ಪ.ಬಂಗಾಳ, ಮಹಾರಾಷ್ಟ್ರ ನಂತರ ಬಿಹಾರ, ಕೇರಳದ ಸ್ತಬ್ಧಚಿತ್ರ ತಿರಸ್ಕರಿಸಿದ ಕೇಂದ್ರ
ನವದೆಹಲಿ, ಜನವರಿ 03: ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ಸ್ತಬ್ಧಚಿತ್ರಗಳನ್ನು ತಿರಸ್ಕರಿಸಿದ ನಂತರ ಈಗ ಬಿಹಾರ ಮತ್ತು ಕೇರಳ ರಾಜ್ಯದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಗಣರಾಜ್ಯೋತ್ಸವದ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ಸ್ತಬ್ದಚಿತ್ರಗಳು ಭಾಗವಹಿಸುವಿಕೆಯನ್ನು ತಿರಸ್ಕರಿಸಿದ ಬೆನ್ನಲ್ಲೆ ಈಗ ಬಿಹಾರ ಮತ್ತು ಕೇರಳದ ಸ್ತಬ್ದಚಿತ್ರಕ್ಕೂ ತಿರಸ್ಕಾರ ಎದುರಾಗಿದೆ.
ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಗಳ ಸ್ತಬ್ದಚಿತ್ರಗಳನ್ನು ತಿರಸ್ಕಾರ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಈಗಾಗಲೇ ಆಕ್ರೋಶ ವ್ಯಕ್ತವಾಗಿದೆ. ಇಂಥಹಾ ಸಮಯದಲ್ಲಿ ಬಿಹಾರ ಮತ್ತು ಕೇರಳದ ಸ್ತಬ್ಧಚಿತ್ರವನ್ನೂ ತಿರಸ್ಕಾರ ಮಾಡಲಾಗಿದೆ.

ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರಗಳಲ್ಲಿ ಬಿಜೆಪಿಯೇತರ ಸರ್ಕಾರಗಳು ಅಧಿಕಾರದಲ್ಲಿವೆ. ಕೇರಳದಲ್ಲಿ ಸಹ ಬಿಜೆಯೇತರ ಸರ್ಕಾರ ಅಧಿಕಾರದಲ್ಲಿದ್ದರೆ ಬಿಹಾರದಲ್ಲಿ ಬಿಜೆಪಿಯು ಸರ್ಕಾರದ ಪಾಲುದಾರವಾಗಿದ್ದರೂ ಸಹ ಬಿಜೆಪಿ ಮತ್ತು ನಿತೀಶ್ ಕುಮಾರ್ ಮಧ್ಯೆ ಮುನಿಸು ಹೆಚ್ಚಾಗಿದೆ.
ಬಿಹಾರ ಮತ್ತು ಕೇರಳದ ಸ್ತಬ್ಧಚಿತ್ರವು ಅಗತ್ಯ ನಿಯಮಗಳನ್ನು ಪಾಲಿಸಿಲ್ಲ ಮತ್ತು ಪ್ರದರ್ಶನಕ್ಕೆ ಯೋಗ್ಯವಾದ ಗುಣಮಟ್ಟ ಹೊಂದಿಲ್ಲ ಎಂದು ಕೇಂದ್ರ ಭದ್ರತಾ ಇಲಾಖೆ ಎರಡೂ ರಾಜ್ಯಗಳ ಸರ್ಕಾರಕ್ಕೆ ಮಾಹಿತಿ ನೀಡಿದೆ.
ಬಿಹಾರ ಸಿಎಂ ಉದ್ಘಾಟಿಸಿದ್ದ 'ಜಲ್ ಜೀವನ್ ಹರಿಯಾಲಿ ಅಭಿಯಾನ್' ಅನ್ನು ಪ್ರತಿನಿಧಿಸುವ ಸ್ತಬ್ಧಚಿತ್ರವನ್ನು ರಚಿಸಿ ಕೇಂದ್ರದ ಒಪ್ಪಿಗೆಗೆ ಕಳುಹಿಸಿದ್ದರು. ಆದರೆ ಇದನ್ನು ಕೇಂದ್ರವು ತಿರಸ್ಕರಿಸಿದೆ.
ಕೇಂದ್ರದ ಈ ನಡೆಯನ್ನು ಖಂಡಿಸಿರುವ ಬಿಹಾರ ವಿಪಕ್ಷ ಆರ್ಜೆಡಿ 'ಕೇಂದ್ರದ ಈ ನಡೆ ಬಿಹಾರ ಜನರಿಗೆ ಮಾಡಿದ ಅವಮಾನ' ಎಂದಿದ್ದಾರೆ. 'ಈ ಮೊದಲು ಬಿಹಾರಕ್ಕೆ ವಿಶೇಷ ಸ್ಥಾನ-ಮಾನ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದರು ಈಗ ನಮ್ಮ ಸ್ತಬ್ಧಚಿತ್ರವನ್ನು ತಿರಸ್ಕರಿಸಿದ್ದಾರೆ' ಎಂದು ಆರ್ಜೆಡಿ ಯ ಮೃತುಂಜನ್ ತಿವಾರಿ ಹೇಳಿದ್ದಾರೆ.
ಕೇವಲ 16 ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಮಾತ್ರವೇ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ.












Click it and Unblock the Notifications