ಪಾನ್ ಮಸಾಲ ಬಳಕೆ ನಿಷೇಧ ಹೇರಿದ ದೆಹಲಿ ಸರ್ಕಾರ
ನವದೆಹಲಿ, ಜುಲೈ 17: ಕೊರೊನಾವೈರಸ್ ಸೋಂಕು ಹರಡದಂತೆ ಪಾನ್ ಮಸಾಲ, ಗುಟ್ಕಾ ಸೇವನೆಗೆ ತಾತ್ಕಾಲಿಕ ನಿಷೇಧ ಹೇರಿದ್ದ ದೆಹಲಿ ಸರ್ಕಾರವು ಈ ನಿಷೇಧವನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ. ಹರ್ಯಾಣ ಸರ್ಕಾರ, ಉತ್ತರಪ್ರದೇಶ ಸರ್ಕಾರ ಕೂಡಾ ಒಂದು ವರ್ಷಗಳ ಕಾಲ ಪಾನ್ ಮಸಾಲ, ಗುಟ್ಕಾ ಸೇವನೆಗೆ ನಿಷೇಧ ಹೇರಿದೆ.
ಸರ್ಕಾರದ ಆದೇಶದಂತೆ ಉತ್ಪಾದನೆ ಹಾಗೂ ಮಾರಾಟ ಮಾತ್ರವಲ್ಲದೆ, ಶೇಖರಿಸಿಟ್ಟುಕೊಳ್ಳಲು ಕೂಡಾ ಸದ್ಯಕ್ಕೆ ಅನುಮತಿ ಇಲ್ಲ ಎಂದು ಆಹಾರ ಮತ್ತು ಔಷಧಿ ಪ್ರಾಧಿಕಾರದ ಡಿಎನ್ ಸಿಂಗ್ ಹೇಳಿದ್ದಾರೆ.
ಕೊರೊನಾ ದೆಸೆಯಿಂದ ಈ ರಾಜ್ಯದಲ್ಲಿ ಪಾನ್ ಮಸಾಲ ನಿಷೇಧ!
2006ರ ಆಹಾರ ಮತ್ತು ಸುರಕ್ಷತಾ ಗುಣಮಟ್ಟ ಕಾಯ್ದೆ ಸೆಕ್ಷನ್ 30ರ ಅನ್ವಯ ಪಾನ್ ಮಸಾಲ ಬಳಕೆ ನಿಷೇಧ ಹಾಕಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊರೊನಾ ವೈರಸ್ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದಾಗಿದೆ. ಕೈಕಾಲುಗಳನ್ನು ಸೋಪು, ನೀರಿನಿಂದ ಕೈತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಈಗಾಗಲೇ ಸೋಂಕಿನ ಲಕ್ಷಣಗಳು ಕಂಡು ಬಂದಿರುವವರಿಂದ ದೂರವಿರಬೇಕು. ಒಂದೊಮ್ಮೆ ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ.
ದೆಹಲಿಯಲ್ಲಿ ಗುರುವಾರದಂದು 1652 ಕೊರೊನಾವೈರಸ್ ದಾಖಲಾಗಿದೆ. ಗುಣಮುಖರಾಗುವವರ ಪ್ರಮಾಣ ಶೇ 82ಕ್ಕೇರಿದೆ. 41 ಮಂದಿ ಮೃತಪಟ್ಟಿದ್ದು, ಒಟ್ಟಾರೆ, 1,16,993 ಪ್ರಕರಣಗಳು ದಾಖಲಾಗಿದ್ದು, 3487 ಮಂದಿ ಮೃತಪಟ್ಟಿದ್ದಾರೆ.