2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧೆ: ಕೇಜ್ರಿವಾಲ್
ನವದೆಹಲಿ, ಡಿಸೆಂಬರ್ 15: 2022ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ರಾಜ್ಯ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಸ್ಪರ್ಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ನೆರೆಯ ರಾಜ್ಯಗಳಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರವನ್ನು ರಚಿಸುತ್ತದೆ ಮತ್ತು ಹಾಗೆಯೇ ನಮ್ಮ ಪಕ್ಷವು ದೆಹಲಿಯಲ್ಲಿ ನೀಡಿದ ಮಾತು, ಭರವಸೆಗೆ ತಕ್ಕಂತೆ ಜೀವಿಸುತ್ತಿದೆ ಎಂದು ಹೇಳಿದರು.
ಆಮ್ ಆದ್ಮಿ ಪಕ್ಷವು ತನ್ನ ರಾಜಕೀಯ ಹೆಜ್ಜೆಗುರುತನ್ನು ವಿಸ್ತರಿಸಲು ಸತತ ಪ್ರಯತ್ನ ಮಾಡುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಎಎಪಿ ದೆಹಲಿಯಲ್ಲಿ ಮೂರು ಬಾರಿ ಸರ್ಕಾರವನ್ನು ರಚಿಸಿದೆ.

ಇಂದು ಪಂಜಾಬ್ನ ಪ್ರಮುಖ ವಿರೋಧಪಕ್ಷವಾಗಿ ಹೊರಹೊಮ್ಮಿದೆ,ಇದೀಗ 2022ರಲ್ಲಿ ಉತ್ತರ ಪ್ರದೇಶದಲ್ಲಿ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲಿದೆ ಎಂದರು.
ಇಂದು ಉತ್ತರ ಪ್ರದೇಶದಲ್ಲಿ ಆರೋಗ್ಯ ಹಾಗೂ ಶಿಕ್ಷಣಕ್ಕಾಗಿ ದೆಹಲಿಯತ್ತ ಜನರು ಬರುತ್ತಿದ್ದಾರೆ. ಭಾರತದ ಅತಿದೊಡ್ಡ ರಾಜ್ಯವು ಅಭಿವೃದ್ಧಿಹೊಂದಿದ ರಾಜ್ಯವಾಗಲು ಸಾಧ್ಯವಿಲ್ಲವೇ? ಎಂದು ಯೋಗಿ ಆದಿತ್ಯನಾಥ್ ಸರ್ಕಾರವನ್ನು ದೂಷಿಸಿದರು.
ಉತ್ತರ ಪ್ರದೇಶದಲ್ಲಿ ಕೊಳಕು ರಾಜಕೀಯ, ಭ್ರಷ್ಟ ನಾಯಕರು ರಾಜ್ಯದ ಅಭಿವೃದ್ಧಿಯನ್ನು ತಡೆಯುತ್ತಿದ್ದಾರೆ. ಆದರೆ ಪ್ರತಿ ಸರ್ಕಾರವು ಭ್ರಷ್ಟಾಚಾರದ ಹೊಸ ದಾಖಲೆಯನ್ನು ಸ್ಥಾಪಿಸಿದೆ ಆದರೆ ಭ್ರಷ್ಟಾಚಾರ ಕಡಿಮೆ ಮಾಡುವ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಹೇಳಿದರು.
ದೆಹಲಿಯಲ್ಲಿ ಆಸ್ಪತ್ರೆಗಳು ಅಭಿವೃದ್ಧಿ ಹೊಂದಿವೆ, ಜನರಿಗೆ 24 ಗಂಟೆಯೂ ವಿದ್ಯುತ್ ಸಿಗುತ್ತಿದೆ ಆದರೆ ಉತ್ತರ ಪ್ರದೇಶದಲ್ಲಿ ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದರು.












Click it and Unblock the Notifications