್ಯಂಗ್ಯ
ನವದೆಹಲಿ, ನವೆಂಬರ್ 9: ಅಪನಗದೀಕರಣಕ್ಕೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಶುಕ್ರವಾರ ಹರಿಹಾಯ್ದಿದೆ.
ರಾಹುಲ್ ಗಾಂಧಿ ಹಾಸ್ಯಾಸ್ಪದ ಹೇಳಿಕೆಗಳನ್ನು ನೀಡುವುದನ್ನು ಮುಂದುವರಿಸಿದ್ದಾರೆ ಎಂದು ಲೇವಡಿ ಮಾಡಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ರಾಹುಲ್ ಗಾಂಧಿ ಅವರೇ ಸ್ವತಃ ಕಪ್ಪುಹಣ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
ಅಪನಗದೀಕರಣದಿ೦ದ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬಕ್ಕೆ ಹೆಚ್ಚು ಸಂಕಷ್ಟವಾಗಿರುವುದು. ಅವರ ಎಲ್ಲ ವ್ಯವಹಾರಗಳಿಗೆ ಅದರಿಂದ ತಡೆ ಬಿದ್ದಿದೆ. ನಗರ ನಕ್ಸಲರ ಪರವಾಗಿ ಅವರ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಅಪನಗದೀಕರಣದಿಂದ ನಕ್ಸಲರ ಹಾವಳಿಗಳು ಕಡಿಮೆಯಾಗಿದೆ. ಅಲ್ಲದೆ ಭಾರತದ ಆರ್ಥಿಕತೆ ಒಂದು ಹದಕ್ಕೆ ಬಂದಿದೆ ಎಂದು ಸಂಬಿತ್ ಪಾತ್ರಾ ಸಮರ್ಥಿಸಿಕೊಂಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ತಂದೆ-ಮಗ ಜೋಡಿ ಫಾರೂಕ್ ಅಬ್ದುಲ್ಲಾ ಹಾಗೂ ಒಮರ್ ಅಬ್ದುಲ್ಲಾ ನೀಡಿರುವ ಹೇಳಿಕೆಗೆ ಸಂಬಿತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದ ವಿಚಾರದಲ್ಲಿ ಆ ಇಬ್ಬರಿಗೂ ಯಾವುದೇ ಪ್ರಶ್ನೆಗಳನ್ನು ಎತ್ತಲು ಯಾವ ಹಕ್ಕೂ ಇಲ್ಲ. ಅವರಿಗೆ ಮಾಡಲು ಕೆಲಸವಿಲ್ಲ. ಪ್ರತಿ ದಿನ ಬೆಳಿಗ್ಗೆ ಎದ್ದೊಡನೆ 'ಸ್ವಾಯತ್ತತೆ' ಸ್ವಾಯತ್ತತೆ' ಎಂದು ಬೊಂಬಡ ಬಾರಿಸಲು ಶುರುಮಾಡುತ್ತಾರೆ. ನಮ್ಮ ಪಕ್ಷದ ಪ್ರತಿಯೊಬ್ಬರೂ ಕಾಶ್ಮೀರದ ಜನತೆಯ ಜತೆಗಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಸಂಬಿತ್ ನಡೆಸಿದ ವಾಗ್ದಾಳಿಯ ವಿವರ ಹೀಗಿದೆ...
|
ಕಾರಿನಿಂದ ಇಳಿದಿದ್ದರು
'ರಾಹುಲ್ ಗಾಂಧಿ ಇಂದು ಛತ್ತೀಸ್ ಗಢದಲ್ಲಿದ್ದಾರೆ. ಅಪನಗದೀಕರಣದ ಸಂದರ್ಭದಲ್ಲಿ ಕಪ್ಪು ಹಣ ಹೊಂದಿರುವ ಯಾರಾದರೂ ಶ್ರೀಮಂತ ವ್ಯಕ್ತಿ ತನ್ನ ಐಷಾರಾಮಿ ಕಾರಿನಿಂದ ಇಳಿದು ಬಂದು ಸರದಿಯಲ್ಲಿ ನಿಂತು ರದ್ದಾದ ನೋಟುಗಳನ್ನು ಬದಲಿಸಿಕೊಂಡಿದ್ದನ್ನು ನೋಡಿದ್ದೀರಾ ಎಂದು ಅವರು ಅಲ್ಲಿ ನೆರೆದಿದ್ದ ಸಭಿಕರನ್ನು ಪ್ರಶ್ನಿಸಿದ್ದಾರೆ. ಹೌದು ನಾನು ನೋಡಿದ್ದೇನೆ ಎಂದು ಅವರಿಗೆ ತಿಳಿಸಲು ನಾನು ಬಯಸುತ್ತೇನೆ. ನೀವು ನಿಮ್ಮ ನಾಲ್ಕು ಕೋಟಿ ರೂ. ಮೌಲ್ಯದ ಕಾರಿನಿಂದ ಇಳಿದು ಸರದಿಯಲ್ಲಿ ನಿಂತಿದ್ದನ್ನು ನಾನು ನೋಡಿದ್ದೇನೆ' ಎಂದು ಸಂಬಿತ್ ವ್ಯಂಗ್ಯವಾಡಿದರು.
ಅಪನಗದೀಕರಣ ವ್ಯವಸ್ಥಿತ ಹಣಕಾಸು ಅಪರಾಧ ಹಗರಣ: ರಾಹುಲ್ ಗಾಂಧಿ
ಗಾಂಧಿ ಕುಟುಂಬ ಚೇತರಿಸಿಕೊಂಡಿಲ್ಲ
ಅಪನಗದೀಕರಣ ನಡೆಸಿ ಎರಡು ವರ್ಷವಾದರೂ, ಕಾಂಗ್ರೆಸ್ ಇನ್ನೂ ಚೇತರಿಸಿಕೊಂಡಿಲ್ಲ. ನಾಲ್ಕು ತಲೆಮಾರುಗಳಿಂದ ಕಪ್ಪುಹಣವನ್ನು ಸಂಗ್ರಹಿಸಿ ಇಟ್ಟುಕೊಂಡಿರುವ ಗಾಂಧಿ ಕುಟುಂಬದ ಎಲ್ಲ ವ್ಯವಹಾರಗಳೂ ಒಂದು ದಿನ ಇದ್ದಕ್ಕಿದ್ದಂತೆ ಅಪ್ರಯೋಜಕವಾದವು. ಅವರು ನೋವಿನಲ್ಲಿ ಇರುವುದು ಸಹಜ. ಆ ನೋವು ತುಂಬಾ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಟೀಕಿಸಿದರು.
ಅಪನಗದೀಕರಣದ 2ನೇ ವಾರ್ಷಿಕೋತ್ಸವ : ಸಿದ್ದರಾಮಯ್ಯ ಸರಣಿ ಟ್ವೀಟ್
|
ನಕ್ಸಲರ ದಾಳಿ ಕಡಿಮೆ
ಅಕ್ರಮ ವ್ಯವಹಾರ ನಡೆಸುವ ಕಂಪೆನಿಗಳನ್ನು ಮುಚ್ಚುವುದರ ವಿರುದ್ಧ ರಾಹುಲ್ ಪ್ರತಿಭಟನೆ ನಡೆಸಿದ್ದಾರೆ. ಅಪನಗದೀಕರಣದ ಬಳಿಕವೇ ಭಾರತದ ಆರ್ಥಿಕತೆ ಸ್ಥಿರತೆ ಪಡೆದುಕೊಂಡಿತು. ಈ ನಿರ್ಧಾರವನ್ನು ಸಂಭ್ರಮಿಸಲು ಅದೇ ಕಾರಣ. ಕಾಂಗ್ರೆಸ್ ಮುಖಂಡರು ನಗರ ನಕ್ಸಲರ ಎನ್ಜಿಒಗಳ ಪರವಾಗಿ ಟ್ವೀಟ್ ಮಾಡಿದ್ದರು ಮತ್ತು ಅವುಗಳನ್ನು ಕ್ರಾಂತಿಕಾರಿಗಳು ಎಂದೂ ಕರೆದಿದ್ದರು. ಅಪನಗದೀಕರಣದ ಬಳಿಕ ನಕ್ಸಲರ ದಾಳಿಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದು ಹೇಳಿದರು.
ಅಪನಗದೀಕರಣದಂಥ ಯಡವಟ್ಟು ಮತ್ತೆ ಮಾಡಬೇಡಿ ಎಂದರು ಮನ್ ಮೋಹನ್ ಸಿಂಗ್
ಹಳೆಯ ಡೈಲಾಗುಗಳ ಪುನರಾವರ್ತನೆ
2014ರಿಂದಲೂ ರಾಹುಲ್ ಗಾಂಧಿ ತಮ್ಮ ಕಥೆಯನ್ನು ಬದಲಿಸಿಲ್ಲ. ಅದೇ ಡೈಲಾಗುಗಳನ್ನು ಎಲ್ಲೆಡೆ ಮತ್ತೆ ಮತ್ತೆ ಹೇಳುತ್ತಾರೆ. ನಾಳೆ ಸುದ್ದಿಗೋಷ್ಠಿಯಲ್ಲಿ ಅವರು ಏನು ಮಾತನಾಡುತ್ತಾರೆ ಎಂದು ನಾನು ಈಗಲೇ ಹೇಳಬಲ್ಲೆ. ತಮ್ಮ ಹಳೆಯ ಒಳ್ಳೆಯ ಮೂರು ಸಾಲುಗಳನ್ನೇ ಮತ್ತೆ ಹೇಳುವುದು ಹೇಗೆ ಎನ್ನುವುದು ಮಾತ್ರ ಅವರಿಗೆ ತಿಳಿದಿದೆ ಎಂದು ಪಾತ್ರ ಲೇವಡಿ ಮಾಡಿದರು.