ಲೋಕಸಭೆಯ ನಾರಿಶಕ್ತಿಗೆ ಹೆದರಿ ಕೊನೆಗೂ ಕ್ಷಮೆ ಕೇಳಿದ ಅಜಂ ಖಾನ್
ನವದೆಹಲಿ, ಜುಲೈ 29: ಲೋಕಸಭೆಯ ಮುಂಗಾರು ಅಧಿವೇಶನದ ಸಮಯದಲ್ಲಿ ಉತ್ತರ ಪ್ರದೇಶದ ರಾಮ್ಪುರ್ ಸಂಸದ, ಸಮಾಜವಾದಿ ಪಕ್ಷದ ಮುಖಂಡ ಅಜಂ ಆನ್ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಕೊನೆಗೂ ಸೋಮವಾರ ಅವರು ಕ್ಷಮೆ ಯಾಚಿಸಿದ್ದಾರೆ.
ಗುರುವಾರ ತ್ರಿವಳಿ ತಲಾಖ್ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಮಯದಲ್ಲಿ ಸ್ಪೀಕರ್ ಕುರ್ಚಿಯಲ್ಲಿದ್ದ ಬಿಹಾರದ ಶಿಯೋಹರ್ ಕ್ಷೇತ್ರದ ಸಂಸದೆ ರಮಾದೇವಿ ಅವರನ್ನು "ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎಂದು ನನಗೆ ಅನ್ನಿಸುತ್ತದೆ'' ಎಂದು ಆಜಂ ಖಾನ್ ಹೇಳಿದ್ದರು. ಅವರ ಈ ಮಾತನ್ನು ಇಡೀ ಸದನವೂ ವಿರೋಧಿಸಿತ್ತು. ಕೂಡಲೇ ರಮಾ ದೇವಿ ಅವರು, 'ನಾನು ನಿಮ್ಮ ಸಹೋದರಿ ಇದ್ದಂತೆ, ನಿಮ್ಮ ಈ ಮಾತು ಕಡತದಲ್ಲಿ ದಾಖಲಾಗುವುದಿಲ್ಲ' ಎಂದರು.
ಈ ಕುರಿತು ಕ್ಷಮೆ ಯಾಚಿಸುವಂತೆ ಮತ್ತು ಅಜಂ ಖಾನ್ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳುವಂತೆ ಲೋಕಸಭೆಯಲ್ಲಿದ್ದ ಎಲ್ಲ ಮಹಿಳಾ ಸಂಸದರೂ ಒಕ್ಕೊರಲಿನಿಂದ ಧ್ವನಿ ಎತ್ತಿದ್ದರು.

"ನಾನು ಹಲವು ವರ್ಷಗಳಿಂದ ರಾಜ್ಯ ಸಭೆ ಮತ್ತು ಲೋಕಸಬೆಯ ಸಂಸದನಾಗಿದ್ದೇನೆ. ಸ್ಪೀಕರ್ ಹುದ್ದೆಯ ಘನತೆ, ಮಹತ್ವ ನನಗೆ ಅರ್ಥವಾಗುತ್ತದೆ. ನಾನು ಯಾರ ಭಾವನೆಯನ್ನೂ ನೋಯಿಸುವ ಉದ್ದೇಶದಿಂದ ಆ ಮಾತನ್ನು ಹೇಳಿರಲಿಲ್ಲ. ಆದರೆ ಅದರಿಂದ ಯಾರದ್ದಾದರೂ ಭಾವನೆಗೆ ನೋವಾಗಿದ್ದರೆ ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ" ಎಂದು ಅಜಂ ಖಾನ್ ಹೇಳಿದರು.
"ಮಹಿಳೆಯರ ಬಗ್ಗೆ ಹೀಗೆ ಅಗೌರವದಿಂದ ಮಾತನಾಡುವುದು ಅಜಂ ಖಾನ್ ಅವರಿಗೆ ಅಭ್ಯಾಸವಾಗಿಹೋಗಿದೆ, ಅವರು ಸಂಸತ್ತಿನ ಒಳಗೂ, ಹೊರಗೂ ಹಾಗೆಯ ಮಾತನಾಡುತ್ತಾರೆ" ಎಂದು ರಮಾದೇವಿ ಹೇಳಿದ್ದರು.
ಅಜಂ ಖಾನ್ ಕ್ಷಮಾಪಣೆಗಾಗಿ ಸಂಸತ್ತಿನಲ್ಲಿ ಎದ್ದಿದ್ದ ಗದ್ದಲದ ಕುರಿತು ಪ್ರತಿಕ್ರಿಯೆ ನೀಡಿದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, "ಪ್ರತಿಯೊಬ್ಬರೂ ಅಜಂ ಖಾನ್ ಅವರ ಕ್ಷಮಾಪಣೆಯನ್ನು ಸ್ವೀಕರಿಸಬೇಕು. ಇಂಥ ಘಟನೆಗಳು ಮತ್ತೊಮ್ಮೆ ನಡೆಯದಂತೆ ಎಚ್ಚರ ವಹಿಸಬೇಕೆಂದು ನಾನು ಸೂಚನೆ ನೀಡುತ್ತಿದ್ದೇನೆ" ಎಂದು ಕಟುವಾಗಿ ಹೇಳಿದರು.
ನಾನು ಯಾವುದೇ ಕಾರಣಕ್ಕೂ ಕ್ಷಮೆ ಯಾಚಿಸುವುದಿಲ್ಲ ಎಂದಿದ್ದ ಅಜಂ ಖಾನ್ ಗೆ, ಕ್ಷಮೆ ಕೇಳದೆ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾದೀತು ಎಂದು ಓಂ ಬಿರ್ಲಾ ಎಚ್ಚರಿಕೆ ನೀಡಿದ್ದರು. ಆದ್ದರಿಂದಲೇ ಅಜಂ ಖಾನ್ ಕ್ಷಮೆ ಕೇಳುವ ನಿರ್ಧಾರಕ್ಕೆ ಬಂದರು.
ಅಜಂ ಖಾನ್ ಹೇಳಿಕೆಯನ್ನು ಶುಕ್ರವಾರ ಸಂಸತ್ತಿನಲ್ಲಿ ಪಕ್ಷಭೇದ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಮರೆತು ಎಲ್ಲ ಮಹಿಳಾ ಸಂಸದರೂ ಒಕ್ಕೊರಲಿನಿಂದ ವಿರೋಧಿಸಿ, ಕ್ಷಮೆಗೆ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications