ಬಂಡೀಪುರ ಅಭಯಾರಣ್ಯದಲ್ಲಿ ಸುರಂಗ ಮಾರ್ಗ ನಿರ್ಮಾಣ: ಕೇಂದ್ರ ಚಿಂತನೆ
ನವದೆಹಲಿ, ಜನವರಿ 11: ಕರ್ನಾಟಕದ ಮೈಸೂರಿನಿಂದ ಕೇರಳಕ್ಕೆ ರೈಲು ಸಂಪರ್ಕ ರೂಪಿಸುವ ಸಂಬಂಧ ಸುರಂಗ ಮಾರ್ಗ ಸೇರಿದಂತೆ ಎಲ್ಲ ಬಗೆಯ ಪರ್ಯಾಯ ಮಾರ್ಗ ರಚನೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಸುಪ್ರೀಂಕೋರ್ಟ್ ಆದೇಶಿಸಿದೆ.
ಬುಧವಾರ ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪೀಠವು ಕೇಂದ್ರ ಪರಿಸರ ಮಂತ್ರಾಲಯ ಸೇರಿದಂತೆ ಪ್ರಮುಖ ಇಲಾಖೆಗಳತಂಡ ರಚಿಸುವಂತೆ ಸೂಚನೆ ನೀಡಿದ್ದು, ಸುರಂಗ ಮಾರ್ಗವೂ ಸೇರಿದಂತೆ ಅರಣ್ಯವನ್ನು ಉಳಿಸಸಲು ಉಳಿಸಲು ಅನುಸರಿಸಬಹುದಾದ ಪರ್ಯಾಯ ಯೋಜನೆಗಳ ಕುರಿತಂತೆ ಸಮಗ್ರ ವರದಿಯನ್ನು ನೀಡುವಂತೆ ಹೇಳಿದೆ.
ರೈಲು ಮಾರ್ಗದಿಂದಾಗಿ ಅರಣ್ಯ ಪ್ರದೇಶಗಳ ಪರಿಸರ ನಾಶ ಕಡಿಮೆಗೊಳಿಸಿ, ದೂರವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿ ನೂತನ ಯೋಜನೆಯನ್ನು ರೂಪಿಸಲಾಗಿತ್ತು. ಬಹುವರ್ಷಗಳಿಂದ ಚರ್ಚಿಸುತ್ತಿರುವ ನಿಲಂಬೂರು-ನಂಜನಗೂಡಿ ರೈಲು ಮಾರ್ಗ, ತಲಶ್ಯೇರಿ-ಮೈಸೂರು ರೈಲು ಮಾರ್ಗವನ್ನು ಜೋಡಿಸುವ ಮಲಬಾರ್-ಮೈಸೂರು ರೈಲ್ವೆಯನ್ನು ಕ್ರಿಯಾ ಸಮಿತಿ ರೂಪಿಸಿತ್ತು.

ಬಂಡೀಪುರ ಅಭಯಾರಣ್ಯ ಸುರಂಗ ಮಾರ್ಗದ ಸಾಧಕ ಬಾಧಕಗಳು
ಬಂಡೀಪುರ ಅಭಯಾರಣ್ಯ ಹಾದು ಹೋಗುವ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಅದಕ್ಕೆ ಪರ್ಯಾಯವಾಗಿ ಸುರಂಗ ಮಾರ್ಗ ನಿರ್ಮಾಣ ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಚರ್ಚೆ ಆರಂಭವಾಗಿದೆ. ಈ ಸುರಂಗ ಮಾರ್ಗದ ಸಾಧಕ ಬಾಧಕಗಳೇನು? ಪರ್ಯಾಯ ಮಾರ್ಗ ನಿರ್ಮಾಣಕ್ಕೆ ರಾಜ್ಯಗಳ ಅಭಿಪ್ರಾಯವೇನು ಎಂಬ ಬಗ್ಗೆ ಅಧ್ಯಯನ ನಡೆಸಿ ತಜ್ಞರ ವರದಿ ತರಿಸಿಕೊಳ್ಳಲು ಕೇಂದ್ರ ಮುಂದಾಗಿದೆ.

ಸುರಂಗ ನಿರ್ಮಾಣದ ಕುರಿತು ಸಲಹೆ
ಈ ಬಗ್ಗೆ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಬುಧವಾರ ನೀಡಿರುವ ಸಲಹೆಯನ್ನು ಒಪ್ಪಿಕೊಂಡ ಸುಪ್ರೀಂಕೋರ್ಟ್ ವಿಭಾಗೀಯ ಪೀಠ , ನಾಲ್ಕು ವಾರದೊಳಗೆ ಸಮಿತಿ ರಚನೆ ಮಾಡಿ ಜುಲೈನಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಸಮಿತಿಯಲ್ಲಿ ಕೇಂದ್ರ ಪರಿಸರ , ಅರಣ್ಯ ಇಲಾಖೆ ಕರ್ನಾಟಕ ಮತ್ತು ಕೇರಳ ಸರ್ಕಾರದ ಉನ್ನತ ಅಧಿಕಾರಿಗಳು ಇರಲಿದ್ದಾರೆ.

ಸುರಂಗ ಮಾರ್ಗದಿಂದ ಪ್ರಾಣಿಗಳಿಗೆ ತೊಂದರೆ ಇಲ್ಲ
ಸುರಂಗ ಮಾರ್ಗ ನಿರ್ಮಾಣದಲ್ಲಿ ರಾತ್ರಿ ವಾಹನ ಸಂಚಾರದಿಂದ ವನ್ಯಜೀವಿಗಳಿಗೆ ಯಾವುದೇ ಹಾನಿಯಾಗುವುದಿಲ್ಲ. ಪ್ರಾಣಿ ಸಂಚಾರ ಕಡಿಮೆ ಇರುವ ಪ್ರದೇಶಗಳಲ್ಲಿ ಸುರಂಗ ಮಾರ್ಗ ಕೊರೆಯಬೇಕು. ಹೀಗಾಗಿ ಅಭಯಾರಣ್ಯದ ಕೆಲಭಾಗಗಳನ್ನಷ್ಟೇ ಬಳಸಿಕೊಳ್ಳಳು ಕೇಂದ್ರ ಆಲೋಚಿಸಿದೆ.
ವಾಹನ ಸಂಚಾರಕ್ಕೆ ನಿರ್ಭಂಧ: ಅಭಯಾರಣ್ಯಗಳು ವನ್ಯಜೀವಿಗಳಿಗೆ ಸೇರಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಮಾನವ ಅಥವಾ ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದು 2013 ರಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರು ಕೇರಳ ಸರ್ಕಾರಕ್ಕೆ ತಿಳಿಸಿದ್ದರು.

ಕೇರಳ ಸರ್ಕಾರದಿಂದ ಸುಪ್ರೀಂಕೋರ್ಟ್ ಗೆ ಮೇಲ್ಮನವಿ
2009 ರಲ್ಲಿ ಬಂಡೀಪುರ ಅಭಯಾರಣ್ಯದಲ್ಲಿ ವಾಹನ ಸಂಚಾರ ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಕೇರಳ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಇದರಿಂದ ಕೇರಳದ ಜನರಿಗೆ ವ್ಯಾಪಾರ ವಹಿವಾಟಿಗೆ ಅಪಾರ ನಷ್ಟ ಉಂಟಾಗಲಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಆದರೆ ಕೇರಳ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿ ಸಂಚಾರ ನಿಷೇಧ ಮುಂದುವರೆಸಿತ್ತು. ಇದೀಗ ಸುರಂಗ ಮಾರ್ಗದ ಪ್ರಸ್ತಾಪವನ್ನು ಕೇಂದ್ರ ಮುಂದಿಟ್ಟಿದ್ದು, ಸಮಿತಿ ಮುಂದೆ ಕೇರಳ ಮತ್ತು ಕರ್ನಾಟಕ ಸರ್ಕಾರಗಳ ಅಭಿಪ್ರಾಯಗಳು ನಿರ್ಣಾಯಕ ಎನಿಸಿಕೊಳ್ಳಲಿವೆ. ಬಾಹ್ಯ ಪರಿಸರ, ಜೀವಿಗಳಿಗೆ ಹಾನಿಯಾಗದಂತೆ ಸುರಂಗ ಮಾರ್ಗ ನಿರ್ಮಿಸಬೇಕು ಎಂಬುದು ಕೇಂದ್ರದ ಚಿಂತನೆಯಾಗಿದೆ.












Click it and Unblock the Notifications