ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸಿಹಿ ಸುದ್ದಿ: ವಿಜಯಪುರ ರೈಲು ಮುಂದಿನ 2 ತಿಂಗಳು ವಿಸ್ತರಣೆ
ಬೆಂಗಳೂರು: ಬೆಂಗಳೂರಿನ ಯಶವಂತಪುರದಿಂದ ವಿಜಯಪುರ ನೇರ ರೈಲು ಸೇವೆಗೆ ಇತ್ತೀಚೆಗೆ ಅನುಮೋದನೆ ನೀಡಿ ಇದೇ ಜೂನ್ 1ರಿಂದ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಮೊತ್ತೊಂದು ಸಿಹಿ ಸುದ್ದಿ ನೀಡಿರುವ ನೈಋತ್ಯ ರೈಲ್ವೆ ಅಧಿಕಾರಿಗಳು ಈ ರೈಲಿನ ಸೇವೆಯನ್ನು ಮುಂದಿನ ಎರಡು ತಿಂಗಳ ಕಾಲ ವಿಸ್ತರಣೆ ಮಾಡಿದ್ದಾರೆ. ಇದರಿಂದ ವಿವಿಧ ಜಿಲ್ಲೆಗಳ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲ ಸಿಗಲಿದೆ.
ಬೆಂಗಳೂರು-ಉತ್ತರ ಕರ್ನಾಟಕದ ಯಾವುದೇ ರೈಲುಗಳು ಸದಾ ಪ್ರಯಾಣಿಕರಿಂದ ತುಂಬಿರುತ್ತವೆ. ಈ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ಯಶವಂತಪುರ-ವಿಜಯಪುರ ನಡುವೆ ಸಂಚರಿಸುವ ದ್ವಿ-ಸಾಪ್ತಾಹಿಕ (ವಾರಕ್ಕೆ ಎರಡು ದಿನ) ವಿಶೇಷ ಎಕ್ಸ್ ಪ್ರೆಸ್ ರೈಲುಗಳ (06577/06578) ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ.

ಆಗಸ್ಟ್, ಸೆಪ್ಟಂಬರ್ವರೆಗೆ ವಿಸ್ತರಣೆ, ಈ ದಿನ ಸೇವೆ ಇರಲ್ಲ!
ಈ ಮೊದಲು ಯಶವಂತಪುರ-ವಿಜಯಪುರ ಎಕ್ಸ್ಪ್ರೆಸ್ ನೇರ ರೈಲು (06577) ಪ್ರತಿ ಶನಿವಾರ ಮತ್ತು ಸೋಮವಾರಗಳಂದು ಕಾರ್ಯಾಚರಣೆಗೆ ನಿಗದಿ ಮಾಡಲಾಗಿದೆ. ಜೂನ್ 1ರಿಂದ ಜೂನ್ 29ರವರೆಗೆ ಸಂಚಾರ ಸೇವೆಗೆ ನೀಡುವುದಿತ್ತು. ಅದನ್ನೀಗ ಜುಲೈ 4 ರಿಂದ ಆಗಸ್ಟ್ 31ರವರೆಗೆ ಬರೋಬ್ಬರಿ ಎರಡು ತಿಂಗಳು ವಿಸ್ತರಣೆ (ಆಗಸ್ಟ್ 1 ಮತ್ತು 3 ರಂದು ಸೇವೆ ಇರುವುದಿಲ್ಲ) ಮಾಡಿ ರೈಲ್ವೆ ಅಧಿಕಾರಿಗಳು ಆದೇಶಿಸಿದ್ದಾರೆ.
ಇನ್ನೂ ಪ್ರತಿ ಭಾನುವಾರ ಮತ್ತು ಮಂಗಳವಾರಗಳಂದು ವಿಜಯಪುರ ನಿಲ್ದಾಣದಿಂದ ಹೊರಡಲಿದ್ದ ವಿಜಯಪುರ-ಯಶವಂತಪುರ ವಿಶೇಶ ರೈಲು (06578) ಸಂಚಾರ ಅವಧಿಯನ್ನು ಈ ಹಿಂದೆ ಜೂನ್ 30ರವರೆಗೆ ನಿಗದಿಪಡಿಸಲಾಗಿತ್ತು. ಅದನ್ನೀಗ ಜುಲೈ 5 ರಿಂದ ಸೆಪ್ಟೆಂಬರ್ 1 ರವರೆಗೆ ಸಂಚರಿಸುವಂತೆ (ಆಗಸ್ಟ್ 2 ಮತ್ತು 4 ರಂದು ಸೇವೆ ಇರುವುದಿಲ್ಲ) ಸೇವಾ ಅವಧಿಯನ್ನು ವಿಸ್ತರಿಸಲಾಗಿದೆ.
ವಿಜಯಪುರಕ್ಕೆ ಶಾಶ್ವತ ರೈಲಿಗೆ ನಾಯಕ ಒತ್ತಾಯ
ಯಶವಂತಪುರ-ವಿಜಯಪುರ ಸದರಿ ರೈಲುಗಳ ವೇಳಾಪಟ್ಟಿ, ನಿಲುಗಡೆ ನಿಲ್ದಾಣಗಳು, ಸಂಚಾರ ಮಾರ್ಗದಲ್ಲಿ ಮತ್ತು ಬೋಗಿಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕೇವಲ ಸೇವಾವಧಿ ಮಾತ್ರವೇ ವಿಸ್ತರಿಸಲಾಗಿದೆ.
ಈ ರೈಲು ಹುಬ್ಬಳ್ಳಿ ಜಂಕ್ಷನ್ಗೆ ತೆರಳದೇ ಹುಬ್ಬಳ್ಳಿ, ಗದಗ ಬೈಪಾಸ್ ಮಾರ್ಗವಾಗಿ ಸಾಗಲಿದೆ. ಇದೇ ರೈಲನ್ನು ಮುಂದಿನ ದಿನಗಳಲ್ಲಿ ಶಾಸ್ವತವಾಗಿ ಈ ಮಾರ್ಗದಲ್ಲಿ ಸಂಚಾರಕ್ಕೆ ಅನುಮೋದನೆ ನೀಡುವಂತೆ ಕೇಂದ್ರ ರೈಲ್ವೆ ಇಲಾಖೆ ರಾಜ್ಯದ ನಾಯಕರು ಆಗ್ರಹಿಸಿದ್ದಾರೆ. ಆದಷ್ಟು ಶೀಘ್ರವೇ ಆ ಬೇಡಿಕೆ ಸಹ ನೇರವೇರುವ ಸಾಧ್ಯತೆಗಳು ಇವೆ.
ಮಾರ್ಗ, ನಿಲುಗಡೆ ನಿಲ್ದಾಣಗಳು ಯಾವುವು?
ಈ ನೇರ ರೈಲು ಎರಡು ಕಡೆ ಸಂಚರದ ವೇಳೆ ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್ಎಂಎಂ ಹಾವೇರಿ, ಗದಗ ಬೈಪಾಸ್, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಗೇವಾಡಿ ರಸ್ತೆ ಮಾರ್ಗದಲ್ಲಿ ಸಾಗಲಿದ್ದು, ಆಯಾ ನಿಲ್ದಾಣಗಳಲ್ಲಿ ನಿಲುಗಡೆ ನೀಡಲಿದೆ.














Click it and Unblock the Notifications