ಬಿಜೆಪಿಯಿಂದ ಎಎಪಿ ಶಾಸಕರಿಗೆ 10 ಕೋಟಿ ರೂ. ಆಮಿಷ: ಕೇಜ್ರಿವಾಲ್ ಶಾಕಿಂಗ್ ಹೇಳಿಕೆ
ನವದೆಹಲಿ, ಮೇ 02: ಬಿಜೆಪಿಯು ಆಮ್ ಆದ್ಮಿ ಪಕ್ಷದ ಏಳು ಶಾಸಕರಿಗೆ ತಲಾ 10 ಕೋಟಿ ರೂ.ಗಳ ಆಮಿಷವೊಡ್ಡಿ ಅವರನ್ನು ಖರೀದಿಸಲು ಯತ್ನಿಸಿದೆ ಎಂದ ಶಾಕಿಂಗ್ ಹೇಳಿಕೆಯನ್ನು ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್ ನೀಡಿದ್ದಾರೆ.
ಕೇಜ್ರಿವಾಲ್ ಪತ್ನಿ ಸುನೀತಾ ವಿರುದ್ಧ ದೂರು ನೀಡಿದ ಬಿಜೆಪಿ
"ಕಳೆದ ಮೂರು ದಿನಗಳಲ್ಲಿ ಎಎಪಿಯ ಏಳು ಶಾಸಕರು ಬಂದು ನನ್ನ ಬಳಿ ಹೇಳಿದ್ದಾರೆ. ಬಿಜೆಪಿಯು ಅವರಿಗೆ ತಲಾ 10 ಕೋಟಿ ರೂಪಾಯಿ ನೀಡುವುದಾಗಿ ಆಮಿಷವೊಡ್ಡಿ, ಬಿಜೆಪಿಗೆ ಸೇರುವಂತೆ ಒತ್ತಾಯಿಸಿದೆ. ಅವರು ನಮ್ಮ ಶಾಸಕರಲ್ಲಿ ಒಡಕು ಮೂಡಿಸುತ್ತಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಪ್ಪುವುದಿಲ್ಲ. ಕಳೆದ ಒಂದೆರಡು ದಿನಗಳ ಹಿಂದಷ್ಟೇ 'ನಾವು ನಲವತ್ತು ಶಾಸಕರನ್ನು ಖರೀದಿಸಿ ಮಮತಾ ಬ್ಯಾನರ್ಜಿ ಸರ್ಕಾರ ಬೀಳುವಂತೆ ಮಾಡುತ್ತೇವೆ' ಎಂದು ಪ್ರಧಾನಿ ಮೋದಿ ಹೇಳಿದ್ದರು. ಇಂಥ ಮಾತುಗಳು ಅವರ ಹುದ್ದೆಗಲ್ಲ" ಎಂದು ಕೇಜ್ರಿವಾಲ್ ಹೇಳಿದರು.
ಎಎಪಿ ಪ್ರಣಾಳಿಕೆ ಬಿಡುಗಡೆ: ದೆಹಲಿಗೆ ಸಂಪೂರ್ಣ ರಾಜ್ಯ ಮಾನ್ಯತೆಗೆ ಹೋರಾಟ
ಪಶ್ಚಿಮ ಬಂಗಾಳದ ಸೆರಾಂಪೋರ್ ನಲ್ಲಿ ಚುನಾವಣಾ ಸಮಾವೇಶವೊಂದರಲ್ಲಿ ಮಾತನಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದ, "ನಲವತ್ತಕ್ಕೂ ಹೆಚ್ಚು ಟಿಎಂಸಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಸರ್ಕಾರವನ್ನು ಉಳಿಸಲು ಯಾರಿಗೂ ಸಾಧ್ಯವಿಲ್ಲ" ಎಂದಿದ್ದರು.
"ಜನರು ಎಎಪಿಯ ಕೆಲಸ ನೋಡಿ ಮತ ಹಾಕುತ್ತಾರೆ. ನಾವು ದೆಹಲಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಮೋದಿ ತಮ್ಮ ಹೆಸರಿನ ಮೂಲಕ ಮತ ಕೇಳಬಹುದು. ನಾವು ಅಭಿವೃದ್ಧಿಯ ಹೆಸರಿನಲ್ಲಿ ಮತ ಕೇಳುತ್ತೇವೆ" ಎಂದು ಕೇಜ್ರಿವಾಲ್ ಹೇಳಿದರು.