ದೆಹಲಿ ಚುನಾವಣೆಯಲ್ಲಿ ಸೋತ ಪ್ರಮುಖ ನಾಯಕರು
ನವದೆಹಲಿ, ಫೆ. 10: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷ ಹಲವು ಪ್ರಮುಖ ನಾಯಕರಿಗೆ ಮನೆಯ ದಾರಿ ತೋರಿಸಿದೆ. ಹಲವು ವರ್ಷಗಳ ಕಾಲ ಸಚಿವರಾಗಿ ಮೆರೆದಿದ್ದವರೂ ಸೋತು ಕಂಗಾಲಾಗಿದ್ದಾರೆ.
ರಾಷ್ಟ್ರದ ರಾಜಧಾನಿಯಲ್ಲಿ 15 ವರ್ಷಗಳ ಕಾಲ ನಿರಂತರವಾಗಿ ಆಳ್ವಿಕೆ ನಡೆಸಿದ ಕಾಂಗ್ರೆಸ್ ಸಂಪಾದನೆ ಶೂನ್ಯಕ್ಕಿಳಿದಿದೆ. ಕಳೆದ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಕೇವಲ ಮೂರು ಸ್ಥಾನ ಗಳಿಸಿ ಪ್ರತಿಪಕ್ಷವಾಗುವ ಅರ್ಹತೆಯನ್ನೂ ಕಳೆದುಕೊಂಡಿದೆ.
ಆಮ್ ಆದ್ಮಿ ಪಕ್ಷ ಮುಲಾಜಿಲ್ಲದೆ ಗುಡಿಸಿ ಹಾಕಿದ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಪ್ರಭಾವಿ ನಾಯಕರ ಪಟ್ಟಿ ಇಲ್ಲಿದೆ.
1) ಕಿರಣ್ ಬೇಡಿ : ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಖ್ಯಾತ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರಿಗೆ ಈ ಚುನಾವಣೆಯಲ್ಲಿ ಬಿಜೆಪಿ, ನರೇಂದ್ರ ಮೋದಿ ಹಾಗೂ ವೈಯಕ್ತಿಕ ವರ್ಚಸ್ಸು ಯಾವುವೂ ಕೈಹಿಡಿಯಲಿಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ಭದ್ರಕೋಟೆ ಎನ್ನಿಸಿಕೊಂಡಿರುವ ಕೃಷ್ಣ ನಗರದಲ್ಲಿಯೇ ಸೋಲನುಭವಿಸಿದ್ದಾರೆ. [ಎಕ್ಸಿಟ್ ಪೋಲುಗಳೂ ಧೂಳೀಪಟ]
2) ಜಗದೀಶ ಮುಖಿ : ಇವರು ಬಿಜೆಪಿಯ ಮತ್ತೋರ್ವ ಪ್ರಮುಖ ಅಭ್ಯರ್ಥಿಯಾಗಿದ್ದರು. ತಮ್ಮ ಜನಕಪುರಿ ಕ್ಷೇತ್ರದಲ್ಲಿ ಅಳಿಯನ ವಿರುದ್ಧವೇ ಸ್ಪರ್ಧೆಗಿಳಿದಿದ್ದರು. ಇವರ ವಿರುದ್ಧ ಆಮ್ ಆದ್ಮಿ ಪಕ್ಷದ ರಾಜೇಶ್ ರಿಶಿ ಗೆಲುವು ಸಾಧಿಸಿದ್ದಾರೆ.
3) ಬಿಕ್ರಂ ಬಿದುರಿ : ಇವರು ತುಘಲಕಾಬಾದ್ ಕ್ಷೇತ್ರದಲ್ಲಿ ಆಮ್ ಆದ್ಮಿ ಅಭ್ಯರ್ಥಿ ವಿರುದ್ಧ ಸೋಲನುಭವಿಸಿದ್ದಾರೆ. [ಆಮ್ ಆದ್ಮಿ ಗೆಲುವಿಗೆ ಕಾರಣ]
4) ರಾಂಭೀರ್ ಸಿಂಗ್ ಬಿದುರಿ : ಬದರ್ಪುರ ಕ್ಷೇತ್ರದಲ್ಲಿ ಸೋತಿರುವ ಇವರು ಜೀವನದಲ್ಲಿ ಇದುವರೆಗೂ ಗೆಲ್ಲುತ್ತಲೇ ಬಂದಿದ್ದವರು.
5) ಕಾಂಗ್ರೆಸ್ನಿಂದ ಸೀಲಾಂಪುರದಲ್ಲಿ ಚೌಧರಿ ಮತೀನ್ ಅಹ್ಮದ್, ಚಾಂದಿ ಚೌಕದಲ್ಲಿ ಪ್ರಹ್ಲಾದ ಸಿಂಗ್ ಸಾವ್ಣೆ, ಬಲ್ಲಿಮಾರನ್ ಕ್ಷೇತ್ರದಲ್ಲಿ ಹರೂನ್ ಯೂಸುಫ್, ಓಕ್ಲಾದಲ್ಲಿ ಶೋಯೆಬ್ ಇಕ್ಬಾಲ್ ಇವರೆಲ್ಲ ಆಮ್ ಆದ್ಮಿ ಅಭ್ಯರ್ಥಿ ಎದುರು ಸೋಲನುಭವಿಸಿದ್ದಾರೆ.