ಹೋಳಿ ಕಾರ್ಯಕ್ರಮದಿಂದ ಅರವಿಂದ್ ಕೇಜ್ರಿವಾಲ್ ಕೂಡ ದೂರ
ನವದೆಹಲಿ, ಮಾರ್ಚ್ 4: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಇತರೆ ಆಮ್ ಆದ್ಮಿ ಪಕ್ಷದ ನಾಯಕರು ಹೋಳಿ ಹಬ್ಬ ಆಚರಣೆಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.
ಈಗಾಗಲೇ ಕೋಮು ಹಿಂಸಾಚಾರ ತಲೆ ಎತ್ತಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂಸಾಚಾರ ಈಗೀಗ ಶಾಂತಗೊಳ್ಳುತ್ತಿದೆ. ಭಾರತದಲ್ಲಿ ಒಟ್ಟು 28 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವ ಕಾರಣ ಹೋಳಿ ಹಬ್ಬದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 48 ಮಂದಿ ಮೃತಪಟ್ಟಿದ್ದು 300 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪರಿಸ್ಥಿತಿ ಹಿಡಿತದಲ್ಲಿದೆ
ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹಿಂಸಾಚಾರ ಈಗ ಹಿಡಿತಕ್ಕೆ ಬಂದಿದೆ ಎಂದು ದೆಹಲಿ ಪೊಲೀಸ್ ಆಯುಕ್ತ ಎಸ್ಎನ್ ಶ್ರೀವಾಸ್ತವ ತಿಳಿಸಿದ್ದಾರೆ.

ಗಲಭೆ ಪರಿಣಾಮ ಪರೀಕ್ಷೆ ಮುಂದೂಡಿಕೆ
ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಗಲಭೆಯಿಂದಾಗಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಮಾರ್ಚ್ 7ರವರೆಗೆ ಸರ್ಕಾರಿ ಶಾಲೆಗಳನ್ನು ಸ್ಥಗಿತಗೊಳಿಸಲಾಗಿದೆ.

ಎಷ್ಟು ಮಂದಿ ಮೇಲೆ ಎಫ್ಐಆರ್
ದೆಹಲಿ ಪ್ರತಿಭಟನೆಯಲ್ಲಿ 436 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ. 1427 ಮಂದಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಎಂಬುದು ತಿಳಿದುಬಂದಿದೆ.

ಮೋದಿ ಕೂಡ ಹೋಳಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿಲ್ಲ
ಭಾರತದಲ್ಲೂ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಈ ಸಾರಿಯ ಹೋಳಿ ಸಂಭ್ರಮಾಚರಣೆ ಮೇಲೆ ಕರಿನೆರಳು ಬೀರಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾರಿಯ ಹೋಳಿ ಸಂಭ್ರಮದಲ್ಲಿ ಭಾಗಿಯಾಗುತ್ತಿಲ್ಲ.
ಮುಂದಿನ ವಾರ ಹೋಳಿ ಸಂಭ್ರಮಾಚರಣೆ ಇಡೀ ದೇಶಾದ್ಯಂತ ನಡೆಯಲಿದ್ದು, ಕೊರೊನಾ ವೈರಸ್ ಆತಂಕ ಹೋಳಿ ಮೇಲೆ ಬಿದ್ದಿರುವುದರಿಂದ ಹೋಳಿ ಸಂಭ್ರಮಾಚರಣೆಗೆ ಅಡ್ಡಿಯಾಗಬಹುದು ಎನ್ನಲಾಗಿದೆ. ಕೊರೊನಾ ಸೋಂಕು ತಗುಲುವ ಸಾಧ್ಯತೆಯ ಹಿನ್ನೆಲೆಯಲ್ಲಿ ತಜ್ಞರ ಸಲಹೆ ಮೇರೆಗೆ ಮೋದಿ ಹೋಳಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.












Click it and Unblock the Notifications