ಸೈನಿಕರ ಬಲಿದಾನವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಬಿಜೆಪಿ: ರಾಹುಲ್ ಗಾಂಧಿ
ನವದೆಹಲಿ, ಪೆಭ್ರವರಿ 27: ಸೈನಿಕರ ಬಲಿದಾನವನ್ನು ಬಿಜೆಪಿ ನಾಯಕರು ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದೆ.
21 ವಿರೋಧ ಪಕ್ಷಗಳ ಮುಖಂಡರು ಇಂದು ದೆಹಲಿಯಲ್ಲಿ ಸಭೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯು ಪರಿಸ್ಥಿತಿಯನ್ನು ರಾಜಕೀಯ ಲಾಭಕ್ಕೆ ಬಳಸುತ್ತಿರುವುದನ್ನು ವಿರೋಧ ಪಕ್ಷಗಳು ವಿರೋಧಿಸುತ್ತವೆ ಎಂದು ಹೇಳಿದರು.
ಸಭೆಯಲ್ಲಿ ನಡೆದ ಚರ್ಚೆಗಳ ಮಾಹಿತಿ ನೀಡಿದ ಅವರು, ಮೋದಿ ಅವರು ಪ್ರಧಾನಿಯಾಗಿ ಸರ್ವಪಕ್ಷಗಳ ಸಭೆ ಕರೆಯಬೇಕಿತ್ತು, ಈ ರೀತಿಯ ತುರ್ತು ಸನ್ನಿವೇಶದಲ್ಲಿ ಹಿಂದಿನಿಂದಲೂ ಇದನ್ನು ಆಡಳಿತಾತ್ಮಕವಾಗಿಯೇ ಮಾಡಿಕೊಂಡು ಬರಲಾಗಿದೆ ಆದರೆ ಅದನ್ನು ಅವರು ಮಾಡಲಿಲ್ಲ ಎಂದು ರಾಹುಲ್ ಹೇಳಿದರು.

ಚಂದ್ರಬಾಬು ನಾಯ್ಡು, ಶರದ್ ಪವಾರ್, ಮಮತಾ ಬ್ಯಾನರ್ಜಿ ಸೇರಿ 21 ಪಕ್ಷಗಳು ಭಾಗವಹಿಸಿದ್ದ ಸಭೆಯಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಾಪತ್ತೆ ಆಗಿರುವ ವಾಯು ಸೇನೆಯ ವಿಂಗ್ ಕಮಾಂಡರ್ ಅವರು ಶೀಘ್ರವಾಗಿ ಮರಳಿ ಬರಲಿ ಎಂದು ಸಭೆಯಲ್ಲಿ ಪ್ರಾರ್ಥಿಸಲಾಯಿತು. ಹಾಗೂ ಪಾಕ್ ಮೇಲೆ ದಾಳಿ ನಡೆಸಿದ ವಾಯುಪಡೆಯ ಸೈನಿಕರ ಶೌರ್ಯಕ್ಕೆ ಅಭಿನಂದನೆ ಸಲ್ಲಿಸಲಾಯಿತು ಎಂದು ರಾಹುಲ್ ಹೇಳಿದರು.
ಭಯೋತ್ಪಾದನೆಯ ವಿರುದ್ಧ ಕೇಂದ್ರ ತೆಗೆದುಕೊಳ್ಳುವ ನಿರ್ಣಯಕ್ಕೆ ವಿರೋಧಪಕ್ಷಗಳು ಬೆಂಬಲ ವ್ಯಕ್ತಪಡಿಸುತ್ತವೆ ಎಂದು ರಾಹುಲ್ ಮೋದಿ ಅವರು ದೇಶವನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜತಾಂತ್ರಿಕ ನಿರ್ಣಯ ಕೈಗೊಳ್ಳಬೇಕು ಎಂದರು.












Click it and Unblock the Notifications