ಬೆಂಗಳೂರಿನ ರಸ್ತೆ ಅಗೆಯಲು ಇನ್ಮುಂದೆ ಅನುಮತಿ ಕಡ್ಡಾಯ; ಜಿಐಎಸ್ ಡ್ಯಾಶ್ಬೋರ್ಡ್ ರಚನೆಗೆ ಸಚಿವ ಕೃಷ್ಣಬೈರೇಗೌಡ ಸೂಚನೆ
ಬೆಂಗಳೂರು: "ನಗರದ ಒಂದು ಇಲಾಖೆ ರಸ್ತೆ ಅಭಿವೃದ್ಧಿ ಕಾಮಗಾರಿ ಮುಗಿಸಿದ ಕೆಲವೇ ತಿಂಗಳಲ್ಲಿ ಮತ್ತೊಂದು ಇಲಾಖೆ ಬಂದು ಅದೇ ರಸ್ತೆಯನ್ನು ಅಗೆಯುತ್ತದೆ. ಇದರಿಂದ ಸಾರ್ವಜನಿಕರ ಹಣ ಪೋಲಾಗುವುದಲ್ಲದೆ, ಜನರಿಗೂ ತೊಂದರೆಯಾಗುತ್ತಿದೆ. ಇಂತಹ ಇಲಾಖೆಗಳ ನಡುವಿನ ಹಳೆ ಚಾಳಿ ಇನ್ಮುಂದೆ ನಡೆಯಲ್ಲ" ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳ ಕಾರ್ಯಕಾರಿ ಸಮಿತಿಯ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ, ಜಲಮಂಡಳಿ, ಬಿಎಂಟಿಸಿ, ಮೆಟ್ರೋ, ಕೆಪಿಟಿಸಿಎಲ್, ಬೆಸ್ಕಾಂ, ಕೆ-ರೈಡ್ ಸೇರಿದಂತೆ ಬೆಂಗಳೂರಿನ ವಿವಿಧ ಮೂಲಸೌಕರ್ಯ ಇಲಾಖೆಗಳು ತಮ್ಮದೇ ಲೋಕದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಮನೋಭಾವದಿಂದ ಹೊರಬಂದು ಒಂದೇ ತಂಡದಂತೆ ಕೆಲಸ ಮಾಡಬೇಕು. ಈ ಸಮನ್ವಯದ ಕೊರತೆಗೆ ಶಾಶ್ವತ ಪರಿಹಾರ ನೀಡಲೆಂದೇ ಮುಖ್ಯಮಂತ್ರಿಗಳು 'ಜಿಬಿಎ' ರಚಿಸಿದ್ದು, ಇನ್ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಈ ಜಂಟಿ ಸಮಿತಿಯ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದರು.
ಜಿಐಎಸ್ ಆಧಾರಿತ ಡ್ಯಾಶ್ಬೋರ್ಡ್ ರಚನೆ
ನಗರದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ಮತ್ತು ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಸಚಿವರು ಮಹತ್ವದ ತಾಂತ್ರಿಕ ನಿರ್ದೇಶನ ನೀಡಿದ್ದಾರೆ. ನಗರದ ಎಲ್ಲ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳು, ರಸ್ತೆಗಳ ಮಾಹಿತಿ, ಬೀದಿ ದೀಪಗಳು, ಜಲಮಂಡಳಿ ಮೂಲಸೌಕರ್ಯ ಹಾಗೂ ಪ್ರಗತಿಯಲ್ಲಿರುವ ಯೋಜನೆಗಳ ಕಂಪ್ಲೀಟ್ ಡೇಟಾವನ್ನು ಒಳಗೊಂಡ ಜಿಐಎಸ್ ಆಧಾರಿತ ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ. ಈ ಡಿಜಿಟಲ್ ವೇದಿಕೆಯ ಮೂಲಕ ಸಾರ್ವಜನಿಕರು ಹಾಗೂ ಅಧಿಕಾರಿಗಳು ಬೆಂಗಳೂರಿನ ಎಲ್ಲ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಮಾಹಿತಿ ಒಂದೇ ಸ್ಥಳದಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದರು.
ಬೆಂಗಳೂರು ಪಾದಾಚಾರಿ ಒತ್ತುವರಿದಾರರಿಗೆ ಸಂಕಷ್ಟ ತೆರವಿಗೆ ಸಚಿವ ಕೃಷ್ಣ ಬೈರೇಗೌಡ ಖಡಕ್ ಎಚ್ಚರಿಕೆ
ಪಾದಚಾರಿಗಳ ಸಾವಿಗೆ ಯಾರು ಹೊಣೆ?
ಫುಟ್ಪಾತ್ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯಿಂದ ಬಡ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಬೆಂಗಳೂರಲ್ಲಿ ಪಾದಚಾರಿ ಮಾರ್ಗ ಒತ್ತುವರಿಯಿಂದಾಗಿ ನಡೆಯಲು ಜಾಗವಿಲ್ಲದೆ, ರಸ್ತೆಗೆ ಇಳಿದು ಅಪಘಾತಕ್ಕೀಡಾಗಿ ಕನಿಷ್ಠ 300 ಜನ ಸಾವನ್ನಪ್ಪುತ್ತಿದ್ದಾರೆ. ಇದು ಸರಿನಾ? ಇವರ ಸಾವಿಗೆ ಯಾರು ಹೊಣೆ? ವಯೋವೃದ್ಧರು ಪಡುವ ಪಡಿಪಾಟಲು ನಿಮಗೇನು ಗೊತ್ತು?" ಎಂದು ಬೇಸರ ಹೊರಹಾಕಿದರು. ನಗರದ ಕೇವಲ ಶೇ.20 ರಷ್ಟು ಪ್ರಮುಖ ರಸ್ತೆಗಳಲ್ಲಿ ಮಾತ್ರ ಒತ್ತುವರಿ ತೆರವು ಮಾಡಲಾಗುತ್ತಿದೆ. ಉಳಿದ ರಸ್ತೆಗಳಲ್ಲಿ ರಸ್ತೆಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳಲು ಸ್ವತಂತ್ರರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ಉನ್ನತ ಮಟ್ಟದ ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ ಮಹೇಶ್ವರ್ ರಾವ್, ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಬಿಡಿಎ ಆಯುಕ್ತ ಮಣಿವಣ್ಣನ್, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸೇರಿದಂತೆ ಜಲಮಂಡಳಿ, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications